ಕೆಎನ್‌ಆರ್ ವಜಾ: ವಾಲ್ಮೀಕಿ ಮುಖಂಡರ ಖಂಡನೆ

| Published : Aug 13 2025, 12:30 AM IST

ಸಾರಾಂಶ

ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೆ.ಎನ್.ರಾಜಣ್ಣ ಅವರನ್ನು ವಿನಾಕಾರಣ ಸಚಿವ ಸಂಪುಟದಿಂದ ವಜಾಗೊಳಿಸಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ಜಿಲ್ಲೆಯ ವಾಲ್ಮೀಕಿ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮದ ಹಿಂದೆ ದೊಡ್ಡ ಷಡ್ಯಂತರ ನಡೆದಿದೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೆ.ಎನ್.ರಾಜಣ್ಣ ಅವರನ್ನು ವಿನಾಕಾರಣ ಸಚಿವ ಸಂಪುಟದಿಂದ ವಜಾಗೊಳಿಸಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ಜಿಲ್ಲೆಯ ವಾಲ್ಮೀಕಿ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮದ ಹಿಂದೆ ದೊಡ್ಡ ಷಡ್ಯಂತರ ನಡೆದಿದೆ ಎಂದು ಆರೋಪಿಸಿದ್ದಾರೆ.ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಸಮಾಜದ ಮುಖಂಡ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮಾಜ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ನಮ್ಮ ಸಮಾಜದ ಹಲವಾರು ನಾಯಕರ ಜೊತೆಗೆ ಕೆ.ಎನ್.ರಾಜಣ್ಣನವರೂ ಪಕ್ಷವನ್ನು ಅಧಿಕಾರಕ್ಕೆತರಲು ಶ್ರಮಿಸಿದ್ದರು. ಇವರ ಸೇವೆ, ಕೊಡುಗೆ ಗುರುತಿಸದೆ, ಬಳಸಿ ಬಿಸಾಕುವಂತೆ ಮಂತ್ರಿ ಸ್ಥಾನದಿಂದ ವಜಾಗೊಳಿಸಿರುವುದನ್ನು ವಾಲ್ಮೀಕಿ ಸಮಾಜಕ್ಕೆ ಸಹಿಸಲು ಸಾಧ್ಯವಿಲ್ಲ. ಕೆ.ಎನ್.ರಾಜಣ್ಣನವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಬುಧವಾರ ನಗರದಲ್ಲಿ ಕೆ.ಎನ್.ಆರ್ ಅಭಿಮಾನಿಗಳು, ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ವಾಲ್ಮೀಕಿ ಸಮಾಜದವರು ಬೆಂಬಲಿಸಿ ಭಾಗವಹಿಸುವರು ಎಂದು ಹೇಳಿದರು.

ಕೆ.ಎನ್.ರಾಜಣ್ಣನವರು ಸತ್ಯವನ್ನೇ ಮಾತನಾಡಿದ್ದಾರೆ. ಅದನ್ನುತಪ್ಪಾಗಿ ಬಿಂಬಿಸಿ, ಅದನ್ನೇ ನೆಪವಾಗಿಟ್ಟುಕೊಂಡು ಪಿತೂರಿ ಮಾಡಿ ಮಂತ್ರಿ ಪದವಿಯಿಂದ ತೆಗೆದಿರುವುದು ಸಮಾಜದ ಎಲ್ಲರಿಗೂ ನೋವಾಗಿದೆ. ಈ ಬಗ್ಗೆ ಮುಂದಿನ ಹೋರಾಟ ರೂಪಿಸುವ ಬಗ್ಗೆ ನಮ್ಮ ಸಮಾಜದ ಸ್ವಾಮೀಜಿಗಳೂ ಚರ್ಚೆ ಮಾಡಿದ್ದಾರೆ. ಮತ್ತೆ ಸಚಿವ ಪದವಿ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಿಂಗದಹಳ್ಳಿ ರಾಜಕುಮಾರ್ ಎಚ್ಚರಿಸಿದರು.ಜಿಲ್ಲಾ ವಾಲ್ಮೀಕಿ ಸಂಘದ ಕಾರ್ಯದರ್ಶಿಯೂ ಆದ ಮಾಜಿ ಮೇಯರ್ ಬಿಜಿ.ಕೃಷ್ಣಪ್ಪ ಮಾತನಾಡಿ, ಕೆ.ಎನ್.ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ರಾಜ್ಯದ ವಾಲ್ಮೀಕಿ ಸಮಾಜವನ್ನು ಕಾಂಗ್ರೆಸ್ ನಾಯಕರು ಅವಮಾನಿಸಿದ್ದಾರೆ. ರಾಜಣ್ಣನವರು ಹಣಕಾಸಿನ ದುರುಪಯೋಗ ಮಾಡಿಕೊಂಡಿಲ್ಲ, ಯಾವುದೂ ತಪ್ಪು ಮಾಡಿಲ್ಲ. ಸತ್ಯ ಹೇಳುವುದೇ ತಪ್ಪೆ?ಎಂದು ಪ್ರಶ್ನಿಸಿದರು.ಎಲ್ಲಾ ಸಮುದಾಯದವರಿಗೂ ಸಹಾಯ ಮಾಡುತ್ತಾ ಜನಾನುರಾಗಿ ನಾಯಕರಾಗಿ ಬೆಳೆದಿರುವ ರಾಜಣ್ಣನವರು ಹೇಳಿಕೆ ನೀಡಿದಾಗ, ಅದಕ್ಕೆ ಸಮಜಾಯಿಷಿಯನ್ನೂ ಕೇಳದೆ ಏಕಾಏಕಿ ವಜಾ ಮಾಡಿದ್ದು ಖಂಡನೀಯ.ವಜಾ ಕ್ರಮವನ್ನು ವಾಪಸ್ ಪಡೆದು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕು. ವಾಲ್ಮೀಕಿ ಸಮಾಜಕ್ಕೆಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ನಾಯಕ ಸಮಾಜ ಉಗ್ರ ಹೋರಾಟ ಮಾಡುತ್ತದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಯ್ಯ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖಂಡರಾದಕೆಂಪಹನುಮಯ್ಯ, ಪ್ರತಾಪ್ ಮದಕರಿ, ಸರಸ್ವತಮ್ಮ, ಪಿ.ಬಿ.ಬಸವರಾಜು, ಶೀತಕಲ್ ಕೃಷ್ಣಯ್ಯ, ಶ್ರೀಧರ್ ಮೊದಲಾದವರು ಹಾಜರಿದ್ದರು.