ಕುಶಾಲನಗರ: ಕುಶಾಲನಗರ ಸಮೀಪದ ಕೊಡಗು ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ ಅದ್ದೂರಿಯಾಗಿ ನಡೆಸಲಾಯಿತು.

ದೇಶದ ಎಂಟು ದಶಕಗಳ ಸ್ವಾತಂತ್ರ್ಯದ ನೆನಪಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ಗಣ್ಯ ಸಂಸ್ಥಾಪಕರು ಭಾಗವಹಿಸಿದ್ದರು.

ಬೆಂಗಳೂರಿನ ಏರ್ ಫೋರ್ಸ್ ಕೊಡಗು ಅಸೋಸಿಯೇಷನ್‌ನ ಅಧ್ಯಕ್ಷ ಏರ್ ಮಾರ್ಷಲ್ ಬಾಲ್ತಿಕಲಾಂಡ ಯು. ಚಂಗಪ್ಪ (ನಿವೃತ್ತ), ಪಿವಿ ಎಸ್ ಎಂ, ಎವಿ ಎಸ್ ಎಂ, ವಿಎಸ್ ಎಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳು ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಪರೇಡ್ ಮೈದಾನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಚಂಗಪ್ಪ ಅವರು ದ್ವಜಾರೋಹಣ ನೆರವೇರಿಸಿದರು.

ಶಾಲೆಯ ಮೆನನ್, ಕಾರ್ಯಪ್ಪ, ಕಟಾರಿ ಮತ್ತು ಸುಬ್ರತೋ ಎಂಬ ನಾಲ್ಕು ಹೌಸ್‌ಗಳ ತುಕಡಿಗಳ ಪರಿವೀಕ್ಷಣೆ ನಡೆಸಿದರು. ಪರೇಡ್ ಕಮಾಂಡರ್ ಸಿದ್ದಾಂತ್ ಹಾಗೂ ಧ್ವಜಧಾರಿ ಮಿತ್ರ ಅವರ ನೇತೃತ್ವದಲ್ಲಿ ಕೆಡೆಟ್‌ಗಳು ಶಿಸ್ತುಬದ್ಧ ಹಾಗೂ ಆಕರ್ಷಕ ಪಥಸಂಚಲನ ಪ್ರದರ್ಶಿಸಿದರು.


ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಗಣ್ಯರನ್ನು ಗೌರವಿಸುವ ಸಲುವಾಗಿ ಕೌಟಿಲ್ಯ ಬ್ಲಾಕ್‌ನಲ್ಲಿ ಏರ್ ಮಾರ್ಷಲ್ ಚೆಂಗಪ್ಪ ಅವರು ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಿದರು.

ಕೊಡಗು ಜಿಲ್ಲೆಯ ನಿವೃತ್ತ ಯೋಧರೊಂದಿಗೆ ಸಂಸ್ಥೆಯ ಆರಂಭಿಕ ಬೆಳವಣಿಗೆಗೆ ಕಾರಣೀಕರ್ತರಾದ ವಿಂಗ್ ಕಮಾಂಡರ್ ಅಪ್ಪಣ್ಣ (ನಿವೃತ್ತ), ಲೆಫ್ಟಿನೆಂಟ್ ಕರ್ನಲ್ ಕಾವೇರಿಯಪ್ಪ ಮತ್ತು ಸಾರ್ಜೆಂಟ್ ನಂಜಪ್ಪ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

2025-26ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ನಿರ್ಗಮಿತ ವಿದ್ಯಾರ್ಥಿ ಹಾಲಚಂದ್ರ, ಶೈಕ್ಷಣಿಕ ವಿಭಾಗದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಕಲ್ಲೇಶ್ ಬೇವಿನಾಳ್, ಕ್ರೀಡಾ ವಿಭಾಗದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಹೃದಯ್ ಪಡೆದರು.

ಸಿಬಿಎಸ್‌ಇ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗಗನ್ ದೀಪ್ ಆರ್. (ಶೇ. 97.8 ಮತ್ತು ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ), ಗಣಿತ ವಿಷಯದಲ್ಲಿ ನೂರಕ್ಕೆ ನೂರು ಆಂಕ ಗಳಿಸಿದ ಹೃಷಿಕೇಶ್ ರೂಗಿ, ಕೃತಕ ಬುದ್ಧಿಮತ್ತೆ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಪ್ರಣವ್ ನರೇಂದ್ರ ರಾವ್, ಶಾಶ್ವತ್ ಸಿಂಗ್ ಮತ್ತು ಹಿಮಾಂಕ್ ಕುಮಾರ್ ಭಯಾನ ಅವರನ್ನು ಗೌರವಿಸಲಾಯಿತು. ಅವರಿಗೆ ಮಾರ್ಗದರ್ಶನ ನೀಡಿದ ಬೋಧಕರಾದ ಎನ್. ಸುಬ್ಬರಂಗಯ್ಯ, ದಾದಾ ಡಿ. ಕುಸನಾಳೆ, ಗೋವಿಂದರಾಜ ಕೆ. ಮತ್ತು ಹನುಮಂತ ರೆಡ್ಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.

ಸಂಸ್ಥೆಗೆ ಸಲ್ಲಿಸಿದ ಗಣನೀಯ ಸೇವೆಗಾಗಿ ಬಿ.ಎಲ್.ವಿ. ಪ್ರಸಾದ್ ರಾಜು (ಟಿಜಿಟಿ ವಿಜ್ಞಾನ) ಸುನೀಲ್ ಕುಮಾರ್ ಇ. (ಕ್ವಾರ್ಟರ್ ಮಾಸ್ಟರ್) ಮತ್ತು ಶ್ರೀನಿವಾಸ ಕೆ. (ಸಾಮಾನ್ಯ ನೌಕರರು) ಅವರಿಗೆ ‘ಪ್ರಾಂಶುಪಾಲರ ಅಭಿನಂದನಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಏರ್ ಮಾರ್ಷಲ್ ಚೆಂಗಪ್ಪ ಅವರು, ವಿದ್ಯಾರ್ಥಿಗಳು ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವದಿಂದ ಮುನ್ನಡೆಯಬೇಕು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ವಂದಿಸಿದರು.