ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಪ್ರಪಂಚದಲ್ಲಿ ಅತಿ ದೊಡ್ಡದಾದ ಚರಕವನ್ನು ನಿರ್ಮಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು. ತಾಲೂಕಿನ ಬದನವಾಡು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಖಾದಿ ಮಂಡಳಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿದ ನಂತರ ಅವರು ಮಾತನಾಡಿದರು. ಎ, ಈ ಇತಿಹಾಸವನ್ನು ಸಂರಕ್ಷಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವ ಸಲುವಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ 40 ಕೋಟಿ ರು. ಗಳನ್ನು ಮಂಜೂರು ಮಾಡಿದೆ, ಸುಮಾರು 5.6 ಎಕರೆ ಪ್ರದೇಶದಲ್ಲಿ, ಇಲ್ಲಿನ ಇತಿಹಾಸವನ್ನು ಸಂರಕ್ಷಿಸುವ ಸಲುವಾಗಿ ಪಾರಂಪರಿಕ ಕಟ್ಟಡದ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗುವುದು, ಅಲ್ಲದೆ ಗುಜರಾತ್ ನಲ್ಲಿರುವ ಗಾಂಧೀಜಿಯವರ ಶಬರಮತಿ ಆಶ್ರಮದ ಮಾದರಿಯಲ್ಲಿ ವಸ್ತು ಸಂಗ್ರಹಾಲಯ, ಯೋಗ ಕೇಂದ್ರ, ಗೋಶಾಲೆ, ಗುಡಿ ಕೈಗಾರಿಕೆಗಳನ್ನು ನಿರ್ಮಿಸಲಾಗುವುದು, ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಜನರನ್ನು ಆಕರ್ಷಿಸುವ ಸಲುವಾಗಿ ಪ್ರಪಂಚದಲ್ಲೇ ಅತಿ ದೊಡ್ಡ ಚರಕವನ್ನು ನಿರ್ಮಿಸಲಾಗುವುದು.ಖಾದಿ ಮಂಡಳಿ ಸಿಇಒ ನಟೇಶ್ ಮಾತನಾಡಿ, ಶಾಸಕರು ಬದನವಾಳು ಗ್ರಾಮದ ಖಾದಿ ಕೇಂದ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಂಪೂರ್ಣವಾದ ಆಸಕ್ತಿ ತೋರಿದ್ದಾರೆ, 1927ರಲ್ಲಿ ಈ ಕಾದಿ ಕೇಂದ್ರವನ್ನು ಗಾಂಧೀಜಿಯವರು ಸ್ಥಾಪನೆ ಮಾಡಿದ್ದು, ಮುಂದಿನ ವರ್ಷದ ಶತಮಾನೋತ್ಸವದ ವೇಳೆಗೆ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಉದ್ಘಾಟನೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.
ಈ ಖಾದಿ ಕೇಂದ್ರದಲ್ಲಿ ಗಾಂಧೀಜಿಯವರು ನಮ್ಮ ಜೊತೆಗೆ ಇರುವಂತೆ ಡಿಜಿಟಲ್ ಭಾವಚಿತ್ರ, ಗಾಂಧೀಜಿಯವರ ಸತ್ಯಾಗ್ರಹದ ಹೋರಾಟದ ವಿಡಿಯೋ ತುಣುಕುಗಳನ್ನು ಒಳಗೊಂಡ ಡಿಜಿಟಲ್ ಪರದೆಯನ್ನು ನಿರ್ಮಿಸಿ ಗಾಂಧೀಜಿಯವರ ಹೋರಾಟದ ಇತಿಹಾಸವನ್ನು ತಿಳಿಸಲಾಗುವುದು ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಸ್ಮಿತಾರಾಮು, ಖಾದಿ ಮಂಡಳಿಯ ಶಬೀರ್, ಕೆಆರ್ ಐಡಿಎಲ್ ಎಇಇ ಶರಣ್, ಎಇ ಲೋಕೇಶ್, ಮುಖಂಡರಾದ ಶ್ರೀನಿವಾಸಮೂರ್ತಿ, ಸೋಮು, ವಿಜಯಕುಮಾರ್, ಹೆಗ್ಗಡಹಳ್ಳಿ ಮಹೇಶ್ ಇದ್ದರು.