ಗೌರಿ-ಗಣೇಶ ಹಬ್ಬದ ಬಳಿಕ ತಾಲೂಕಿನಾದ್ಯಂತ ಮಳೆ ಅಲ್ಲಲ್ಲಿ ಬಿದ್ದಿದ್ದು, ಕೆರೆಗೆ ನೀರಿಗಾಗಿ ಹಾತೊರೆಯುತ್ತಿದ್ದ ಕೊಡಸೋಗೆ ಭಾಗದಲ್ಲಿ ಸೋಮವಾರ ಹಾಗೂ ಮಂಗಳವಾರ ಸಂಜೆ ಬೀಸಿದ ಗಾಳಿ ಹಾಗೂ ಗುಡುಗು ಹಾಗೂ ಆಲಿಕಲ್ಲು ಸಹಿತ ದಿಢೀರ್‌ ಮಳೆಗೆ ಮಳೆ, ಬೆಳೆ ಇಲ್ಲದೆ ಹಾಗೂ ಕೆರೆಗಳಿಗೆ ನೀರಿಲ್ಲದೆ ಕೆಂಡಾಮಂಡಲವಾದ ರೈತರು ಹಾಗೂ ಜನರಿಗೆ ತಂಪನ್ನೆರೆಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗೌರಿ-ಗಣೇಶ ಹಬ್ಬದ ಬಳಿಕ ತಾಲೂಕಿನಾದ್ಯಂತ ಮಳೆ ಅಲ್ಲಲ್ಲಿ ಬಿದ್ದಿದ್ದು, ಕೆರೆಗೆ ನೀರಿಗಾಗಿ ಹಾತೊರೆಯುತ್ತಿದ್ದ ಕೊಡಸೋಗೆ ಭಾಗದಲ್ಲಿ ಸೋಮವಾರ ಹಾಗೂ ಮಂಗಳವಾರ ಸಂಜೆ ಬೀಸಿದ ಗಾಳಿ ಹಾಗೂ ಗುಡುಗು ಹಾಗೂ ಆಲಿಕಲ್ಲು ಸಹಿತ ದಿಢೀರ್‌ ಮಳೆಗೆ ಮಳೆ, ಬೆಳೆ ಇಲ್ಲದೆ ಹಾಗೂ ಕೆರೆಗಳಿಗೆ ನೀರಿಲ್ಲದೆ ಕೆಂಡಾಮಂಡಲವಾದ ರೈತರು ಹಾಗೂ ಜನರಿಗೆ ತಂಪನ್ನೆರೆಯಿತು.

ಕಳೆದ ಜೂನ್‌ನಿಂದಲೂ ಮಳೆ ಬೀಳದೆ ತಾಲೂಕಿನಾದ್ಯಂತ ಬೆಂದು ಬೆಂಡಾಗಿದ್ದ ಜನರು, ಬಿತ್ತನೆ ಮಾಡಿದ ಫಸಲು ಕೈ ಸೇರಲಿಲ್ಲ. ಇತ್ತ ಅಂತರ್ಜಲ ಕುಸಿದು ಬೋರ್‌ನಲ್ಲೂ ನೀರಿಲ್ಲದೆ ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿ ಹೋಗಿದ್ದರು.

ಕಳೆದ ಸೆ.14ರ ಗೌರಿ-ಗಣೇಶ ಹಬ್ಬ ಒಂದೇ ದಿನ ಬಂದ ಕಾರಣವೋ ಅಥವಾ ರೈತರು ಗೌರಿ-ಗಣೇಶನ ಪೂಜಿಸಿದ ಫಲವೋ ಏನೋ ಸೋಮವಾರ ರಾತ್ರಿ ಹಾಗೂ ಮಂಗಳವಾರ ಸಂಜೆ ಕೊಡಸೋಗೆ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಮಳೆ ಧಾರಾಕಾರವಾಗಿಯೇ ಸುರಿದಿದೆ.

ಎರಡು ಮಳೆಗೆ ಕೊಡಸೋಗೆ,ಬೊಮ್ಮಲಾಪುರ,ಸೀಲವಂತಪುರ,ಯರಿಯೂರು, ಸೋಮನಪುರ,ಕರಕಲಮಾದಹಳ್ಳಿ,ಕೆಕೆ ಹುಂಡಿ,ಅಂಕಹಳ್ಳಿ ಹಾಗೂ ಹಂಗಳ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಳೆ ಬೀಳುವ ಮೂಲಕ ಒಣಗಿದ ನಿಂತ ಜಮೀನಿನಲ್ಲಿ ನೀರು ಹರಿದನ್ನು ಕಂಡು ರೈತರು ಸಂಸತ ಪಟ್ಟಿದ್ದಾರೆ.

ರೈತರ ಜಮೀನಿನ ಹಳ್ಳ, ಕೊಳ್ಳಗಳಲ್ಲಿ ಮಳೆಯ ನೀರು ಹರಿದಿದೆ.ಸದ್ಯ ಮಳೆನಾದರೂ ಬಂದಲ್ಲ ಎಂದು ಕೊಡಸೋಗೆ ಗ್ರಾಮದ ಶಿವಪ್ರಸಾದ್‌ ಪ್ರತಿಕ್ರಿಯಿಸಿ, ಸೋಮವಾರ ರಾತ್ರಿ ಹಾಗೂ ಮಂಗಳವಾರ ಸಂಜೆ ಮಳೆಗೆ ಭೂಮಿ ಸ್ವಲ್ಪ ತಂಪಾಗಿದೆ ಎಂದರು.

ತೋಟಗಾರಿಕೆ ಬೆಳೆಗೆ ತಾತ್ಕಾಲಿಕ ಅನುಕೂಲ:

ತಾಲೂಕಿನಲ್ಲಿ ಮಳೆ ಇಲ್ಲದೆ ಹಾಗೂ ಬೋರ್‌ ನಲ್ಲೂ ನೀರು ಕಡಿಮೆಯಾಗಿ ಒಣಗಿದ್ದ ಅಳಿದುಳಿದ ತೋಟಗಾರಿಕೆ ಬೆಳೆಗಳಿಗೆ ಈ ಮಳೆ ಸ್ವಲ್ಪ ತಾತ್ಕಾಲಿಕವಾಗಿ ಅನುಕೂಲವಾಗಲಿದೆ.

ಜತೆಗೆ ಭೂಮಿ ಉಳುಮೆ ಮಾಡಲಿಕ್ಕೆ ಅನುಕೂಲ ಮತ್ತು ಮತ್ತೆ ಮಳೆಯಾದರೆ ಹುರುಳಿ ಬಿತ್ತನೆಗೂ ಸಹಕಾರಿಯಾಗಲಿದೆ. ಮೇವಿಗೂ ಸ್ವಲ್ಪ ಅನುಕೂಲವಾಗಲಿದೆ ಎನ್ನಬಹುದು.

ಮಳೆ ಆಧಾರಿತ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣ ನೆಲ ಕಚ್ಚಿವೆ. ಈ ಮಳೆಯಿಂದ ಯಾವುದೇ ಪ್ರಯೋಜನ ಕೂಡ ಆಗಲ್ಲ. ತೋಟಗಾರಿಕೆ ಬೆಳೆಗೆ ಸದ್ಯಕ್ಕೆ ತಾತ್ಕಾಲಿಕ ರಿಲೀಪ್‌ ಸಿಕ್ಕಿದೆ.