ಸಾರಾಂಶ
ಕಾರಟಗಿ: ಜ್ಞಾನ ತಾಯಿಯ ಎದೆಹಾಲಿನಂತೆ ಪವಿತ್ರವಾದದು. ವಿದ್ಯಾರ್ಥಿಗಳು ಬಾಲ್ಯದಲ್ಲಿ ಉತ್ತಮ ಜ್ಞಾನ ಪಡೆದುಕೊಳ್ಳಬೇಕು ಎಂದು ಧ್ವನಿ ಮಹಿಳಾ ಸಂಘಟನೆಯ ಡಾ.ಶಿಲ್ಪಾ ದಿವಟರ ಹೇಳಿದರು.ಸಮೀಪದ ಬೇವಿನಹಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಜನ್ಮದಿನದ ನಿಮಿತ್ತ ಅವರ ಬದುಕಿನ ವಿವಿಧ ಮಜಲುಗಳನ್ನು ಬಿಂಬಿಸುವ ಚಿತ್ರಕಲಾಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಬಡವರ ಬದುಕಿಗೆ ಆಧಾರ ನೆರಳು ಶಿಕ್ಷಣ. ಅದು ಹೆತ್ತತಾಯಿಯ ಎದೆ ಹಾಲಿನ ಪ್ರೀತಿಗೆ ಸಮಾನವಾದೆಂದು ಸಾವಿತ್ರಿಬಾಯಿ ಪುಲೆ ಪ್ರತಿಪಾದಿಸಿದರು. ಪುಲೆ ದಂಪತಿಗಳ ಹೊಟ್ಟೆಯಲ್ಲಿ ಮಕ್ಕಳು ಹುಟ್ಟಲಿಲ್ಲ. ಆದರೂ ಸಾವಿತ್ರಿಬಾಯಿ ದೇಶಕ್ಕೆ ಅಕ್ಷರದವ್ವ ಎನಿಸಿದರು.ಅವರು ಕೇಶ ಮುಂಡನೆ, ಬಾಲ್ಯವಿವಾಹ, ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ 200 ವರ್ಷಗಳ ಹಿಂದೆ ಹೋರಾಡಿ ಅಜರಾಮರವಾಗಿದ್ದಾರೆ. ಅವರ ಜನ್ಮದಿನವನ್ನು ಶಿಕ್ಷಣ, ಅರಿವಿನ ದಿನವೆಂದು ಆಚರಿಸಬೇಕಿದೆ ಎಂದರು.ನಿಜಕ್ಕೂ ವಿದ್ಯಾರ್ಥಿನಿಯರು ದೇಹದ ರಕ್ಷಣೆ ಕುರಿತು ಜಾಗೃತರಾಗಿರಬೇಕು. ಸಮಾಜದ ದುಷ್ಕೃತ್ಯಗಳನ್ನು ಪ್ರಶ್ನಿಸುವ ಪ್ರಜ್ಞೆ ಮೈಗೂಡಿಸಿಕಳ್ಳಬೇಕು. ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುವ ಕೆಟ್ಟ ಕೃತ್ಯಗಳನ್ನು ಅಂಜದೇ ಮಕ್ಕಳ ಸಹಾಯವಾಣಿಗೆ ತಿಳಿಸಿರಿ ಎಂದು ಕಿವಿಮಾತು ಹೇಳಿದರು.ನಾಡಿನ ವಿವಿಧ ಕಲಾವಿದರು ರಚಿಸಿದ ಸಾವಿತ್ರಿಬಾಯಿ ಪುಲೆ ಬದುಕಿನ ವಿವಿಧ ಮಜಲುಗಳ ಚಿತ್ರಗಳನ್ನು ಪ್ರದರ್ಶಿಸಲಾಯಿತು.ಈ ಸಮಯದಲ್ಲಿ ಶಾಲೆಯ ಮುಖ್ಯಗುರು ಕಳಕೇಶ ಗುಡ್ಲಾನೂರ, ಧ್ವನಿ ಮಹಿಳಾ ಸಂಘಟನೆಯ ಡಿ.ಹಂಪಮ್ಮ ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಕೂಟದ ಸದಸ್ಯರು ಇದ್ದರು. ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.