ಇಂದಿನ ದೈನಂದಿನ ಜೀವನದಲ್ಲಿ ಮೊಬೈಲ್, ಟಿವಿ ಮುಂತಾದ ಡಿಜಿಟಲ್ ಪರದೆಗಳು (ಸ್ಕ್ರೀನ್‌ಗಳು) ಅವಿಭಾಜ್ಯ ಅಂಗವಾಗಿವೆ. ದೀರ್ಘಕಾಲದ ಸ್ಕ್ರೀನ್ ಬಳಕೆ ಮಕ್ಕಳ ದೈಹಿಕ ಚಟುವಟಿಕೆ, ನಿದ್ರೆ, ಗಮನ, ಸ್ವಯಂ-ನಿಯಂತ್ರಣ ಮತ್ತು ಸಾಮಾಜಿಕ ಸಂವಹನದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಗಂಭೀರ ಅಗತ್ಯವನ್ನು ಮನಗಂಡು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ಆಡಿಯಾಲಜಿ ಮತ್ತು ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ ವಿಭಾಗ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎರಡು ದಿನಗಳ ಶೈಕ್ಷಣಿಕ ಮತ್ತು ಪಾಲುದಾರರ ಕಾರ್ಯಕ್ರಮ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಇಂದಿನ ದೈನಂದಿನ ಜೀವನದಲ್ಲಿ ಮೊಬೈಲ್, ಟಿವಿ ಮುಂತಾದ ಡಿಜಿಟಲ್ ಪರದೆಗಳು (ಸ್ಕ್ರೀನ್‌ಗಳು) ಅವಿಭಾಜ್ಯ ಅಂಗವಾಗಿವೆ. ದೀರ್ಘಕಾಲದ ಸ್ಕ್ರೀನ್ ಬಳಕೆ ಮಕ್ಕಳ ದೈಹಿಕ ಚಟುವಟಿಕೆ, ನಿದ್ರೆ, ಗಮನ, ಸ್ವಯಂ-ನಿಯಂತ್ರಣ ಮತ್ತು ಸಾಮಾಜಿಕ ಸಂವಹನದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಗಂಭೀರ ಅಗತ್ಯವನ್ನು ಮನಗಂಡು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ಆಡಿಯಾಲಜಿ ಮತ್ತು ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ ವಿಭಾಗ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎರಡು ದಿನಗಳ ಶೈಕ್ಷಣಿಕ ಮತ್ತು ಪಾಲುದಾರರ ಕಾರ್ಯಕ್ರಮ ಆಯೋಜಿಸಿತು.

ಕೆಎಂಸಿ ಮಂಗಳೂರಿನ ಬಿಜೈ ಕ್ಯಾಂಪಸ್‌ನ ನಾಲೆಡ್ಜ್ ಬ್ಲಾಕ್‌ನಲ್ಲಿ ಭಾರತೀಯ ಪುನರ್ವಸತಿ ಮಂಡಳಿ ಮಾನ್ಯತೆ ಪಡೆದ ಲಿಟಲ್ ಮೈಂಡ್ಸ್ ಇನ್ ಡಿಜಿಟಲ್ ವರ್ಲ್ಡ್‌ ಕಾರ್ಯಕ್ರಮ ನಡೆಯಿತು.

ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ-ಕುಲಪತಿ ಡಾ.ದಿಲೀಪ್ ಜಿ.ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಬಾಲ್ಯದಲ್ಲಿ ಪರದೆಯ ಬಳಕೆಯ ನಿಯಂತ್ರಣದ ಮಹತ್ವವನ್ನು ವಿವರಿಸಿದರು.

ಆಡಿಯಾಲಜಿ ಮತ್ತು ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಕೌಶಲೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಪ್ರಾಧ್ಯಾಪಕ ಡಾ.ಗಗನ್ ಬಜಾಜ್ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳ ಬೆಳವಣಿಗೆಯ ಮನೋವಿಜ್ಞಾನ, ಆರಂಭಿಕ ಕಲಿಕೆ, ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ, ಆಡಿಯಾಲಜಿ, ನರ ಬೆಳವಣಿಗೆ, ಮಕ್ಕಳ ಮನೋವೈದ್ಯಶಾಸ್ತ್ರ ಹಾಗೂ ಮಾಧ್ಯಮ ಮತ್ತು ಸಂವಹನ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದರು.

ಈ ಎರಡು ದಿನಗಳ ಕಾರ್ಯಕ್ರಮದ ಪ್ರಮುಖ ಭಾಗವಾಗಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಧನಸಹಾಯದ ನರ್ಚರ್ ವಾಚ್‌ ಯೋಜನೆಯಡಿಯಲ್ಲಿ ಸಹ-ವಿನ್ಯಾಸ ಕಾರ್ಯಾಗಾರವನ್ನು ಲೈಟ್‌ಹೌಸ್ ಹಿಲ್ ರಸ್ತೆಯ ಕೆಎಂಸಿ ಆಸ್ಪತ್ರೆಯ ಎಂಇಯು ಹಾಲ್‌ನಲ್ಲಿ ನಡೆಯಿತು.

ಕೆಎಂಸಿ ಮಂಗಳೂರಿನ ಸಹ-ಡೀನ್ ಡಾ.ಮಂಗಳ ಪೈ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಮಕ್ಕಳ ಮನೋವೈದ್ಯಶಾಸ್ತ್ರ, ಮಕ್ಕಳ ವೈದ್ಯಕೀಯ (ಪೀಡಿಯಾಟ್ರಿಕ್ಸ್), ಸಮುದಾಯ ಆರೋಗ್ಯ, ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಾಧ್ಯಮ ವಿಷಯ ರಚನೆಕಾರರು ಮತ್ತು ಪ್ರಮುಖವಾಗಿ ಸಣ್ಣ ಮಕ್ಕಳ ಪೋಷಕರು ಸೇರಿದಂತೆ ಆರು ಪ್ರಮುಖ ಪಾಲುದಾರ ಗುಂಪುಗಳನ್ನು ಪ್ರತಿನಿಧಿಸುವ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಈ ನರ್ಚರ್ ವಾಚ್ ಯೋಜನೆಯನ್ನು ಕೆಎಂಸಿ ಮಂಗಳೂರಿನ ಆಡಿಯಾಲಜಿ ಮತ್ತು ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ ವಿಭಾಗದ ಪ್ರಧಾನ ಸಂಶೋಧಕ ಡಾ.ಗಗನ್ ಬಜಾಜ್ ಮುನ್ನಡೆಸುತ್ತಿದ್ದು, ಡಾ.ಜಯಶ್ರೀ ಎಸ್.ಭಟ್, ಡಾ.ಜಯಶ್ರೀ ಕೆ., ಡಾ.ಮೇಘಾ ಮೋಹನ್ ಸಹ-ಸಂಶೋಧಕರಾಗಿದ್ದಾರೆ.