ಕನ್ನಡಪ್ರಭ ವಾರ್ತೆ ಶನಿವಾರಸಂತೆ

‘ರಾಜ್ಯಕ್ಕೆ ರಾಜಕೀಯ, ಕ್ರೀಡೆ, ಸೈನಿಕ, ಸಾಂಸ್ಕೃತಿಕ ಕ್ಷೇತ್ರ ಹಾಗೂ ಬೆಂಗಳೂರು ಅಭಿವೃದ್ಧಿಗೆ ಕೊಡಗಿನ ಕೊಡುಗೆ ಅಪಾರವಾದುದು ಎಂದು ರಾಜ್ಯ ರಸ್ತೆ ಸಾರಿಗೆ ಮತ್ತು ಮುಜರಾಯ ಖಾತೆ ಸಚಿವ ಬಿ. ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಶನಿವಾರಸಂತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ವತಿಯಿಂದ ನಿರ್ಮಾಣಗೊಂಡಿರುವ ನೂತನ ಬಸ್‌ ನಿಲ್ದಾಣವನ್ನು ಶನಿವಾರ ಲೋಕಾರ್ಪಣೆಗೊಳಿಸಿ, ನಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶನಿವಾರಸಂತೆ ರಸ್ತೆ ಸಾರಿಗೆ ಬಸ್‌ ನಿಲ್ದಾಣಕ್ಕೆ ಶನಿವಾರಸಂತೆಯಲ್ಲಿ ಜನಿಸಿದ ವೀರ ಸೇನಾನಿ ಭಾರತದ ಪ್ರಥಮ ಮಹಾ ದಂಡ ನಾಯಕ ಕಾರ್ಯಪ್ಪ ಅವರ ಹೆಸರನ್ನು ಇಡಲು ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆ ಸರಕಾರ ಅನುಮೋದಿಸಿದ ಬಳಿಕ ನಿಲ್ದಾಣಕ್ಕೆ ಫಲಕ ಹಾಕಲಾಗುತ್ತದೆ. ಬೆಂಗಳೂರು ಕಾವೇರಿ ನೀರಿನಿಂದ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಕಾವೇರಿ ನದಿಯ ಉಗಮ ಸ್ಥಳವಾದ ತಲ ಕಾವೇರಿ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 7 ಸಾವಿರ ರಸ್ತೆ ಸಾರಿಗೆ ಬಸ್‌ಗಳನ್ನು ಕಲ್ಪಿಸಿಕೊಟ್ಟು ಸಂಚರಿಸುತ್ತಿವೆ ಮತ್ತು ಮುಂದಿನ ಬಜೆಟ್ ಅವಧಿಗೆ ಇನ್ನೂ 2 ಸಾವಿರ ಬಸ್‌ಗಳನ್ನು ಕಲ್ಪಿಸಿಕೊಡುವ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಮೂಲಕ ಇಲ್ಲಿಯವರೆಗೆ 6 ಸಾವಿರ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದ ಸಚಿವರು, ರಸ್ತೆ ಸಾರಿಗೆ ಬಸ್‌ ನಿಲ್ದಾಣ ಮತ್ತು ಶೌಚಾಲಯವನ್ನು ಶುಚಿತ್ವದಿಂದ ಕಾಪಾಡಿಕೊಳ್ಳುವ ಸಲುವಾಗಿ ಸಂಬಂಧಿಸಿದ ಡಿಪೋ ಜಿಲ್ಲಾಧಿಕಾರಿ ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನೀಡಲು ಸೂಚಿಸಲಾಗಿದೆ ಎಂದರು. ಶನಿವಾರಸಂತೆ ಬಸ್‌ ನಿಲ್ದಾಣದ ಮುಂದುವರಿದ ಅಭಿವೃದ್ದಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವ ಜೊತೆಯಲ್ಲಿ ಕೊಡ್ಲಿಪೇಟೆಯಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸು ನಿಲ್ದಾಣ ನಿರ್ಮಿಸಿಕೊಡಲು ಪ್ರಸ್ತಾವನೆ ಬಂದಿದ್ದು, ಸೂಕ್ತ ಜಾಗವನ್ನು ಗುರುತು ಮಾಡಿದರೆ ಅನುದಾನ ಮಂಜೂರಾತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.


ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿದ್ದು ಮತ್ತಷ್ಟು ರಸ್ತೆ ಸಾರಿಗೆ ಬಸ್ಸುಗಳ ಅಗತ್ಯವಿ ದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು ಮತ್ತಷ್ಟು ರಸ್ತೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಸಚಿವ ರಾಮಲಿಂಗಾ ರೆಡ್ಡಿ ಅವರು ಕುಶಾಲಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪುತ್ತೂರು ವಿಭಾಗದ ಕುಶಾಲನಗರ ಡಿಪೋಗೆ ಅನುದಾನ ನೀಡಿರುವ ಜೊತೆಯಲ್ಲಿ ಮುಜರಾಯ ಇಲಾಖೆ ಮೂಲಕ ಕೊಡಗಿನ ದೇವಸ್ಥಾನಗಳ ಅಭಿವೃದ್ದಿಗೂ ಹೆಚ್ಚನ ಅನುದಾನ ನೀಡಿರುವ ಮೂಲಕ ಕೊಡಗು ಜಿಲ್ಲೆಯ ಅಭಿವೃದ್ದಿಗೆ ಸಹಕರಿಸುತ್ತಿರುತ್ತಿರುವುದು ಶ್ಲಾಘನಿಯ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ, ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿದರು.

ಕೊಡಗು ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ಡಿಸಿ ಹರಿಬಾಬು, ಪ್ರಮುಖರಾದ ವೀಣಾ ಅಚ್ಚಯ್ಯ, ಕೆ.ಪಿ. ಚಂದ್ರಕಲಾ, ಸತೀಶ್, ಧರ್ಮಜ ಉತ್ತಪ್ಪ, ಶರತ್ ಶೇಖರ್, ವಿ.ಪಿ. ಶಶಿಧರ್, ಶನಿವಾರಸಂತೆ, ದುಂಡಳ್ಳಿ, ನಿಡ್ತ, ಹಂಡ್ಲಿ, ಬ್ಯಾಡಗೊಟ್ಟ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.