ಶೃಂಗೇರಿಸೇತುವೆ ಎರಡು ಕಡೆಗಳಲ್ಲಿ ಕೈಪಿಡಿಗಳು ಶಿಥಿಲಗೊಂಡಿದೆ. ಕೆಲವೆಡೆ ಕೈಪಿಡಿ, ತಡೆಗೋಡೆಯಿಲ್ಲ. ಅಪಾಯಕಾರಿ ತಿರುವು ,ಸುಣ್ಣ ಬಣ್ಣ ಕಂಡಿಲ್ಲ. ರಸ್ತೆಯೂ ಕುಸಿಯುತ್ತಿದೆ. ಕೆಲವೆಡೆ ಬಿರುಕು ಬಿಟ್ಟಿದೆ. ಸೇತುವೆ ನಿರ್ಮಾಣಗೊಂಡು ಸುಮಾರು 100 ವರ್ಷಗಳು ಸಮೀಪಿಸುತ್ತಿದ್ದರೂ ಈವರೆಗೂ ದುರಸ್ತಿ ಕಂಡಿಲ್ಲ. ಹಂತ ಹಂತವಾಗಿ ಶಿಥಿಲವಾಗುತ್ತಾ ನಿತ್ಯ ಸಂಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ.

- ಸೇತುವೆ ಶತಮಾನೋತ್ಸವದಂಚಲ್ಲಿದ್ದರೂ ದುರಸ್ತಿ ಇಲ್ಲ । ಸಂಚಾರಿಗಳ ಪಾಲಿಗೆ ಮೃತ್ಯುಕೂಪ । ನಿರ್ಲಕ್ಷಕ್ಕೆ ಜ್ವಲಂತ ಸಾಕ್ಷಿ

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ ಶೃಂಗೇರಿ

ಸೇತುವೆ ಎರಡು ಕಡೆಗಳಲ್ಲಿ ಕೈಪಿಡಿಗಳು ಶಿಥಿಲಗೊಂಡಿದೆ. ಕೆಲವೆಡೆ ಕೈಪಿಡಿ, ತಡೆಗೋಡೆಯಿಲ್ಲ. ಅಪಾಯಕಾರಿ ತಿರುವು ,ಸುಣ್ಣ ಬಣ್ಣ ಕಂಡಿಲ್ಲ. ರಸ್ತೆಯೂ ಕುಸಿಯುತ್ತಿದೆ. ಕೆಲವೆಡೆ ಬಿರುಕು ಬಿಟ್ಟಿದೆ. ಸೇತುವೆ ನಿರ್ಮಾಣಗೊಂಡು ಸುಮಾರು 100 ವರ್ಷಗಳು ಸಮೀಪಿಸುತ್ತಿದ್ದರೂ ಈವರೆಗೂ ದುರಸ್ತಿ ಕಂಡಿಲ್ಲ. ಹಂತ ಹಂತವಾಗಿ ಶಿಥಿಲವಾಗುತ್ತಾ ನಿತ್ಯ ಸಂಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ.

ಇದು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಮಲೆನಾಡಿನ ಪ್ರಸಿದ್ಧ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯ. ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆ ಜಲಪಾತ, ಚಾರಣ ತಾಣವಾದ ನರಸಿಂಹ ಪರ್ವತಕ್ಕೆ ಸಂಪರ್ಕ ಕಲ್ಪಿಸುವ ಶೃಂಗೇರಿ ಕಿಗ್ಗಾ ಸಂಪರ್ಕ ಕಲ್ಪಿಸುವ ಕಿಗ್ಗಾ ಬಳಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ನಳಿನಿ ನದಿ ಸೇತುವೆ ದುಸ್ಥಿತಿ ಇದು.

