ಸಾರಾಂಶ
ಧಾರವಾಡ: ಗಣಿತ ವಿಷಯಕ್ಕೆ ಸಂಬಂಧಿಸಿದ ತಂತ್ರಜ್ಞಾನ ಆಧಾರಿತ ಪ್ರಯೋಗಗಳು ವಿದ್ಯಾರ್ಥಿಗಳಲ್ಲಿ ಜ್ಞಾನ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಕವಿವಿ ಪ್ರಭಾರ ಕುಲಪತಿ ಪ್ರೊ. ಆರ್.ಎಲ್. ಹೈದರಾಬಾದ್ ಅಭಿಪ್ರಾಯ ಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಮತ್ತು ಪಾವಟೆ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸ್ ಇವುಗಳ ಸಹಯೋಗದಲ್ಲಿ ಕವಿವಿ ಸೆನೆಟ್ ಸಭಾಂಗಣದಲ್ಲಿ ''''ಗಣಿತಾತ್ಮಕ ವಿಶ್ಲೇಷಣೆ ಮತ್ತು ಮಾಹಿತಿ ತಂತ್ರಜ್ಞಾನದ ಅನುಷ್ಠಾನ'''' ಎಂಬ ವಿಷಯದ ಕುರಿತು ಮೂರು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಎಲ್ಲಾ ಕ್ಷೇತ್ರದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಭವಿಷ್ಯತ್ತಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು, ಪ್ರಸ್ತುತ ವಿಶೇಷ ಜ್ಞಾನ ಕೌಶಲ್ಯವಿದ್ದರೆ ಮಾತ್ರ ಅವಕಾಶ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಕವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ ಮಾತನಾಡಿ, ಕಂಪ್ಯೂಟರ್ ವಿಜ್ಞಾನ, ಗಣಿತಶಾಸ್ತ್ರ, ಮತ್ತು ಸಂಖ್ಯಾಶಾಸ್ತ್ರ ವಿಷಯಗಳನ್ನು ಒಂದೇ ಸೂರಿನಡಿ ಅಧ್ಯಯನ ಮಾಡುವ ಉದ್ದೇಶದಿಂದ ಪಾವಟೆ ಇನಸ್ಟಿಟ್ಯೂಟ್ ಆಫ್ ಮೆಥಮ್ಯಾಟಿಕಲ್ ಸೈನ್ಸ್ ಸ್ಥಾಪನೆ ಮಾಡಲು ವಿವಿಯ ಆಂತರಿಕ ಸಂಪನ್ಮೂಲಗಳಿಂದ ಸುಮಾರು ₹11 ಕೋಟಿ ವೆಚ್ಚದಲ್ಲಿ ಕಟ್ಟಡ ತಲೆ ಎತ್ತಿನಿಂತಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಕಟ್ಟಡ ಪೂರ್ಣವಾಗಿಲ್ಲ. ಆದ್ದರಿಂದ ಪ್ರಸಕ್ತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಕಟ್ಟಡ ಪೂರ್ಣಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದರು.ಕವಿವಿ ಕುಲಸಚಿವ ಪ್ರೊ. ಅರವಿಂದ ಮೂಲಿಮನಿ ಮಾತನಾಡಿ, ಪ್ರಸ್ತುತ ಯುಗವು ಸವಾಲಿನಿಂದ ಕೂಡಿದ್ದು, ಪ್ರಮುಖವಾಗಿ ಗಣಿತಾತ್ಮಕ ವಿಷಯಗಳ ವಿಶ್ಲೇಷಣೆಗೆ ಹೊಸ ಕಂಪ್ಯೂಟರ್ ತಂತ್ರಾಂಶಗಳು ಹೆಚ್ಚು ಪೂರಕವಾಗಿವೆ ಎಂದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಸಿ. ಶಿರಾಳಶೆಟ್ಟಿ ಮಾತನಾಡಿ, ಪ್ರಸ್ತುತ ಗಣಿತಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತಂತ್ರಾಂಶಗಳ ಕಲಿಕೆ ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದು ಹೊಸ ಕಂಪ್ಯೂಟರ್ ಲ್ಯಾಬ್ ಅನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರುಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಉಚ್ಛತ್ತರ ಶಿಕ್ಷಾ ಅಭಿಯಾನ ನೆರವಿನಲ್ಲಿ ನಿರ್ಮಿಸಿದ ''''''''ಅಡ್ವಾನ್ಸ್ಡ್ ಕಂಪ್ಯೂಟರ್ ಮ್ಯಾಥಮೆಟಿಕಲ್ ಲಾಬ್ನ್ನು ಉದ್ಘಾಟಿಸಲಾಯಿತು.
ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಶೋಧನಾ ಲೇಖನಗಳ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಮೂರು ದಿನದ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯ ಸಂಶೋಧನಾ ಸಂಸ್ಥೆಗಳ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಹಿರಿಯ ಪ್ರಾಧ್ಯಾಪಕ ಪ್ರೊ. ಭುಜುರ್ಕೆ, ಪ್ರೊ. ಬೆಂಚಳ್ಳಿ, ಪ್ರೊ. ಎಚ್.ಎಸ್. ರಾಮನೆ, ಪ್ರೊ. ಆರ್.ಎಸ್. ದ್ಯಾವನಾಳ, ಪ್ರೊ. ಪಿ.ಜಿ. ಪಾಟೀಲ, ಪ್ರೊ. ಆಶಾ.ಎಸ್.ಕೆ, ಪ್ರೊ. ಆರ್.ಎಫ್. ಭಜಂತ್ರಿ, ಸಿಂಡಿಕೇಟ್ ಸದಸ್ಯರು ಸೇರಿದಂತೆ ಇತರರು ಇದ್ದರು.