ಗುಣಮಟ್ಟದ ಸಂಸ್ಕರಣೆ, ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಕಟ್ಟುನಿಟ್ಟಿನ ಸ್ವಚ್ಛತಾ ಮಾನದಂಡ ಪಾಲಿಸುವ ಮೂಲಕ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಒಕ್ಕೂಟ (ಕೆಒಎಫ್) ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಗುಣಮಟ್ಟದ ಸಂಸ್ಕರಣೆ, ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಕಟ್ಟುನಿಟ್ಟಿನ ಸ್ವಚ್ಛತಾ ಮಾನದಂಡ ಪಾಲಿಸುವ ಮೂಲಕ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಒಕ್ಕೂಟ (ಕೆಒಎಫ್) ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಶ್ಲಾಘಿಸಿದರು.ನಗರದಲ್ಲಿ ಕೆಒಎಫ್ನಿಂದ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ನೂತನ ಗೋದಾಮು ಕಟ್ಟಡ, ಹಾಸಾರ್ಟೆಕ್ಸ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿ, ಕೆಓಎಫ್ ಸಂಸ್ಥೆಯು ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯ ಕಲ್ಪನೆಯಂತೆ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ರಡಿ 1984 ಅ.26ರಂದು ನೋಂದಾಯಿಸಲ್ಪಿಟ್ಟಿದ್ದು, 4 ದಶಕದಿಂದ ರೈತರ ಹಿತದೃಷ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಳೆದ 40 ವರ್ಷದಿಂದ ಸಫಲ್ ಬ್ರ್ಯಾಂಡ್ ಹೆಸರಿನಿಂದ ಉನ್ನತ ಗುಣಮಟ್ಟದ ವಿವಿಧ ಖಾದ್ಯ ತೈಲಗಳು ಹಾಗೂ ಬಿತ್ತನೆ ಬೀಜಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಸರಬರಾಜು ಮಾಡುತ್ತಿದೆ. 5 ವರ್ಷದಿಂದ ಕೃಷಿ ಉತ್ಪನ್ನಗಳ ಮಾರಾಟದಲ್ಲೂ ಯಶಸ್ವಿಯಾಗಿದೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸಂಸ್ಥೆಯು ಸ್ವಂತ ಮಾರಾಟ ಮಳಿಗೆ ಸ್ಥಾಪಿಸಿ, ಅವುಗಳ ಮೂಲಕ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನ ಪೂರೈಸುತ್ತಿದೆ ಎಂದು ತಿಳಿಸಿದರು.‘ಸಫಲ್’ ಬ್ರ್ಯಾಂಡ್ ಖಾದ್ಯ ತೈಲಗಳು ಹಾಗೂ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಿದೆ. ಕೆಓಎಫ್ ಸಂಸ್ಥೆಯು ನಂಬಿಕೆಗೆ ಅರ್ಹವಾಗಿದ್ದು, ಕಲಬೆರಕೆ ರಹಿತ ಉತ್ಪನ್ನ ಪೂರೈಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಗುಣಮಟ್ಟದ ಸಂಸ್ಕರಣೆ, ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ ಕಟ್ಟುನಿಟ್ಟಿನ ಸ್ವಚ್ಛತಾ ಮಾನದಂಡಗಳನ್ನು ಪಾಲಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಅವರು ಹೇಳಿದರು.
ಗ್ರಾಮೀಣ ಆರ್ಥಿಕತೆ ಬಲಪಡಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದ್ದು, ರೈತ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಹಕರಿಸುತ್ತಿದೆ. ದಾವಣಗೆರೆಯಲ್ಲಿ ಕೆಓಎಫ್ನಿಂದ ನಿರ್ಮಾಣಾದ ಗೋದಾಮು ಕಟ್ಟಡ ಹಾಗೂ ಸಾರ್ಟೆಕ್ಸ್ ಯಂತ್ರ ಉದ್ಘಾಟಿಸಿರುವುದು ಖುಷಿ ತಂದಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.ಈ ಸಂದರ್ಭದಲ್ಲಿ ಕೆಒಎಫ್ ಅಧ್ಯಕ್ಷ, ಮಾಜಿ ಸಚಿವ ವೆಂಕಟರಾವ್ ನಾಡಗೌಡರ್, ಉಪಾಧ್ಯಕ್ಷ ಎಸ್.ಸುಗನಗೌಡ, ಕೆಇಎಫ್ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ರೆಡ್ಡಿ, ಅಧಿಕಾರಿಗಳು, ಸಿಬ್ಬಂದಿ ಇತರರು ಇದ್ದರು. 27ಕೆಡಿವಿಜಿ1: ದಾವಣಗೆರೆಯಲ್ಲಿ ಗುರುವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೆಒಎಫ್ ಗೋದಾಮು ಕಟ್ಟಡ ಉದ್ಘಾಟಿಸಿ ವೀಕ್ಷಿಸಿದರು. ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡರ್ ಇತರರು ಇದ್ದರು.