ಸೇತುವೆ ರಸ್ತೆ ಇಳಿಜಾರಿನಿಂದ ಕೂಡಿದ್ದರೆ, ಇನ್ನೊಂಡೆ ಅಪಾಯಕಾರಿ ತಿರುವಿನಿಂದ ಕೂಡಿದೆ. ತಿರುವಿನಲ್ಲಿ ತಡೆಗೋಡೆ ಇಲ್ಲದೇ ಕಂದಕವಿದೆ. ನಿಯಂತ್ರಣ ತಪ್ಪಿದರೆ ವಾಹನಗಳು ನದಿ, ಹೊಂಡಕ್ಕುರುಳುತ್ತವೆ. ಅನೇಕ ವಾಹನಗಳು ಉರುಳಿಬಿದ್ದು ಅಪಾಯಕಾರಿ ವಲಯವಾಗಿ ಪರಿಣಮಿಸಿದೆ. ಈ ಸೇತುವೆ ತಳಭಾಗದಲ್ಲಿ ಬಿರುಕು ಉಂಟಾಗಿದ್ದು, ಪಿಲ್ಲರ್ ಗಳು, ಕೈಪಿಡಿ ಗಳು ತುಕ್ಕಹಿಡಿದಿವೆ. ಮಳೆಗಾಲದಲ್ಲಿ ಸೇತುವೆ ಸಮತಟ್ಟಾಗಿ ನದಿ ಪ್ರವಾಹ ಹರಿಯುತ್ತದೆ. ಕೆಳಭಾಗದಿಂದ ಗಿಡಮರ ಬಳ್ಳಿಗಳು ಬೆಳೆದು ಸೇತುವೆ ಮುಚ್ಚಿ ನಿತ್ಯ ಹರಿದ್ವರಣದ ಕಾಡುಗಳಂತೆ ಕಾಣುತ್ತಿದೆ.

ಸೇತುವೆ ಮೇಲಿನ ರಸ್ತೆ ತೀರಾ ಕಿರಿದಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸೇತುವೆ ನಿರ್ಮಾಣವಾಗಿ ಶತಮಾನವೇ ಗತಿಸುತ್ತಿದ್ದರೂ ಈವರೆಗೂ ಈ ಸೇತುವೆ ಪುನರ್ ನಿರ್ಮಾಣ ವಾಗಲೀ, ದುರಸ್ತಿ ಭಾಗ್ಯವಾಗಲೀ ಕೂಡಿಬಾರ ದಿರುವುದು ದೌರ್ಭಾಗ್ಯವೇ ಸರಿ. ಮಳೆ ದೇವರ ದರ್ಶನಕ್ಕೆ ಶಾಸಕ, ಸಂಸದರೂ, ಸಚಿವರು, ಉಪಮುಖ್ಯಮಂತ್ರಿ ಬಂದು ಹೋಗಿದ್ದರೂ ಈ ಸೇತುವೆ, ಕಿರಿದಾದ ರಸ್ತೆ ಗೋಚರಿಸದಿರುವುದು ಅಚ್ಚರಿ ಹುಟ್ಟಿಸಿದೆ.

ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮರ್ಕಲ್ ಪಂಚಾಯಿತಿ ವ್ಯಾಪ್ತಿಯ ಈ ಸೇತುವೆ ಶೃಂಗೇರಿ ಕಿಗ್ಗಾ ಸಂಪರ್ಕವಲ್ಲದೇ ಸಿರಿಮನೆ ಜಲಪಾತ, ನರಸಿಂಹ ಪರ್ವತ, ಸಿಂದೋಡಿ ಕೊಚ್ಚಾರು ದೇವಸ್ಥಾನ, ಮಘೇ ಬೈಲು ಜಲಪಾತ ಸೇರಿದಂತೆ ಕಿಗ್ಗಾ ಸುತ್ತಮುತ್ತಲಿನ ಸುಮಾರು 150 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೆತುವೆ ಸಂಪರ್ಕ ಕೇಂದ್ರಬಿಂದು. ನಕ್ಸಲ್ ಪ್ಯಾಕೇಜ್ ಅಡಿ ಅನುದಾನವಾಗಲೀ, ದುರಸ್ತಿ ಭಾಗ್ಯ ಸಿಗಲಿಲ್ಲ. ಸ್ಥಳೀಯರು ಹಲವು ಭಾರಿ ಗಮನಕ್ಕೆ ತಂದಿದ್ದರೂ, ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಿಗ್ಗಾ ದೇವಾಲಯ, ಸಿರಿಮನೆ ಜಲಪಾತ, ಸುತ್ತಮುತ್ತಲ ಹಳ್ಳಿಗಳಿಗೆ ಸಂಚರಿಸುವ ಜನರು ಈ ಶಿಥಿಲಗೊಂಡ ಸೇತುವೆ ಮೇಲೆ ಸಂಚರಿಸುವ ದಯನೀಯ ಸ್ಥಿತಿ.

