ಕೇಣಿ ಬಂದರಿನಿಂದ ಮೀನುಗಾರಿಕೆಗೆ ಸಮಸ್ಯೆಯಾಗದು: ಸಚಿವ ವೈದ್ಯ

| Published : Aug 16 2025, 12:00 AM IST

ಕೇಣಿ ಬಂದರಿನಿಂದ ಮೀನುಗಾರಿಕೆಗೆ ಸಮಸ್ಯೆಯಾಗದು: ಸಚಿವ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂಕೋಲಾ ತಾಲೂಕಿನ ಕೇಣಿಯಲ್ಲಿ ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ ತೊಂದರೆ ಉಂಟಾಗಲಾರದು.

ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ ತೊಂದರೆ ಉಂಟಾಗಲಾರದು. ಅಲ್ಲಿನ ಮೀನುಗಾರರಿಗರೆ ತೊಂದರೆ ನೀಡಿ ಬಂದರು ನಿರ್ಮಿಸುವುದಿಲ್ಲ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡ ತರುವಾಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಣಿಯಲ್ಲಿ ಬಂದರಿಗಾಗಿ 16 ಮನೆಗಳು ರಸ್ತೆಗಾಗಿ ಮಾತ್ರ ತೆರವುಗೊಳ್ಳಲಿವೆ. ಅವರಿಗೆ ಕಂಪನಿಯೇ ಪರಿಹಾರವನ್ನು ನೀಡುವುದಲ್ಲದೆ, ಮೀನುಗಾರಿಕೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬಿಜೆಪಿ ಸರ್ಕಾರವೇ ಈ ಬಂದರನ್ನು ಮಾಡಲು ನಿರ್ಧರಿಸಿದ್ದು ನಮ್ಮನ್ನು ದೂರಿವುದು ಸರಿಯಲ್ಲ ಎಂದರು.

ಜಿಲ್ಲೆಯ ಕರಾವಳಿ ಭಾಗದಲ್ಲಿ ಚಿರೇಕಲ್ಲಿನ ಸಮಸ್ಯೆ ಬಗೆಹರಿಸಲು ವಿಧಾನಸಭೆಯ ಸ್ಪೀಕರ್ ಅವರೊಂದಿಗೆ ಈಗಾಗಲೇ ಈ ಭಾಗದ ಶಾಸಕರ ಸಭೆ ನಡೆದಿದ್ದು ಸಮಸ್ಯೆ ಶೀಘ್ರವೇ ಪರಿಹಾರವಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ಚಿರೇಕಲ್ಲು ನೀತಿಯನ್ನು ಜಾರಿ ಮಾಡಲಾಗುವುದು. ಜಿಲ್ಲೆಯ ಕರಾವಳಿ ಭಾಗದಲ್ಲಿ ಗೇರು ನಿಗಮಕ್ಕೆ ಸೇರಿದ ಜಮೀನು ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಚಿರೇಕಲ್ಲುಗಳನ್ನು ತೆಗೆಯಲು ಅವಕಾಶ ನೀಡಲಾಗುವುದಿಲ್ಲ. ಆದರೆ ಖಾಸಗಿ ಜಮೀನಿನಲ್ಲಿ ತೆಗೆಯಲು ಅವಕಾಶ ನೀಡಲಾಗುವುದು ಎಂದೂ ತಿಳಿಸಿದರು.

ಭಟ್ಕಳವನ್ನು ನರಗರಸಭೆಯನ್ನಾಗಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಅಲ್ಲಿ ಪಕ್ಕದ ಹಳ್ಳಿಗಳನ್ನು ಸೇರಿಸಲಾಗಿದೆಯೇ ಹೊರತು ಯಾವುದೇ ಧರ್ಮವನ್ನು ನೋಡಿ ಅಲ್ಲ. ಶಿರಾಲಿಯನ್ನು ಭಟ್ಕಳ ನಗರದಲ್ಲಿ ಸೇರಿಸಬೇಕು ಎಂಬ ಒತ್ತಾಯವಿದ್ದರೆ ಅದನ್ನು ಮಾಡುತ್ತೇವೆ. ಈಗ ವಿರೋಧಿಸುತ್ತಿರುವವರು ಐದು ವರ್ಷ ಭಟ್ಕಳದಲ್ಲಿ ಶಾಸಕರಾಗಿದ್ದವರು. ಆಗಲೇ ಇದನ್ನು ಮಾಡಬಹುದಿತ್ತು. ಈಗ ವಿರೋಧ ಮಾಡುತ್ತಿದ್ದಾರೆ. ಭಟ್ಕಳದ ಸಮಗ್ರ ಅಭಿವೃದ್ಧಿಗಾಗಿ ನಗರಸಭೆ ಆಗಲೇಬೇಕು ಎಂದು ಹೇಳಿದರು.

ಜಿಲ್ಲೆಯ ಕಾಳಿ ಹಾಗೂ ಶರಾವತಿ ನದಿಗಳಲ್ಲಿ ಬೋಟ್ ಪ್ರವಾಸೋದ್ಯಮ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಶರಾವತಿ ಪಂಪ್ಡ್ ಯೋಜನೆಗೆ ಕುರಿತಾದ ವಿರೋಧವನ್ನು ಪ್ರತಿಕ್ರಿಯಿಸಿ ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಸಾರ್ವಜನಿಕರಿಗೆ ಇದರಿಂದ ಯಾವುದೇ ತೊಂದರೆ ಆಗಬಾರದು ಎಂದು ತಿಳಿಸಲಾಗಿದೆ ಎಂದರು.