- ಯಳಂದೂರು ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಬಾಬಾ ಸಾಹೇಬರ ಚಿತ್ರಕ್ಕೆ ಅಪಮಾನ । ಸ್ಥಳಕ್ಕೆ ಶಾಸಕ ಎಆರ್‌ಕೆ, ಎಸ್‌ಪಿ ಭೇಟಿ ಪರಿಶೀಲನೆ

---

ಕನ್ನಡಪ್ರಭ ವಾರ್ತೆ ಯಳಂದೂರು

ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಯುವಕನೋರ್ವ ಅಂಬೇಡ್ಕರ್‌ ಭಾವಚಿತ್ರಕ್ಕೆ ಸಗಣಿ ಎರಚಿ ಅಪಮಾನಗೊಳಿಸಿ ತೀವ್ರವಾಗಿ ಪೆಟ್ಟುತಿಂದ ಘಟನೆ ಮಾಸುವ ಮುನ್ನವೇ ಯಳಂದೂರು ತಾಲೂಕಿನಲ್ಲಿ ಮತ್ತೊಂದು ಘಟನೆ ನಡೆದಿದೆ.

ಇಲ್ಲಿನ ಹೊಂಗನೂರು ಗ್ರಾಮದಲ್ಲಿ ಗುರುವಾರ ತಡರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನಗೊಳಿಸಿದ್ದಾರೆ. ಪರಿಣಾಮ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನಾ ಸ್ಥಳಕ್ಕೆಶಾಸಕ ಎ.ಆರ್‌. ಕೃಷ್ಣಮೂರ್ತಿ ಭೇಟಿ ನೀಡಿ ಆರೋಪಿಯ ಬಂಧನಕ್ಕೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.


ಜೂ.14ರಂದು ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಚಂದ್ರು ಎಂಬಾತ ಅಂಬೇಡ್ಕರ್‌ ನಾಮಫಲಕಕ್ಕೆ ಸಗಣಿ ಬಳಿದು ಅಲಂಕಾರಿಕಾ ದೀಪಗಳನ್ನು ಧ್ವಂಸ ಮಾಡಿ ಜನರ ಬಳಿ ಸಿಕ್ಕಿ ಹಾಕಿಕೊಂಡಿದ್ದ. ಪರಿಣಾಮ ಜನರು ಚಪ್ಪಲಿ ಹಾರ ಹಾಕಿ ರಕ್ತ ಬರುವ ತನಕ ಥಳಿಸಿದ್ದರು. ಈತ ಪ್ರಸ್ತುತ ಚಾಮರಾಜನಗರದ ಸಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.ಗ್ರಾಮದ ದೊಡ್ಡ ಯಜಮಾನ ಈರಣ್ಣ ಎಂಬುವರು ಮಾತನಾಡಿ, ನಮ್ಮದು ದೊಡ್ಡ ಗ್ರಾಮವಾಗಿದೆ. ಮಸಣಾಪುರ ಗ್ರಾಮದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಅವರ ಬೆಂಬಲಕ್ಕೆ ನಿಂತಿತ್ತು. ಈ ಹಿನ್ನೆಲೆಯಲ್ಲೇ ಈ ಘಟನೆ ನಡೆಸಿರಬಹುದು ಎಂಬ ಶಂಕೆ ಇದೆ. ಈ ಭಾವಚಿತ್ರದಲ್ಲಿ ಬಸವಣ್ಣ, ಬುದ್ಧರ ಚಿತ್ರಗಳು ಇವೆ. ಇವುಗಳನ್ನು ಬಿಟ್ಟು ಬಾಬಾ ಸಾಹೇಬರ ಭಾವಚಿತ್ರಕ್ಕೆ ಸಗಣಿ ಬಳಿದಿರುವುದು ವಿಕೃತ ಮನಸ್ಸಿನ ವ್ಯಕ್ತಿಗಳೇ ಆಗಿದ್ದಾರೆ. ಪೊಲೀಸರು ಇಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಕ್ರಮ ವಹಿಸಬೇಕು ಎಂದು ನಮ್ಮ ಗ್ರಾಮದವರ ಆಗ್ರಹವಾಗಿದೆ ಎಂದರು.

---1906ವೈಎಲ್‌ಡಿಪಿ01ಹೊಂಗನೂರು ಗ್ರಾಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಸಗಣಿ ಬಳಿದಿರುವುದು.1906ವೈಎಲ್‌ಡಿಪಿ02

ಘಟನಾ ಸ್ಥಳಕ್ಕೆ ಶಾಸಕ ಎ.ಆರ್‌. ಕೃಷ್ಣಮೂರ್ತಿ ಭೇಟಿ.