ಇದೊಂದು ಪ್ರಸಿದ್ಧ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರವಾಗಿದ ಸೇತುವೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಅಪಾಯದಂಚಿಗೆ ತಲುಪುತ್ತಿರುವ ಈ ಸೇತುವೆ ಪುನರ್ ನಿರ್ಮಾಣಕ್ಕೆ ಮುಂದಾಗಬೇಕಿದೆ.

-- ಕೋಟ್‌--

ಸರ್ಕಾರ ಜನಪ್ರತಿನಿದಿಗಳು ಗಂಬೀರವಾಗಿ ಪರಿಗಣಿಸಬೇಕು

ಸೇತುವೆ ನಿರ್ಮಾಣಗೊಂಡು ಸುಮಾರು 80 ವರ್ಷಕ್ಕೂ ಹೆಚ್ಚಾಗಿದೆ.ಯಾವಗಲಾದರೂ ಒಮ್ಮೆ ಸುಣ್ಣ ಬಳಿದಿದ್ದು ಬಿಟ್ಟರೆ ಇದುವರೆಗೂ ದುರಸ್ತಿ ಕಂಡಿಲ್ಲ. ಸೇತುವೆ ಪುನರ್ ನಿರ್ಮಾಣ ಮಾಡಬೇಕು.

- ಅನಂತಮೂರ್ತಿ ಕಿಗ್ಗಾ

---

ನಿರ್ಲಕ್ಷ್ಯ ಬಿಟ್ಟು ಅಗತ್ಯ ಕ್ರಮ ಕೈಗೊಳ್ಳಬೇಕು

-ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣವಾಗಿದ್ದರೂ ಈ ಸೇತುವೆ ದುರಸ್ತಿ, ಪುನರ್ ನಿರ್ಮಾಣಕ್ಕೆ ಮುಂದಾಗಿಲ್ಲ. ಇನ್ನಾದರೂ ನಿರ್ಲಕ್ಷ ಬಿಟ್ಟು ಅಗತ್ಯ ಕ್ರಮ ಕೈಗೊಳ್ಳಬೇಕು.

- ನಟರಾಜ್.ಕೆ.ಬಿ.ಕಿಗ್ಗಾ.

23 ಶ್ರೀ ಚಿತ್ರ 1-ಶೃಂಗೇರಿ ಕಿಗ್ಗಾ ಸಂಪರ್ಕ ನಳಿನಿ ನದಿ ಸೇತುವೆ ಶಿಥಿಲಾವಸ್ಥೆಯಲ್ಲಿರುವುದು.

23 ಶ್ರೀ ಚಿತ್ರ 2-ಸೇತುವೆ ಬಳಿ ಹೊಂಡ ಕುಸಿಯುತ್ತಿರುವುದುಯ

23 ಶ್ರೀ ಚಿತ್ರ 3-ಅನಂತಮೂರ್ತಿ ಕಿಗ್ಗಾ

23 ಶ್ರೀ ಚಿತ್ರ 4 -ನಟರಾಜ್ ಕೆ,ಬಿ.ಕಿಗ್ಗಾ.