ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಬಾಹ್ಯ ಸೌಂದರ್ಯಕ್ಕಿಂತ ಜ್ಞಾನ ಸೌಂದರ್ಯ ಬಹು ಶ್ರೇಷ್ಠ ಎಂಬುದನ್ನು ಅರಿತುಕೊಂಡು ಸತತ ಅಧ್ಯಯನಶೀಲರಾಗಿ ಯಶಸ್ಸು ಹೊಂದಿ ಪಾಲಕರ, ದೇಶದ ಆಸ್ತಿಯಾಗಿ. ಜ್ಞಾನವಿದ್ದಲ್ಲಿ ಬೆಳಕು, ಬೆಳಕಿದ್ದಲ್ಲಿ ಸೌಂದರ್ಯವಿರುತ್ತದೆ. ಯಾರೂ ಕಸಿಯದ, ಕದಿಯದ ವಿದ್ಯೆಗೆ ಜಗತ್ತಿನೆಲ್ಲೆಡೆ ಗೌರವ ಸಿಗುತ್ತದೆಂದು ಎಂದು ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಶಿಷ್ಯರಾದ ಡಾ.ಅಮೃತಾನಂದ ಶ್ರೀ ಅಭಿಪ್ರಾಯಪಟ್ಟರು.ಗುರುವಾರ ತೇರದಾಳದ ಜೆ.ವಿ. ಮಂಡಲದ ಸ್ವತಂತ್ರ ಪಿ.ಯು. ಕಾಲೇಜಿನ ಪಪೂ ಶಾಂತಮೂರ್ತಿ ಶ್ರೀ ೧೦೮ ಮಹಾಬಲ ಮುನಿಮಹಾರಾಜರ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಯಶಸ್ಸಿನ ಜೀವನಕ್ಕೆ ಯೋಜನೆಯೇ ಬುನಾದಿಯಾಗಿದ್ದು, ಕಲಿಕಾ ಹಂತದಲ್ಲೇ ಗುರಿಯತ್ತ ಅಚಲ ನಿಷ್ಠೆಯ ಯೋಜನೆ ನಿಮ್ಮದಾಗಬೇಕು. ಅಂಕ ಗಳಿಕೆಯೊಂದೇ ಶಿಕ್ಷಣದ ಗುರಿಯಲ್ಲ ಸದ್ಗುಣವೇ ನಿಜವಾದ ಜ್ಞಾನವಾಗಿದ್ದು, ಸುಳ್ಳು, ಕಳ್ಳತನಗಳಿಂದ ದೂರವಿದ್ದು, ಪರಿಶ್ರಮಿಗಳಾಗಿ ಸದ್ಗುಣವಂತರಾಗಿ, ಅಂಥ ಶಿಕ್ಷಣ ನಿಮ್ಮನ್ನು ಒಳಗೂ ಹೊರಗೂ ಸಶಕ್ತಗೊಳಿಸುತ್ತದೆ. ನೀತಿಯುತ ಆಚರಣೆ, ಸಂಕಲ್ಪ ಇವು ಸನಾತನ ಶಿಕ್ಷಣದ ಮೂಲವಾಗಿದ್ದು, ಆದರ್ಶಗಳನ್ನು ಯಾರೇ ವಿರೋಧಿಸಿದರೂ ನೀವು ಬಿಡದಂತೆ ಅಚಲರಾಗಿ ಆದರ್ಶಗಳ ಪಾಲಿಸಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಬಿ. ಆಲಗೂರ ಮಾತನಾಡಿ, ಸಾಂಸ್ಕೃತಿಕ, ಕ್ರಿಡಾ ಚಟುವಟಿಕೆಗಳಿಂದ ವ್ಯಕ್ತಿತ್ವದ ಸರ್ವತೋಮುಖ ಪ್ರಗತಿ ಸಾಧ್ಯ. ಶಿಕ್ಷಣದ ಮೂಲಧ್ಯೇಯವೇ ಸಮಗ್ರ ವ್ಯಕ್ತಿತ್ವ ವಿಕಸನ ಮಾಡುವುದಾಗಿದ್ದರಿಂದ ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಸಂಸ್ಥೆಯ ಕೀರ್ತಿ ಹೆಚ್ಚಿಸಬೇಕೆಂದರು.ವೇದಿಕೆಯಲ್ಲಿ ಅಧ್ಯಕ್ಷ ಟಿ.ಸಿ. ಪಡಸಲಗಿ, ಉಪಾಧ್ಯಕ್ಷ ಬಿ.ಎಸ್. ಸಾವಂತನವರ, ಡಿ.ಆರ್. ಪಾಟೀಲ, ಪ್ರವೀಣ ನಾಡಗೌಡ, ಮಲ್ಲಿನಾಥ ಅಸ್ಕಿ, ಪದ್ಮರಾಜ ಹಟ್ಟಿ, ಕಿರಣ ಕುಳ್ಳಿ, ಬಿ.ಪಿ. ಬದನಿಕಾಯಿ, ಪ್ರಾಚಾರ್ಯ ಸಂತೋಷ ಕುಳಿ ವೇದಿಕೆಯಲ್ಲಿದ್ದರು. ಸ್ಫೂರ್ತಿ ಲಾಳಕೆ ಪ್ರಾರ್ಥನೆಯೊಡನೆ ಭರತನಾಟ್ಯ ಪ್ರದರ್ಶಿಸಿದರು. ಮಾಯಕ್ಕ ಹೊಸೂರ ಸಂಗಡಿಗರು ಸ್ವಾಗತಗೀತೆ ಹಾಡಿದರು. ಪ್ರಾಚಾರ್ಯ ಸಂತೋಷ ಕುಳ್ಳಿ ಸ್ವಾಗತಿಸಿದರು. ಕಾವ್ಯ ಹುಲ್ಲೋಳ್ಳಿ, ಶೋಭಾ ಕರಿಗಾರ ನಿರೂಪಿಸಿದರು. ಬಸವರಾಜ ಬಾಳಿಕಾಯಿ ವಂದಿಸಿದರು.
ಪ್ರಾಧ್ಯಾಪಕರಾದ ಎಸ್.ಪಿ. ದೊಡವಾಡ, ಆರ್.ಕೆ. ತೇರದಾಳ, ಪೂಜಾ ವಲ್ಯಾಪೂರ, ಪ್ರಭು ಮಾಸ್ತಿ, ಪ್ರಿಯಾಂಕಾ ನಾರವಗೋಳ, ಉಮೇಶ ಹೊಸಕೋಟೆ ಸೇರಿದಂತೆ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.