ಸಾರಾಂಶ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ನಿಯೋಗ ಗುರುವಾರ ಜಿಲ್ಲೆಗೆ ಆಗಮಿಸಿ ಹಿರಿಯ ಅಧಿಕಾರಿಗಳು, ಪಕ್ಷದ ಮುಖಂಡರು, ಧಾರ್ಮಿಕ ಸಾಮಾಜಿಕ ನಾಯಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಗಳ ನೈಜತೆ ಅರಿಯಲು ಹಾಗೂ ಶಾಂತಿ ಮರುಸ್ಥಾಪನೆ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ನಿಯೋಗ ಗುರುವಾರ ಜಿಲ್ಲೆಗೆ ಆಗಮಿಸಿ ಹಿರಿಯ ಅಧಿಕಾರಿಗಳು, ಪಕ್ಷದ ಮುಖಂಡರು, ಧಾರ್ಮಿಕ ಸಾಮಾಜಿಕ ನಾಯಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸೀರ್ ಹುಸೇನ್ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಶಾಸಕರಾದ ಎನ್.ಎ. ಹ್ಯಾರಿಸ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಆಗಮಿಸಿದ್ದರು.
ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ನಾಯಕರ ಜತೆ ಸಭೆ ನಡೆಸಿದರು. ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಶಾಸಕ ಐವನ್ ಡಿಸೋಜ, ಮುಖಂಡರಾದ ಪದ್ಮರಾಜ್.ಆರ್ ಪೂಜಾರಿ, ಶಕುಂತಲಾ ಶೆಟ್ಟಿ, ಜಿ.ಎ. ಬಾವ, ಮಿಥುನ್ ರೈ, ರಕ್ಷಿತ್ ಶಿವರಾಂ, ಎಂ.ಎಸ್. ಮಹಮ್ಮದ್, ಯು.ಕೆ. ಮೋನು ಮತ್ತಿತರರು ಇದ್ದರು.ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರ ಜತೆ ಚರ್ಚೆ, ನಂತರ ನಗರ ಪೊಲೀಸ್ ಆಯುಕ್ತರು, ಎಸ್ಪಿ ಭೇಟಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು, ಪದಾಧಿಕಾರಿಗಳ ಭೇಟಿ ಮಾಡಿದ ನಿಯೋಗದ ಪ್ರಮುಖರು, ಸಂಜೆ ವೇಳೆ ವಿವಿಧ ಸಾಮಾಜಿಕ ಸಂಘಟನೆ, ಸಮುದಾಯಗಳ ಮುಖಂಡರು, ಕಾರ್ಮಿಕ ಮುಖಂಡರು, ಚಿಂತಕರು, ಲೇಖಕರು, ಕಲಾವಿದರು, ಬರಹಗಾರರು, ಹೋರಾಟಗಾರರ ಜತೆ ಸಭೆ ನಡೆಸಿದರು.
ಮಂಗಳೂರಿನ ಪ್ರಮುಖ ಧಾರ್ಮಿಕ ಮುಖಂಡರನ್ನೂ ನಿಯೋಗ ಭೇಟಿ ಮಾಡಿ ಮಾತುಕತೆ ಮಾಡಿದೆ. ಇದೇ ನಿಯೋಗ 2ನೇ ವಾರದಲ್ಲಿ ಮತ್ತೆ ಕರಾವಳಿಗೆ ಆಗಮಿಸಲಿದ್ದು, ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರಕ್ಕೆ ತನ್ನ ಅಧ್ಯಯನ ವರದಿ ಸಲ್ಲಿಸಲಿದೆ.