ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯ, ಮಂಗಳೂರು ಭಾರತ ಸರ್ಕಾರದ ಅಧೀನದಲ್ಲಿ, ಒಂದು ದಿನದ ಪಿ.ಎಂ.ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮವು ಬುಧವಾರ ಮಡಿಕೇರಿಯಲ್ಲಿ ನಡೆಯಿತು. ಕಾರ್ಯಾಗಾರ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಕುಶಲಕರ್ಮಿಗಳು, ಟೈಲರ್ಗಳು ಯೋಜನೆಯಡಿ ನೋಂದಾಯಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು. ಮಂಗಳೂರು ಎಂಎಸ್ಎಂಇ. ಡಿ.ಎಫ್.ಒ, ಜಂಟಿ ನಿರ್ದೇಶಕ ಕೆ.ದೇವರಾಜ್ ಯೋಜನೆಯ ಬಗ್ಗೆ ಸವಿವರವಾಗಿ ಮಾತನಾಡಿ, ಯೋಜನೆಯ ಲಾಭ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ಅಈ ಯೋಜನೆಯ ಅನುಷ್ಠಾನದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು.ಅಧಿವೇಶನದ ಸಮಯದಲ್ಲಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗಂಗಾಧರ್ ನಾಯಕ್, ಲೀಡ್ ಬ್ಯಾಂಕ್ನ ದಯಾವತಿ ಹಣಕಾಸಿನ ಶಿಸ್ತಿನ ಬಗ್ಗೆ, ಯೋಜನೆಗೆ ಸಂಬಂಧಿಸಿದಂತೆ ಸಾಲ ಬಿಡುಗಡೆಗಾಗಿ ದಾಖಲಾತಿಗಳನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುವುದರ ಬಗ್ಗೆ ಮಾತನಾಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕ ರವಿಕುಮಾರ್ ಅವರು ಯೋಜನೆಗೆ ಸಂಬಂಧಿಸಿದಂತೆ ತರಬೇತಿ ಕೇಂದ್ರದ ಗುರುತಿಸುವಿಕೆಯ ಬಗ್ಗೆ ಮಾತನಾಡಿದರು.ಸಾಮಾನ್ಯ ಸೇವಾ ಕೇಂದ್ರದ ಮನೋಜ್ ಯೋಜನೆಗೆ ಸಂಬಂಧಿಸಿದಂತೆ ದಾಖಲಾತಿಗಳ ಅಗತ್ಯತೆಯ ಬಗ್ಗೆ ಮಾತನಾಡಿದರು. ಜೆಮ್ ಪೋರ್ಟಲ್ನ ಸಂಯೋಜಕ ಅನುಪಮಾ ಅವರು ಜೆಮ್ ಪೋರ್ಟಲ್ನಲ್ಲಿ ಹೇಗೆ ನೋಂದಾವಣೆ ಮಾಡಿಕೊಂಡು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕೆಂದು ತಿಳಿಸಿದರು. ಮಂಗಳೂರು ಸಹಾಯಕ ನಿರ್ದೇಶಕರು, ಎಂ.ಎಸ್.ಎ.ಇ. ಡಿ.ಎಫ್.ಒ. ಸುಮನ್ ಎಸ್. ರಾಜು ಕರ್ನಾಟಕ ರಾಜ್ಯ ಟೈಲರ್ಸ್ ಅಶೋಸಿಯೇಷನ್ರವರಿಗಾಗಿ ಈ ಕಾರ್ಯಕ್ರಮ ಆಯೋಜಿಸಿದರು.ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿ.ಎಂ.ವಿಶ್ವಕರ್ಮ ಯೋಜನೆಯು ನಗರ/ ಗ್ರಾಮೀಣ ಪ್ರದೇಶದ ಸಾಂಪ್ರ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಜನರನ್ನು ಬೆಂಬಲಿಸುತ್ತದೆ. ಈ ಯೋಜನೆಯು ಮೊದಲ ಹಂತದ 18 ಸಾಂಪ್ರದಾಯಿಕ ವೃತ್ತಿಗಳು ಬಡಗಿ, ದೋಣಿ ತಯಾರಕರು, ಆರ್ಮರ್, ಕಮ್ಮಾರ ಮತ್ತು ಟೂಲ್ ಕಿಟ್ ಮೇಕರ್, ಸುತ್ತಿಗೆ ಮತ್ತು ಟೂಲ್ ಕಿಟ್ ಮೇಕರ್, ಬೀಗ ತಯಾರಕರು, ಚಿನ್ನ ಬೆಳ್ಳಿ ತಯಾರಕರು, ಮಡಿಕೆ ತಯಾರಕರು, ಶಿಲ್ಪಿಗಳು, ಚಮ್ಮಾರರು, ರಾಜ ಮೇಸ್ತ್ರಿ ಬುಟ್ಟಿ, ಚಾಪೆ, ಪೊರಕೆ ಮತ್ತು ತೆಂಗಿನ ನಾರಿನ ನೇಕಾರರು, ಗೊಂಬೆ ತಯಾರಕರು, ಕ್ಷೌರಿಕರು, ಹೂ ಮಾಲೆ ಮಾಡುವವರು, ದೋಭಿ, ಟೈಲರ್, ಮೀನು ಬಲೆ ಹೆಣೆಯುವವರು ಹೀಗೆ ಹಲವರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಕುಶಲಕರ್ಮಿಗಳಿಗೆ: ಕರಕುಶಲ ಕರ್ಮಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಕೌಶಲ್ಯ, ಉನ್ನತೀಕರಣ, ಟೂಲ್ ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುತ್ತದೆ. ಶೇ.5ರ ರಿಯಾಯಿತಿ ಬಡ್ಡಿಯ ದರದಲ್ಲಿ 1 ಲಕ್ಷ (ಒಂದನೇ ಕಂತು) ಮತ್ತು 2 ಲಕ್ಷ (2ನೇ ಕಂತು) ಸಾಲದ ಮೂಲಕ ಪ್ರೋತ್ಸಾಹ ಒದಗಿಸುತ್ತದೆ.