ಮಡಿಕೇರಿ: ಅಖಿಲ ಅಮ್ಮ ಕೊಡವ ಸಮಾಜ ಮತ್ತು ಬಾನಂಡ ಕುಟುಂಬಸ್ಥರ ಸಹಯೋಗದಲ್ಲಿ ಮೇ ೧ರಿಂದ ೩ರವರೆಗೆ ಬಾನಂಡ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್. ಪ್ರತ್ಯು ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೬ ಓವರ್‌ನ ಪಂದ್ಯಾಟ ಇದಾಗಿದ್ದು, ಸುಮಾರು ೨೪ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಳ್ಗೊಳ್ಳುತ್ತಿವೆ. ಕ್ರೀಡಾಕೂಟವನ್ನು ಅಮ್ಮ ಕೊಡವ ಸಹಕಾರದಲ್ಲಿ ನಡೆಸಲಾಗುತ್ತಿದೆ ಎಂದ ಅವರು. ಕಳೆದ ಬಾರಿ ಶಾಸಕ ಪೊನ್ನಣ್ಣ ಅವರ ಸಹಕಾರದಿಂದ ೫ ಲಕ್ಷ ರು. ಅನುದಾನ ಕ್ರೀಡಾಕೂಟಕ್ಕೆ ಲಭ್ಯವಾಗಿತ್ತು. ಜತೆಗೆ ಸಮುದಾಯದ ಅಭಿವೃದ್ಧಿಗೆ ೨೫ ಲಕ್ಷ ಅನುದಾನ ನೀಡಿದ್ದರು. ಈ ಬಾರಿಯು ಕ್ರೀಡಾಕೂಟಕ್ಕೆ ಅನುದಾನದ ನಿರೀಕ್ಷೆಯಲಿದ್ದೇವೆ ಎಂದು ಮಾಹಿತಿ ನೀಡಿದರು.ಅಂದು ಬೆಳಗ್ಗೆ ೯ ಗಂಟೆಗೆ ಮಾಯಮುಡಿಯ ಶ್ರೀರಾಮ ದೇವಾಸ್ಥಾನದಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಅಮ್ಮ ಕೊಡವ ಸಮಾಜಬಾಂಧವರು ಸಾಂಪ್ರಾದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ೧೦ ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾನಂಡ ಕುಟುಂಬದ ಅಧ್ಯಕ್ಷ ಬಾನಂಡ.ಎಸ್.ರಮೇಶ್ ವಹಿಸಲಿದ್ದು, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್.ಪ್ರತ್ಯು, ಇಂಧನ ಸಚಿವ ಕೆ.ಜೆ.ಜಾರ್ಜ್, ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಮೈಸೂರಿನ ಮುಖ್ಯ ನ್ಯಾಯಾಧೀಶರಾದ ಅಮ್ಮತ್ತೀರ ಶಿಲ್ಪಾ ಗಣೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೇ ೩ರ ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಎನ್.ಪ್ರತ್ಯು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಾನಂಡ ಕುಟುಂಬದ ಅಧ್ಯಕ್ಷ ಬಾನಂಡ.ಎಸ್.ರಮೇಶ್, ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್, ಎಂಎಲ್‌ಸಿ ಮಂಡೆಪಂಡ ಅರುಣ್ ಮಾಚಯ್ಯ, ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕೋಣಿಯಂಡ ಸಿ.ಅಪ್ಪಣ್ಣ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.ಬಾನಂಡ ಕುಟುಂಬದ ಕಾರ್ಯದರ್ಶಿ ಬಾನಂಡ ಸೂದನ್, ಖಜಾಂಚಿ ಬಾನಂಡ ಪ್ರಕಾಶ್, ಕ್ರೀಡಾಕೂಟದ ಸಂಚಾಲಕರಾದ ಕೃಷಿರಾಜ್, ಅಮ್ಮಕೊಡವ ಸಮಾಜದ ನಿರ್ದೇಶಕ ಜನಾರ್ಧನ ಸುದ್ದಿಗೋಷ್ಠಿಯಲ್ಲಿದ್ದರು.