ಕೋಟೇಶ್ವರ: ಹಿಮಾಲಯ ಯೋಗ ಧ್ಯಾನ ಕಾರ್ಯಾಗಾರ

| Published : Oct 12 2025, 01:02 AM IST

ಸಾರಾಂಶ

ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಡಾ. ಕಾರ್ಕಳ ರಾಘವೇಂದ್ರ ರಂಗನಾಥ ಪೈ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು. ಅವರೊಂದಿಗೆ ಭವಾನಿ ಆರ್. ಪೈ ಹಾಗೂ ಗುರುಪ್ರಸಾದ ಆಚಾರ್ಯ ಸಹ ತರಬೇತುದಾರರಾಗಿ ಭಾಗವಹಿಸಿದರು. ಅವರನ್ನು ಶ್ರೀಪಾದರು ಗೌರವಿಸಿದರು.

ಕನ್ನಡಪ್ರಭ ವಾರ್ತೆ ಕೋಟೇಶ್ವರಇಲ್ಲಿನ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಚಾತುರ್ಮಾಸ್ಯ ಸಮಿತಿ ಹಾಗೂ ಉಡುಪಿಯ ಅನಂತ ವೈದಿಕ ಕೇಂದ್ರಗಳ ಸಹಯೋಗದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಮತ್ತು ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಪ್ರಯುಕ್ತ ಹಿಮಾಲಯ ಯೋಗ ಕ್ರಿಯೆ ಹಾಗೂ ಸಂಹಿತಾ ಪ್ರಾಣಾಯಾಮ ಧ್ಯಾನ ಕಾರ್ಯಾಗಾರ ದೇವಾಲಯದಲ್ಲಿ ಜರುಗಿತು.

ಈ ಸಂದರ್ಭ ಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಜ್ಞಾನಭಂಡಾರ ಅಗಾಧವಾಗಿದೆ. ಅದರಲ್ಲಿ ಅಡಗಿರುವ ತತ್ತ್ವಗಳು, ಸಂಶೋಧನೆಗಳು ಮತ್ತು ಅನುಭವ ಪಾಠಗಳು ಆಧುನಿಕ ಸಮಾಜಕ್ಕೂ ಬೆಳಕು ನೀಡಬಲ್ಲವು. ಅದರಲ್ಲೊಂದಾದ ಯೋಗ ಮತ್ತು ಧ್ಯಾನವು ಮಾನವನ ಜೀವನದ ಅವಿಭಾಜ್ಯ ಅಂಶಗಳಾಗಿವೆ. ಇಂತಹ ಸನಾತನ ವಿದ್ಯೆಯು ಕೇವಲ ಪೌರಾಣಿಕತೆಯೆಂದು ಕಾಣದೆ ಅದರ ವೈಜ್ಞಾನಿಕ ಅರ್ಥವನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಶಿಸಿದರು.ಈ ಕಾರ್ಯಾಗಾರವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಡಾ. ಕಾರ್ಕಳ ರಾಘವೇಂದ್ರ ರಂಗನಾಥ ಪೈ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು. ಅವರೊಂದಿಗೆ ಭವಾನಿ ಆರ್. ಪೈ ಹಾಗೂ ಗುರುಪ್ರಸಾದ ಆಚಾರ್ಯ ಸಹ ತರಬೇತುದಾರರಾಗಿ ಭಾಗವಹಿಸಿದರು. ಅವರನ್ನು ಶ್ರೀಪಾದರು ಗೌರವಿಸಿದರು.

ಕಾರ್ಯಾಗಾರದಲ್ಲಿ ಪ್ರಾತಃಕಾಲ ಯೋಗಾಭ್ಯಾಸಿಗಳು ಸರಳ ಯೋಗ, ವ್ಯಾಯಾಮ, ಹಿಮಾಲಯ ಯೋಗ ಕ್ರಿಯೆ, ಸೂರ್ಯ ನಮಸ್ಕಾರ, ಯೋಗನಡಿಗೆ, ಸಂಹಿತಾ ಧ್ಯಾನ, ಯೋಗನಿದ್ರೆ, ಪ್ರಾಣಾಯಾಮ, ವಿಠ್ಠಲಭಾತಿ ತಂತ್ರ ಮತ್ತು ಸೀತಾ ಧ್ಯಾನ ಸೇರಿದಂತೆ ಅನೇಕ ಯೋಗತಂತ್ರಗಳನ್ನು ಹೇಳಿ ಕೊಡಲಾಯಿತು. ಇದರಲ್ಲಿ 200 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.