ಕೊಡಗರಹಳ್ಳಿಯ ಜನ ವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಸುಂಟಿಕೊಪ್ಪ: ಕೊಡಗರಹಳ್ಳಿಯ ಜನ ವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕಾಡಾನೆಯೊಂದು ರಾತ್ರಿ ವೇಳೆ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಫಸಲನ್ನು ನಾಶಗೊಳಿಸುತ್ತಿರುವುದು ಮಾತ್ರವಲ್ಲದೆ ಶುಕ್ರವಾರ ಬೆಳಗ್ಗೆ ೬ ಗಂಟೆಗೆ ರಾಜಾರೋಷವಾಗಿ ಜನ ವಸತಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಂಚಾರ ನಡೆಸುತ್ತಿರುವುದು ಆತಂಕ ಮೂಡಿಸಿದೆ. ಮೊಟ್ಟಂಡ ಕುಟ್ಟಪ್ಪನವರ ತೋಟದಿಂದ ಮುಖ್ಯ ರಸ್ತೆಗೆ ಬಂದ ಆನೆ ಗ್ರಾಮ ಪಂಚಾಯಿತಿ ಮತ್ತು ಸ್ಕೂಲ್ಬಾಣೆ ನಡುವಿನ ಕಂಬಿಬಾಣೆ ರಸ್ತೆಯಲ್ಲಿ ಸಂಚರಿಸಿ ಪಂಚಾಯಿತಿ ನೌಕರ ಧನಂಜಯ ಎಂಬವರ ಮನೆ ಸಮೀಪದ ತೋಟದೊಳಗೆ ಸಾಗಿ ಹೋಗಿದೆ. ಅದೃಷ್ಟವಶಾತ್ ಮುಖ್ಯ ರಸ್ತೆ ಬದಿಯಲ್ಲಿ ವಾಹನಗಳು ನಿಂತಿದ್ದು, ಜನತೆಯ ಓಡಾಟ ವಿರಳವಾಗಿತ್ತು. ಈ ಕಾಡಾನೆ ಹೊರಗೆ ಬರುತ್ತಿದ್ದಂತೆ ಘೀಳಿಟ್ಟ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ಅತಂಕದಿಂದ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಲ್ಲಿಯ ತನಕ ಕಾಡಾನೆಗಳು ಕೃಷಿ ಫಸಲಿನ ತೋಟ ಹಾಗೂ ಗದ್ದೆಗಳಲ್ಲಿ ಕಾಣಿಸಿಕೊಂಡು ಫಸಲನ್ನು ತಿಂದು ಕೆಲವೊಮ್ಮೆ ಕಾಡಿಗೆ ಹಿಂತಿರುಗದೆ ತೋಟಗಳಲ್ಲೇ ಬಿಡು ಬಿಡುತ್ತಿದ್ದವು ಅಲ್ಲದೆ ಕಾಡಾನೆಗಳು ತೋಟದ ಭದ್ರತೆಗೆ ಅಳವಡಿಸಿದ ಬೇಲಿಗಳನ್ನು ನಾಶಗೊಳಿಸುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಮುಖ್ಯ ರಸ್ತೆ ಜನ ವಸತಿ ಪ್ರದೇಶಗಳಲ್ಲಿ ಸಂಚಾರ ನಡೆಸುವುದು ಆರಂಭಿಸಿರುವುದರಿಂದ ಗ್ರಾಮಸ್ಥರು ಆತಂಕ ಪಡುವಂತಾಗಿದೆ ಸಂಬಂಧಿಸಿದ ಇಲಾಖೆಯವರು ಕಾಡಾನೆಗಳ ನಿಯಂತ್ರಣ ಮತ್ತು ಮುಂದಾಗಲಿರುವ ಭಾರಿ ಅನಾಹುತಗಳು ಘಟಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.