ಸೋಮರಡ್ಡಿ ಅಳವಂಡಿ ಕೊಪ್ಪಳ

ಇನ್ಮುಂದೆ ನಾನು ಸಿಲಿಂಡರ್ ಬಳಕೆ ಮಾಡುವುದಿಲ್ಲ. ಕುಲುಮೆ ಮಾದರಿ ಕಟ್ಟಿಗೆ ಒಲೆ ಸಿದ್ಧ ಮಾಡಿಕೊಂಡಿದ್ದು, ಸಿಲಿಂಡರ್ ಸ್ಟೋರ್ ಗಿಂತಲೂ ಉತ್ತಮವಾಗಿ ಬೆಂಕಿ ಬರುತ್ತದೆ.

ಇದು, ಕೊಪ್ಪಳ ನಗರದ ಆರೂಢ ಹೋಟೆಲ್ ಮಾಲೀಕ ಲಿಂಗರಾಜ್ ಮಾತು.

ಹೌದು, ಸಿಲಿಂಡರ್ ಸಮಸ್ಯೆಯಿಂದ ಬೇಸತ್ತಿರುವ ಇವರು ಕಟ್ಟಿಗೆ ಒಲೆ ಬಳಕೆ ಮಾಡಿಕೊಂಡು ಪರಿಹಾರ ಕಂಡುಕೊಂಡು ಹೋಟೆಲ್ ನಡೆಸುತ್ತಿದ್ದಾರೆ. ಈಗ ಅದಕ್ಕೆ ಕುಲುಮೆ ಮಾದರಿ ಅಳವಡಿಸಿ, ಸಿಲಿಂಡರ್ ಸ್ಟೋವ್ ಗಿಂತಲೂ ದೊಡ್ಡ ಪ್ರಮಾಣದ ಬೆಂಕಿ ಸುಲಭವಾಗಿ ಬರುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಲಿಂಡರ್‌ಗಿಂತಲೂ ಅಡುಗೆ ಬೇಗ ಆಗುತ್ತದೆ. ವೆಚ್ಚವೂ ಕಡಿಮೆ. ಸಿಲಿಂಡರ್ ಬಳಕೆಗಿಂತಲೂ ಬಹಳ ಅನುಕೂಲವಾಗಿದೆ ಎನ್ನುತ್ತಾರೆ.

ಏನಿದು ಕುಲುಮೆ ಮಾದರಿ: ಹಿಂದೆ ನಮ್ಮ ಊರಲ್ಲಿ ಕಮ್ಮಾರರು ರೈತಾಪಿ ಜನರ ಕಬ್ಬಿಣ ಸಾಮಗ್ರಿ ಸಿದ್ಧ ಮಾಡಿಕೊಡಲು ಕುಲುಮೆ ಬಳಕೆ ಮಾಡುತ್ತಿದ್ದರು. ಅದಕ್ಕೆ ಪ್ಯಾನ್‌ ಹಾಕಿ, ತಿರುಗಿಸುತ್ತಾ ಇಲ್ಲವೇ ಬ್ಲೋವರ್‌ ಅಳವಡಿಸಿ ಕುಲುಮೆಯಲ್ಲಿ ಬೆಂಕಿಯ ಶಾಖ್‌ ತೀವ್ರವಾಗಿ ಬರುವಂತೆ ಮಾಡುತ್ತಿದ್ದರು. ಇದನ್ನೇ ಮಾದರಿಯಾಗಿಟ್ಟುಕೊಂಡು ನಾನು ಕುಲುಮೆ ಮಾದರಿ ಒಲೆ ಬಳಕೆ ಮಾಡಿದ್ದೇನೆ. ಇದಕ್ಕೆ ಎಲೆಕ್ಟ್ರಿಕಲ್ ಪಂಪ್ ಬಳಕೆ ಮಾಡುವ ಮೂಲಕ ಹೊಸತನ ಅಳವಡಿಸಿಕೊಂಡಿದ್ದೇನೆ. ಇದರಿಂದ ಕಟ್ಟಿಗೆ ಒಲೆ ಸಿಲಿಂಡರ್ ಒಲೆ ಮೀರಿಸುವಂತೆ ಬೆಂಕಿ ಬರುತ್ತದೆ ಎನ್ನುತ್ತಾರೆ.


