ಎಸ್ಸಿ, ಎಸ್ಟಿ ಅಧಿನಿಯಮಗಳ ಬಗ್ಗೆ ಅರಿವು ಅತ್ಯಗತ್ಯ

| Published : Mar 04 2025, 12:32 AM IST

ಎಸ್ಸಿ, ಎಸ್ಟಿ ಅಧಿನಿಯಮಗಳ ಬಗ್ಗೆ ಅರಿವು ಅತ್ಯಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ೧೯೮೯ ಮತ್ತು ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತ ವಿಚಾರ ಸಂಕಿರಣ ಮತ್ತು ಕಾರ್ಯಗಾರದಲ್ಲಿ ಗಣ್ಯರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, ೧೯೮೯ರ ಪರಿಣಾಮಕಾರಿ ಜಾರಿಗಾಗಿ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಈ ನಿಟ್ವಿನಲ್ಲಿ ಸಾಮಾನ್ಯ ಜನರಿಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿ ಎಂದು ಉಪ ವಿಭಾಗಾಧಿಕಾರಿ ಮಹೇಶ್ ಹೇಳಿದರು.ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಂವಿಧಾನ ಅಮೃತ ಮಹೋತ್ಸವ - ೭೫ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪ್ರಜಾ ಪರಿವರ್ತನಾ ವೇದಿಕೆ ತಾಲೂಕು ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ ೧೯೮೯ ಮತ್ತು ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, ಜಾರಿಗೆ ಬಂದಿದ್ದರೂ ಜನ ಸಾಮಾನ್ಯರಿಗೆ ಇದರ ಬಗ್ಗೆ ಅರಿವಿನ ಕೊರತೆ ಇದೆ ಎಂದರು.

ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮದಲ್ಲಿ ೧೫ ಹೆಚ್ಚು ವಿಷಯಗಳ ಕುರಿತು ವಿವರಿಸಲಾಗಿದೆ, ಎಸ್ಸಿ, ಎಸ್ಟಿ ಜನಾಂಗದವರ ಮೇಲೆ ಆಗುವ ದೌರ್ಜನ್ಯಗಳನ್ನು ತಡೆಯಲು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು. ಎಸ್ಸಿ, ಎಸ್ಟಿ ಜನಾಂಗದ ವಿರುದ್ಧ ಸಾಮಾಜಿಕ ಬಹಿಷ್ಕಾರ, ದೈಹಿಕ ಹಲ್ಲೆ, ಜಾತಿ ನಿಂದನೆ ಸೇರಿದಂತೆ ೧೫ ವಿಧವಾದ ದೌರ್ಜನ್ಯಗಳ ವಿರುದ್ಧ ಕಾಯ್ದೆ ರೂಪಿಸಲಾಗಿದೆ. ಈ ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

೨೦೨೨ರ ಮಾಹಿತಿಯ ಪ್ರಕಾರ ದೇಶದಲ್ಲಿ ೫೭ ಸಾವಿರ ಪ್ರಕರಣಗಳು ನೋಂದಣಿಯಾಗಿವೆ. ಇದರಲ್ಲಿ ೫೨ ಸಾವಿರ ಪ್ರಕರಣಗಳು ೧೪ ಕಾಯ್ದೆಗಳಲ್ಲಿಯೇ ಕಂಡುಬಂದಿದೆ. ರಾಜ್ಯದಲ್ಲಿ ೨ ಸಾವಿರ ಪ್ರಕರಣಗಳು ನೋಂದಣಿಯಾಗಿವೆ ಎಂದು ತಿಳಿಸಿದರು. ದೌರ್ಜನ್ಯಕ್ಕೊಳಗಾದಾಗ ಕಾನೂನನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಅರಿವು ಮೂಡಿಸಲಾಗುತ್ತಿದೆ. ಈ ಕಾಯ್ದೆಯಡಿ ದೌರ್ಜನ್ಯ ಮಾಡಿದವರ ವಿರುದ್ಧ ಇರುವ ಶಿಕ್ಷೆಯ ಪ್ರಮಾಣದ ಬಗ್ಗೆ ತಿಳಿಸುವ ಮೂಲಕ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್. ನಂಜಯ್ಯ ಮಾತನಾಡಿ, ಎಸ್ಸಿ, ಎಸ್ಪಿ ಕಾಯಿದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆಗ ಮಾತ್ರ ದೇಶದ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಲಿದೆ ಎಂದರು. ಎಸ್ಸಿ, ಎಸ್ಟಿಗಳ ಮೇಲೆ ನಡೆಯುತ್ತಿದ್ದಂತಹ ಅಪರಾಧ ಪ್ರಕರಣಗಳನ್ನು ತಡೆಯಲು, ಅವುಗಳಿಗೆ ನ್ಯಾಯ ಹಾಗೂ ಪರಿಹಾರ ಒದಗಿಸುವ ಸಲುವಾಗಿ ಈ ಕಾಯಿದೆಗಳನ್ನು ಜಾರಿಗೆ ತರಲಾಗಿದೆ. ಅಲ್ಲದೇ ಈ ಪ್ರಕರಣ ಶೀಘ್ರವಾಗಿ ಇತ್ಯರ್ಥಗೊಳಿಸುವ ಸಲುವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಶೇಷ ನ್ಯಾಯಾಲಯವನ್ನು ತೆರೆದಿದೆ ಎಂದರು.

ದೌರ್ಜನ್ಯ ಪ್ರಕರಣಗಳಲ್ಲಿ ಶೇ.೯೫ ಪ್ರಕರಣಗಳು ಖುಲಾಸೆಯಾಗಿದ್ದು, ಸಾಕ್ಷ್ಯ ನಾಶ, ಬೆದರಿಕೆ, ಇನ್ನಿತರ ಆಮಿಷಗಳಿಂದ ಈ ರೀತಿ ಆಗುತ್ತಿವೆ ಎಂದರು. ಡಿವೈಎಸ್ಪಿ ಲಕ್ಷ್ಮಯ್ಯ ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮಗಳಲ್ಲಿರುವ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು, ಕಾರ್ಯಕ್ರಮದಲ್ಲಿ ಟಿ.ನರಸೀಪುರ ನಳಂದ ಬೌದ್ಧ ವಿಹಾರದ ಭಂತೆ ಬೋಧಿರತ್ನ ಸಾನ್ನಿಧ್ಯ ವಹಿಸಿದ್ದರು, ತಹಸೀಲ್ದಾರ್ ಗಿರಿಜಾ ಅಧ್ಯಕ್ಷತೆ ವಹಿಸಿದ್ದರು,

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್. ಮುನಿರಾಜು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಿ.ಶೈಲೇಶ್ ಕುಮಾರ್ ಪ್ರಜಾ ಪರಿವರ್ತನಾ ವೇದಿಕೆ ತಾಲೂಕು ಸಂಯೋಜಕ ಮಹೇಶ್ ಉಪಸ್ಥಿತರಿದ್ದರು. ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಪ್ರಾಸ್ತಾವಿಸಿ ಸ್ವಾಗತಿಸಿದರು.