ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ಸಹೋದರನ ಹತ್ಯೆಗೆ ಪ್ರತಿಕಾರವಾಗಿ ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಇಬ್ಬರು ರೌಡಿಶೀಟರ್ ಸೇರಿ 7 ಮಂದಿ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾಗಿರುವ ಹೈದರ್ ಅಲಿ ಅವರ ಸಹೋದರ ಶಬ್ಬೀರ್ ಅಲಿ, ಅಳಿಯ ಸಾಜಿದ್, ಬೈಯಪ್ಪನಹಳ್ಳಿ ಠಾಣೆಯ ರೌಡಿಶೀಟರ್ ಸುಮನ್, ಹಲಸೂರು ಗೇಟ್ ಠಾಣೆ ರೌಡಿಶೀಟರ್ ಶಿವಪ್ರಸಾದ್ ಹಾಗೂ ಅವರ ಸಹಚರರಾದ ಶರವಣ್, ವಿನೋದ್, ಪ್ರೇಮ್ ಪೂಜಾರ್ ಬಂಧಿತರು. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.ಆರೋಪಿಗಳಿಂದ 30ಕ್ಕೂ ಹೆಚ್ಚು ಮಾರಕಾಸ್ತ್ರ ಕಾರು ಮತ್ತು ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ಹತ್ಯೆಯಾದ ಹೈದರ್ ಅಲಿ ಅಶೋಕನಗರ ಠಾಣೆಯ ರೌಡಿಶೀಟರ್ ಆಗಿದ್ದ. ಆರೋಪಿಗಳು ಶುಕ್ರವಾರ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹತ್ಯೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಮೇರೆಗೆ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂ.26ರ ಶುಕ್ರವಾರ ಆರೋಪಿಗಳು ಬೈಕ್ ಹಾಗೂ ಕಾರುಗಳಲ್ಲಿ 30ಕ್ಕೂ ಹೆಚ್ಚು ಮಾರಕಾಸ್ತ್ರಗಳನ್ನು ಇಟ್ಟುಕೊಂಡು ನಗರದ ಕೆಲ ರಸ್ತೆಗಳಲ್ಲಿ ಓಡಾಡಿಕೊಂಡು ಅಬ್ಬಾಸ್ ಹತ್ಯೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಪಡೆದ ಕೂಡಲೇ ಸಿಸಿಬಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಕೊಲೆಗೆ ಪ್ರತಿಕಾರದ ಪ್ರತಿಜ್ಞೆ:2025ರ ಫೆಬ್ರವರಿಯಲ್ಲಿ ಅಶೋಕನಗರದ ನೀಲಸಂದ್ರದಲ್ಲಿ ರೌಡಿಶೀಟರ್ ಹೈದರ್ ಅಲಿ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಅಬ್ಬಾಸ್ ಹೆಸರು ಕೇಳಿಬಂದಿತ್ತು. ಅಲ್ಲದೆ, ಹೈದರ್ ಅಲಿ ಕುಟುಂಬಸ್ಥರು ಕೂಡ ಅಬ್ಬಾಸ್ ವಿರುದ್ಧ ಆರೋಪ ಮಾಡಿದ್ದರು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ಬಾಸ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ. ಹೀಗಾಗಿ ಹೈದರ್ ಅಲಿ ಸಹೋದರ ಶಬ್ಬೀರ್ ಅಲಿ ಮತ್ತು ಅಳಿಯ ಸಾಜಿದ್, ಅಬ್ಬಾಸ್ ಹತ್ಯೆಗೆ ಇತರೆ ಆರೋಪಿಗಳ ಜತೆ ಸಂಚು ರೂಪಿಸಿದ್ದರು. ಅಬ್ಬಾಸ್ ಹತ್ಯೆ ಬಳಿಕ ತಮ್ಮ ಏರಿಯಾದಲ್ಲಿ ಪ್ರಾಬಲ್ಯ ಪಡೆಯಬಹುದು ಎಂಬುದು ಆರೋಪಿಯ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