₹6 ಸಾವಿರ ವೆಚ್ಚ ಮಾಡಿದರೆ ಕುಲುಮೆ ಒಲೆ ಸಿದ್ಧವಾಗುತ್ತದೆ. ಕಟ್ಟಿಗೆ ತುಂಡು ಮಾಡಿ ಹಾಕಿದರೆ ಸಾಕು, ಸಿಲಿಂಡರ್ ಮೀರಿಸುವಂತೆ ಒಲೆಯಲ್ಲಿ ಬೆಂಕಿ ಬರುತ್ತದೆ ಎನ್ನುತ್ತಾರೆ.

ಸಿಲಿಂಡರ್ ಮೇಲೆ ಮಾಡುವ ಅಡುಗೆಗಿಂತಲೂ ರುಚಿಯಾಗಿರುತ್ತದೆ. ಅಷ್ಟೇ ಅಲ್ಲ, ಸಿಲಿಂಡರ್ ಸ್ಟೋವ್ ಬಳಕೆ ಮಾಡಿಕೊಂಡು ಬಳಕೆ ಮಾಡುವುದಕ್ಕಿಂತಲೂ ಬೇಗ ಅಡುಗೆ ಸಿದ್ಧವಾಗುತ್ತದೆ.

ಇದರಲ್ಲಿ ಸಮಸ್ಯೆ ಎಂದರೆ ಸಿಲಿಂಡರ್ ಸ್ಟೋವ್ ನಲ್ಲಿ ಅಡುಗೆ ಮಾಡುವುದಕ್ಕಿಂತಲೂ ಝಳ ಹೆಚ್ಚಾಗುತ್ತದೆ. ಇದೊಂದು ಸಮಸ್ಯೆ ಹೊರತುಪಡಿಸಿದರೆ ಇನ್ಮುಂದೆ ಸಿಲಿಂಡರ್ ಸ್ಟೋವ್ ಬಳಕೆ ಮಾಡುವ ಅಗತ್ಯವೇ ಇಲ್ಲ. ಅದಕ್ಕೂ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಅದು ಕೈಗೂಡಿದರೆ ನಾವು ಸಿಲಿಂಡರ್ ಒಲೆಗೆ ಗುಡ್ ಬೈ ಹೇಳುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತಾರೆ.

ದುಬಾರಿಯಾದ ಕಟ್ಟಿಗೆ: ಸಿಲಿಂಡರ್ ಸಮಸ್ಯೆಯಾಗಿ ಕಟ್ಟಿಗೆ ಒಲೆ ಅಧಿಕವಾಗಿ ಬಳಕೆ ಮಾಡುತ್ತಿರುವುದರಿಂದ ಕಟ್ಟಿಗೆಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಳವಾಗಿದೆ. ₹3500ಗೆ ಟನ್ ಸಿಗುತ್ತಿದ್ದ ಕಟ್ಟಿಗೆ ಈಗ ₹6 ಸಾವಿರ ಆಗಿದೆ. ಕೆಲಸಕ್ಕೆ ಬಾರದ ಕಟ್ಟಿಗೆಗೂ ಬೇಡಿಕೆ ಬಂದಿದೆ. ಕಟ್ಟಿಗೆಯ ಅಡ್ಡೆಯಲ್ಲಿ ಕಟ್ಟಿಗೆ ಸಾಮಗ್ರಿ ಮಾಡುವಾಗ ಬರುತ್ತಿದ್ದ ತ್ಯಾಜ್ಯಕ್ಕೂ ಈಗ ಬೇಡಿಕೆ ಬಂದಿದೆ.

ಕಮ್ಮಾರರು ಬಳಕೆ ಮಾಡುತ್ತಿದ್ದ ಕುಲುಮೆ ಮಾದರಿ ಅಳವಡಿಸಿಕೊಂಡು ಈಗ ಕಟ್ಟಿಗೆ ಕುಲುಮೆ ಸಿದ್ಧ ಮಾಡಿಕೊಂಡಿದ್ದು, ಸಿಲಿಂಡರ್ ಒಲೆ ಮೀರಿಸುವಂತೆ ಬೆಂಕಿ ಬರುತ್ತಿದೆ. ನಮಗೆ ಅನುಕೂಲವಾಗಿದೆ ಎಂದು ಆರೂಢ ಹೋಟೆಲ್ ಮಾಲೀಕ ಲಿಂಗರಾಜ ತಿಳಿಸಿದ್ದಾರೆ.