ಪತ್ರಿಕೆಗಳಿಂದ ಲೋಕಜ್ಞಾನ ಹೆಚ್ಚಳ: ಕೆ.ಟಿ.ಹನುಮಂತು

| Published : Nov 17 2024, 01:17 AM IST

ಸಾರಾಂಶ

ಇಂದಿನ ಯುವಜನರು ಪತ್ರಿಕೆ ಓದುವ ಹವ್ಯಾಸದಿಂದ ದೂರ ಉಳಿದು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್‌, ಫೇಸ್‌ಬುಕ್, ಯ್ಯೂಟೂಬ್, ಇನ್‌ಸ್ಟಾಗ್ರಾಮ್, ರೀಲ್ಸ್‌ಗಳಲ್ಲಿ ಮುಳುಗಿ ಮಾನಸಿಕ ತೊಳಲಾಟಕ್ಕೆ ಒಳಗಾಗುತ್ತಿದ್ದಾರೆ, ಕಣ್ಣುಗಳ ಬೇನೆಗೆ ಒಳಗಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವಜನರು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಸಾಮಾನ್ಯಜ್ಞಾನ, ಲೋಕ ಜ್ಞಾನ ಹೆಚ್ಚಿಸಿಕೊಳ್ಳುವಂತೆ ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಸಲಹೆ ನೀಡಿದರು.

ನಗರದಲ್ಲಿರುವ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಅಸೋಷಿಯೆಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನ ಮತ್ತು ವಿಚಾರ ಸಂಕಿರಣ ಹಾಗೂ ನಂಜಮ್ಮ ಮೋಟೆಗೌಡ ಪತ್ರಿಕೋದ್ಯಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಯುವಜನರು ಪತ್ರಿಕೆ ಓದುವ ಹವ್ಯಾಸದಿಂದ ದೂರ ಉಳಿದು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್‌, ಫೇಸ್‌ಬುಕ್, ಯ್ಯೂಟೂಬ್, ಇನ್‌ಸ್ಟಾಗ್ರಾಮ್, ರೀಲ್ಸ್‌ಗಳಲ್ಲಿ ಮುಳುಗಿ ಮಾನಸಿಕ ತೊಳಲಾಟಕ್ಕೆ ಒಳಗಾಗುತ್ತಿದ್ದಾರೆ, ಕಣ್ಣುಗಳ ಬೇನೆಗೆ ಒಳಗಾಗುತ್ತಿದ್ದಾರೆ ಎಂದು ಎಚ್ಚರಿಸಿದರು.

ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಇವತ್ತಿನ ದಿನಮಾನದಲ್ಲಿ ಧಾವಂತದ ಬದುಕು ರೂಪುಗೊಳ್ಳುತಿದೆ. ಒತ್ತಡದಿಂದ ಜೀವನ ಸಾಗುತ್ತಿದೆ. ಇಂದಿನ ಯುವಜನರಿಗೆ ವಿದ್ಯೆ ಮತ್ತು ಆರೋಗ್ಯ ಅತ್ಯವಶ್ಯಕ. ಆರೋಗ್ಯವಿದ್ದರೆ ಐಶ್ವರ್ಯವಿದ್ದಂತೆ, ವಿದ್ಯಾರ್ಥಿಗಳು ಶಿಸ್ತಿನ ಬದುಕು ಕಟ್ಟಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದರು.

ಪತ್ರಿಕೆಗಳು ಸ್ವಾತಂತ್ರ್ಯ ಪರ್ವದಿಂದಲೂ ಇವೆ. ಜನರಲ್ಲಿ ಜಾಗೃತಿ, ಸ್ವಾತಂತ್ರ್ಯ ಚಳುವಳಿಯ ಮಾಹಿತಿ ನೀಡಲಿಕ್ಕೆ ಆರಂಭಗೊಂಡವು. ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಭಾಷೆಯ ಮೇಲೆ ಹಿಡಿತ ಸಾಧಿಸಬಹುದು ಎಂದರು.

ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನ, ಇಂದಿನ ವಿದ್ಯಮಾನಗಳ ಅರಿವು, ಭಾಷೆಹಿಡಿತ, ಬರವಣಿಗೆ ಶೈಲಿ, ಕೌಶಲಜ್ಞಾನ ಅತ್ಯವಶ್ಯಕ, ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಹಿಡಿತ ಇರಬೇಕು, ಅನುವಾದ ಮಾಡುವ ಪ್ರಜ್ಞಾವಂತಿಕೆ ಅಗತ್ಯ. ಇಷ್ಟು ಇದ್ದರೆ ಪತ್ರಕರ್ತರಾಗಿ ಬೆಳವಣಿಗೆ ಕಂಡು ಉದ್ಯೋಗಸ್ಥರಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಶ್ರೀನಂಜಮ್ಮ ಮೋಟೆಗೌಡ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ೫ ಸಾವಿರ ರು. ನಗದು ಪುರಸ್ಕಾರವನ್ನು ಹಿರಿಯ ಪತ್ರಕರ್ತ ಪಿ.ಜೆ.ಚೈತನ್ಯಕುಮಾರ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ‍್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ, ಪ್ರಾಂಶುಪಾಲ ಡಾ.ಕೆ. ಗುರುರಾಜಪ್ರಭು, ಪ್ರೊ.ಬಿ.ಜಯಪ್ರಕಾಶಗೌಡ, ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಂ, ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್, ಕರ‍್ಯಕ್ರಮ ಸಂಯೋಜಕ ಡಾ.ಎಚ್.ಎಸ್.ಶಿವರಾಜ್ ಹಾಜರಿದ್ದರು.