ಸಾರಾಂಶ
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರ 46 ನೇ ವಾರ್ಷಿಕ ಮಹೋತ್ಸವ ಏ.29 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದು ಬುಧವಾರ ಕೊನೆಗೊಂಡಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರ 46 ನೇ ವಾರ್ಷಿಕ ಮಹೋತ್ಸವ ಏ.29 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಧ್ಯುಕ್ತವಾಗಿ ನಡೆದ್ದು, ಬುಧವಾರ ಸಂಪನ್ನಗೊಂಡಿತು.ಸೋಮವಾರ ಪೂರ್ವಾಹ್ನ ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದವು. ಇದರ ಅಂಗವಾಗಿ ದೇವಾಲಯ ಸೇರಿದಂತೆ ತಳಿರು ತೋರಣ ವಿದ್ಯುತ್ ದೀಪಾಂಲಕಾರಗಳಿಂದ ಸಿಂಗರಿಸಲಾಗಿತ್ತು. ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಮೂರು ದಿನಗಳ ಕಾಲ ನಡೆದ ವಾರ್ಷಿಕ ಮಹೋತ್ಸವದಲ್ಲಿ ಭಾಗಿಗಳಾಗಿದ್ದರು.
ಸಂಜೆ 7 ಗಂಟೆಯಿಂದ ದೀಪರಾಧನೆ ಏಳು ಸುತ್ತಿನ ಪ್ರದಕ್ಷಣೆ ಹಾಗೂ ಶ್ರೀ ಚಾಮುಂಡಿ ತಂಡದಿಂದ ಚಂಡೆ ಮೇಳ ಜರುಗಿತು. ಮಂಗಳವಾರ ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆಯೊಂದಿಗೆ ಭಕ್ತರ ಹರಕೆ ಮತ್ತು ಬೇಡಿಕೆಗಳು ನಡೆದವು. ಮಂಗಳವಾರ ರಾತ್ರಿಯಿಂದ ವಿವಿಧ ದೈವಗಳ ಕೋಲ ನಡೆದ ಸಂದರ್ಭ ಆಕರ್ಷಕ ಪಟಾಕಿ ಮತ್ತು ಸಿಡಿಮದ್ದಿನ ಕಾರ್ಯಕ್ರಮ ಬಾನಂಗಳದಲ್ಲಿ ಚೆಲುವಿನ ಚಿತ್ತಾರವನ್ನು ಬಿಡಿಸಿತು.ಬುಧವಾರ ಪೂರ್ವಾಹ್ನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ರಾತ್ರಿ 8 ಗಂಟೆಗೆ ಶ್ರೀದೇವಿ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.