ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಫಸಲ್ ಬಿಮಾ ಯೋಜನೆಯ ಪರಿಹಾರ ಬಿಡುಗಡೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷತನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅನಗತ್ಯ ಹಸ್ತಕ್ಷೇಪ ಕಾರಣ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಶಯ ವ್ಯಕ್ತಪಡಿಸಿದರು.ಅವರು ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಫಸಲ್ ಬಿಮಾ ಯೋಜನೆಯ ಪರಿಹಾ ಧನ ಕುರಿತಾದ ರಾಜ್ಯ ಸರ್ಕಾರದ ಅಧಿಕಾರಿಗಳು ಬಿಮಾ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಸಬೇಕು, ಅದು ಆಗಿಲ್ಲ ಅಷ್ಟೇ ಅಲ್ಲ ಅಧಿಕಾರಿಗಳು ಬಿಮಾ ಯೋಜನೆಯತ್ತ ನಿರ್ಲಕ್ಷವಹಿಸುತ್ತಿರುವದು ರೈತರಿಗೆ ಬಿಮಾ ಪರಿಹಾರ ಸಿಗುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವೇ ಬಿಮಾ ಕಂಪನಿಗಳ ನೇಮಕಾತಿಯ ಅಧಿಕಾರ ಹೊಂದಿದ್ದು, ಅವುಗಳ ಮೇಲೆ ಹಿಡಿತಹೊಂದಿದೆ. ಅದನ್ನು ಬಿಗಿಗೊಳಿಸಿ ರೈತರಿಗೆ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.ಬಿಮಾ ಕುರಿತಾಗಿ ಸತತ ಅಪಪ್ರಚಾರವೇ ಮೂಲ ಕಾರಣ:
ಸಚಿವ ಖಂಡ್ರೆ ಅವರು ಮೊದಲಿನಿಂದಲೂ ಈ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅವರಿಗೆ ಹೊಟ್ಟೆ ಕಿಚ್ಚು. ರಾಜ್ಯದಲ್ಲಿ ಬರಗಾಲ ಘೋಷಿಸಿ 5 ತಿಂಗಳಾಯಿತು ರೈತರಿಗೆ ನಯಾ ಪೈಸೆ ಬಂದಿಲ್ಲ ಇದರ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದದ್ದಾಗಿದೆ ವಿನಹ ಕೇಂದ್ರ ಸರ್ಕಾರದ್ದು ಅಲ್ಲ ಎಂದು ಸ್ಪಷ್ಟಪಡಿಸಿದರು.ಗೊಂದಲ ಬಗೆಹರಿದಿದೆ, ನಾನು 2ಲಕ್ಷ ಮತಗಳಿಂದ ಗೆಲ್ತೇನೆ:
ಜಿಲ್ಲೆಯ ಕೆಲ ಶಾಸಕರು ಹಾಗೂ ನನ್ನ ಮಧ್ಯದ ಭಿನ್ನಾಭಿಪ್ರಾಯ, ಗೊಂದಲವನ್ನು ಪಕ್ಷದ ಪ್ರಮುಖರು ಬಹುತೇಕ ಬಗೆಹರಿಸಿದ್ದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರ ಸಹಕಾರದಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸುತ್ತೇನೆ ಎಂದು ವ್ಯಕ್ತಪಡಿಸಿದರು.ಬಿಜೆಪಿ ಶಿಸ್ತು ಬದ್ಧ ಪಕ್ಷ. ಏನೇ ಸಮಸ್ಯೆಗಳಿದ್ದರೂ ಬಗೆಹರಿಯುತ್ತವೆ. ನೂತನ ಜಿಲ್ಲಾಧ್ಯಕ್ಷರು ಅನುಭವಸ್ಥರು ಯಾರ ಮುಲಾಜಿಲ್ಲದೆ ಮಾತನಾಡುವವರಿದ್ದಾರೆ. ಹೀಗಾಗಿ ಎಲ್ಲವು ಪಕ್ಷದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು ಸಂಧಾನವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಕಳೆದ 50 ವರ್ಷಗಳಿಂದ ಬಡವರಿಗೆ ಆಸೆ ಆಮೀಷವೊಡ್ಡಿ ಮತಗಳನ್ನು ಪಡೆದಿದ್ದಾರೆ ಈಗ ಜನರ ಒಲವು ಕಡಿಮೆಯಾದ ಮೇಲೆ ಜನರಲ್ಲಿ ಭಯ ಹುಟ್ಟಿಸಿ ಮತ್ತೆ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಚುನಾವಣೆ ನಡೆಯಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷದ ಡಿ.ಕೆ ಸುರೇಶ ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಸಂವಿದಾನದ ಮೇಲೆ ವಿಶ್ವಾಸ ಇಲ್ಲ ಹೀಗಾಗಿ ದೇಶ ಒಡೆಯುವಂತಹ ಮಾತುಗಳನ್ನಾಡುತ್ತಿದ್ದಾರೆ, ಈಗಾಗಲೇ ಅವರ ವಿರುದ್ದ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪ್ರಕರಣ ದಾಖಲಾಗಿವೆ ಲೋಕಸಭೆಯಲ್ಲಿಯೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ ಎಂದರು.
ಕಾಂಗ್ರೆಸ್ನ ಇಂಡಿಯಾ ಭಾಗವಾದ ಮಮತಾ ಬ್ಯಾನರ್ಜಿ ಖುದ್ದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 40 ಸ್ಥಾನ ಗೆಲ್ಲುವುದು ಕಷ್ಟ ಎಂದು ಹೇಳಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮ ಇತಿಮಿತಿ ಕಳೆದುಕೊಂಡು ಮಾತಾಡುತ್ತಿದ್ದಾರೆ ಎಂದು ಸಚಿವ ಖೂಬಾ ವ್ಯಂಗ್ಯವಾಡಿದರು.ಟಿಕೆಟ್ ಫಿಕ್ಸ್ ಇಲ್ಲ, ಪ್ರತಿ ಕಾರ್ಯಕರ್ತ ಆಕಾಂಕ್ಷಿ ಆಗಬಹುದು:
ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವದು ಬಿಡುವದು ಹೈಕಮಾಂಡ್ ನಿರ್ಧರಿಸುತ್ತದೆ. ಅಷ್ಟಕ್ಕೂ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಟಿಕೆಟ್ ಕೇಳುವ ಅಧಿಕಾರ ಹೊಂದಿದ್ದು ಇದಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೇ ಈ ಬಾರಿಯ ಟಿಕೆಟ್ ಎಂಬ ವಾದವನ್ನು ಪರೋಕ್ಷವಾಗಿ ತಳ್ಳಿಹಾಕಿದಂತಾಯಿತು.ಈ ಸಂದರ್ಭದಲ್ಲಿ ಎಂಎಲ್ಸಿ ರಘುನಾಥರಾವ್ ಮಲ್ಕಾಪೂರೆ, ವಿಜಯಕುಮಾರ ಪಾಟೀಲ್ ಗಾದಗಿ, ಬಸವರಾಜ ಪವಾರ, ಶ್ರೀನಿವಾಸ ಚೌಧರಿ ಇದ್ದರು.