ಕೊಡಗು ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ ಪ್ರಣಾಳಿಕೆ ಬಿಡುಗಡೆ

| Published : Apr 18 2024, 02:16 AM IST

ಸಾರಾಂಶ

ಮೈಸೂರು - ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್, ಕೊಡಗು - ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯನ್ನು ಬುಧವಾರ ಮಡಿಕೇರಿ ಖಾಸಗಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಮುಖ್ಯಮಂತ್ರಿ ಅನುಮತಿ ಪಡೆದು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇನೆ. 21ರಂದು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೈಸೂರು - ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್, ಕೊಡಗು - ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯನ್ನು ಬುಧವಾರ ನಗರದ ಖಾಸಗಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭ ಮಾತನಾಡಿದ ಎಂ. ಲಕ್ಷ್ಮಣ್, ಮುಖ್ಯಮಂತ್ರಿ ಅನುಮತಿ ಪಡೆದು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇನೆ. 21ರಂದು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗುವುದು. ನಾವು ಪ್ರಣಾಳಿಕೆಯಲ್ಲಿ ನೀಡುವ ಭರವಸೆಯನ್ನು ಐದು ವರ್ಷದಲ್ಲಿ ಈಡೇರಿಸುತ್ತೇವೆ. ಅಭ್ಯರ್ಥಿಯಾಗಿ ಪ್ರತ್ಯೇಕವಾಗಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು ಎಂದು ತಿಳಿಸಿದರು.

ಮತದಾರರ ಮತ, ವ್ಯರ್ಥ ಆಗದಂತೆ ನಡೆದುಕೊಳ್ಳುತ್ತೇನೆ. ಗೆದ್ದು ಭರವಸೆ ಈಡೇರಿಸದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪ್ರತಾಪ ಸಿಂಹ ನನ್ನ ಕಟಿ ಬದ್ದ ವೈರಿ ಅಲ್ಲ. ಈಗಲೂ ನನಗೆ ಅವರು ಆತ್ಮೀಯ ಸ್ನೇಹಿತ. ಅವರು ಹೇಳಿರುವ ಸುಳ್ಳನ್ನು ಈ ಹಿಂದೆ ಪ್ರಶ್ನಿಸಿದ್ದೇನೆ ಅಷ್ಟೇ ಎಂದು ತಿಳಿಸಿದರು.

ಮೋದಿ ಅವರು ಈ ಹಿಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಮೈಸೂರಿಗೆ ಆಗಮಿಸಿದ್ದ ಸಂದರ್ಭ ಪ್ರತಾಪ್ ಸಿಂಹ ಅವರು ಗೆದ್ದರೆ ಕೊಡಗನ್ನು ಸ್ವಿಜರ್ಲ್ಯಾಂಡ್ ಹಾಗೂ ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಹೇಳಿದ್ದರು. ಆದರೆ ಪತ್ರ ವ್ಯವಹಾರ ಕೂಡ ಆಗಿಲ್ಲ. ಕೊಡಗಿನ ರೈತರ ಸಮಸ್ಯೆ, ಕಾಫಿ ಬೆಳೆಗಾರರು, ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ. ಆದರೂ ಇಲ್ಲಿನ ಸಂಸದರು ಸಮಸ್ಯೆ ಬಗೆಹರಿಸಿಲ್ಲ ಎಂದು ಹೇಳಿದರು.

ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸಂಸದರು ಮೈಸೂರಿನಲ್ಲಿ ಕುಳಿತರೆ ಸಾಲದು. ಇಲ್ಲಿನ ಜನರ ಸಮಸ್ಯೆ ಕೂಡ ಆಲಿಸಬೇಕಿತ್ತು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಗೆಲವು ಸಾಧಿಸುವುದು ಖಚಿತ ಎಂದು ಹೇಳಿದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಮಾತಿನಲ್ಲೇ ಕೆಲವು ಅಭ್ಯರ್ಥಿಗಳು ಚುನಾವಣೆ ನಡೆಸುತ್ತಾರೆ. ಕೊಡಗಿಗೆ ಲಕ್ಷ್ಮಣ್ ಅವರು ಧ್ವನಿಯಾಗಿ ಕೆಲಸ ಮಾಡುವ ಭರವಸೆಯಿದೆ. ಶಾಸಕರಾದ ನಾವು ಅವರೊಂದಿಗೆ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತೇವೆ. ಅನ್ಯಾಯ ಮಾಡುವುದಿಲ್ಲ‌ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂಎಲ್‌ಸಿ ವೀಣಾ, ಟಿ.ಪಿ. ರಮೇಶ್, ಚಂದ್ರಕಲಾ ಹಾಜರಿದ್ದರು.