ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಉತ್ತರ ಕರ್ನಾಟಕದ ಭಾಗಗಳಲ್ಲಿ ಹೆಚ್ಚಾಗಿ ಮೊಣಕಾಲು ನೋವು ಕಾಡುತ್ತಿದ್ದು, ಬಡಜನರಿಗೆ, ರೈತರಿಗೆ ಈ ನೋವಿಗೆ ಇಲ್ಲಿಯೇ ಚಿಕಿತ್ಸೆ ಸಿಗಬೇಕು ಎಂದು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ವೈದ್ಯರ ತಂಡ ರಚಿಸಲಾಗಿದ್ದು, ಈಗಾಗಲೇ ಒಬ್ಬ ರೋಗಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ ಎಂದು ಎಸ್.ಆರ್.ಪಾಟೀಲ್ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ಪಾಟೀಲ್ ತಿಳಿಸಿದರು.ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ಆಸ್ಪತ್ರೆಯಲ್ಲಿ ಗದಗ ಜಿಲ್ಲೆಯ ಸುಮಿತ್ರಾ ಪಟ್ಟಣದ (68) ಅವರ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯು ಡಾ.ರಾಘವೇಂದ್ರ ಬಡಿಗೇರ ನೇತೃತ್ವದ ತಂಡದಿಂದ ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದ್ದಾರೆ.
ಸುಮಿತ್ರಾ ಪಟ್ಟಣದ ಅವರ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿನಿ ಯೋಜನೆಯಡಿ ಉಚಿತವಾಗಿ ಮಾಡಲಾಗಿದ್ದು, ಇನ್ನು ಮುಂದೆ ಯಶಸ್ವಿನಿ ಕಾರ್ಡ್ ಹೊಂದಿದ ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಅಲ್ಲದೆ ಯಶಸ್ವಿನಿ ಕಾರ್ಡ್ ಹೊಂದಿರದೆ ಇರುವಂತಹ ಬಡ ರೋಗಿಗಳು ಕೇವಲ ₹1.30 ಲಕ್ಷ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್.ಪಾಟೀಲ ಮಾತನಾಡಿ, ಈಗಾಗಲೇ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವಿದ್ದು ಬರುವ ಒಂದು ವಾರದೊಳಗಾಗಿ ಎಂಆರ್ಐ ಸ್ಕ್ಯಾನ್ ಪ್ರಾರಂಭವಾಗಲಿದ್ದು ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಧರ್ಮರಾಯ ಇಂಗಳೇ ಮಾತನಾಡಿ ಸೆಪ್ಟೆಂಬರ್ 21ರಂದು ತಾಲೂಕಿನ ಸುನಗ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಬಿಪಿ, ಶುಗರ್, ಕಿವಿ, ಮೂಗು, ಗಂಟಲು ಹಾಗೂ ಚಿಕ್ಕಮಕ್ಕಳ ತಜ್ಞ ವೈದ್ಯರು ಭಾಗವಹಿಸುತ್ತಿದ್ದಾರೆಂದು ಹೇಳಿದರು. ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ,ರಾಘವೇಂದ್ರ ಬಡಿಗೇರ, ಅಶೋಕ ದಾದಮಿ, ಗೌರ್ನಿಂಗ್ ಕೌನ್ಸಿಲ್ ನ ಸದಸ್ಯೆ ಅನುಷಾ ನಾಡಗೌಡ ಇದ್ದರು.