ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಿಕ್ಷಣ ಪಡೆಯದೆ ಇರುವ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಪ್ರೇಮವನ್ನು ಮೆರೆದವರು. ಆದರೆ ನಾವು ಶಿಕ್ಷಣವಂತರು, ವಿದ್ಯಾವಂತರು ದೇಶಕ್ಕಾಗಿ ಏನು ನೀಡುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಿಕ್ಷಣ ಪಡೆಯದೆ ಇರುವ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಪ್ರೇಮವನ್ನು ಮೆರೆದವರು. ಆದರೆ ನಾವು ಶಿಕ್ಷಣವಂತರು, ವಿದ್ಯಾವಂತರು ದೇಶಕ್ಕಾಗಿ ಏನು ನೀಡುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಹೇಳಿದರು.ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳು ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಇಂಚಗೇರಿ ಮಠ ಸೇರಿದಂತೆ ಅನೇಕ ಮಠಗಳು, ಸಂಘ ಸಂಸ್ಥೆಗಳು ಮತ್ತು ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಬದುಕನ್ನೆ ತ್ಯಾಗ ಮಾಡಿದ್ದಾರೆ. 1973 ರಲ್ಲಿ ರಾಜ್ಯದಲ್ಲಿ ಪತ್ರಗಾರ ಇಲಾಖೆ ಪ್ರಾರಂಭಗೊಂಡು ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಪಡಿಸುವ ಯೋಜನಗಳನ್ನು ಹಮ್ಮಿಕೊಳ್ಳುತ್ತಲಿದೆ ಎಂದರು.ನಿವೃತ್ತ ಪ್ರಾಧ್ಯಾಪಕ ಎಮ್.ಎಸ್.ಹೈಯಾಳಕರ ನುಡಿಗಳನ್ನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸಿಂದಗಿ ವಿಜಯಪುರ ಜಿಲ್ಲೆಯಲ್ಲಿ ಮೊದಲು ಸ್ವಾತಂತ್ಯದ ಬಂಡಾಯದ ಕೂಗಿಗೆ ಮುನ್ನುಡಿ ಬರೆದ ನಗರ. ತೆರಿಗೆ ವಿಚಾರವಾಗಿ ಚಿದಂಬರ ದಿಕ್ಷಿತ, ರಾವಜಿ ರಾಸ್ತಿಯಾ, ದಿವಾಕರ ದಿಕ್ಷೀತ, ಬಾಳಪ್ಪ ದೇಶಪಾಂಡೆ ಅನೇಕರು ಬಂಡಾಯ ಸಾರಿದವರು. ಹರ್ಡೆಕರ ಮಂಜಪ್ಪ, ಭಂಥನಾಳ ಶಿವಯೋಗಿಗಳು ಜಿಲ್ಲೆಯಲ್ಲಿ ಮೊಟ್ಟ ಮೊದಲು ಸ್ವದೇಶಿ ಚಳುವಳಿಗೆ ಮುನ್ನುಡಿಯನ್ನು ಬರೆದವರು. ಗಾಂಧಿಜಿಯವರ ಪ್ರೇರಣೆಯಿಂದ ಜಿಲ್ಲೆಯ ಅನೇಕ ಜನರು ಪ್ರಭಾವಕ್ಕೆ ಒಳಗಾಗಿ ಹೋರಾಟದಲ್ಲಿ ಭಗವಹಿಸಿದ್ದು ಇತಿಹಾಸ ಎಂದು ಹೇಳಿದರು.ಪ್ರಾಧ್ಯಾಪಕ ಡಾ.ನಿಂಗರಾಜ ಅಸ್ಕಿ ಮಾತನಾಡಿ, ಭಾರತವನ್ನು ಬೇರೆ ಬೇರೆ ಸಂಸ್ಕೃತಿಗಳು ಆಳಿದ್ದರಿಂದ ಭಾರತ ಬಹು ಸಂಸ್ಕೃತಿಯ ದೇಶವಾಗಿದೆ. ಇತಿಹಾಸದ ಆಕರಗಳನ್ನು ಸಂಗ್ರಹಿಸದೆ ಹೋದರೆ ಭವಿಷ್ಯತ್ತಿನಲ್ಲಿ ಇತಿಹಾಸ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.ಇತಿಹಾಸ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಎ.ಆರ್.ಹೆಗ್ಗಣದೊಡ್ಡಿ, ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಮಾತನಾಡಿದರು. ಈ ವೇಳೆ ಅತಿಥಿಗಳನ್ನು ಗೌರವಿಸಲಾಯಿತು. ಬಿ.ಪಿ.ಕರ್ಜಗಿ, ಡಾಎಂ.ಎಂ ಪಡಶೆಟ್ಟಿ, ಶಿವಪ್ಪ ಗವಸಾನಿ, ಶಿವುಕುಮಾರ ಶಿವಶಿಂಪಿಗೇರ, ಬಿ.ಸಿ.ಪಾಟೀಲ, ಬಿ.ಎ.ಬಿರಾದಾರ, ಬಿ.ಜಿ.ಮಠ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.