ಸಾರಾಂಶ
ಯಾದಗಿರಿ ಜಿಲ್ಲೆ ಕೊಡೇಕಲ್ ಸಮೀಪದ ನಾರಾಯಣಪುರದ ಪುರಾಣ ಪ್ರಸಿದ್ಧ ಛಾಯಾ ಭಗವತಿ ದೇವಿ ದೇವಸ್ಥಾನದ ಗರ್ಭಗುಡಿಯವರೆಗೆ ಕೃಷ್ಣೆ ಪ್ರವೇಶಿಸಿರುವುದರಿಂದ, ದೇವಸ್ಥಾನದ ಪುರೋಹಿತರು ದೇವಿಯ ಉತ್ಸವ ಮೂರ್ತಿಯೊಂದಿಗೆ ಮೆಟ್ಟಿಲ ಮೇಲೆ ಪೂಜೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಡೇಕಲ್
ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಲೇಶ್ವರ ಹಾಗೂ ಪಶ್ಚಿಮಘಟ್ಟದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಗೂ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೂ ಪ್ರವಾಹ ಬಂದಿದ್ದರಿಂದ ಕೃಷ್ಣಾ ನದಿ ಉಕ್ಕಿಹರಿಯುತ್ತಿದೆ.ಇದರಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ಒಳಹರಿವು ಹರಿದುಬರುತ್ತಿದ್ದು ಬಸವಸಾಗರ ಜಲಾಶಯಕ್ಕೆ 3ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಸುತ್ತಿರುವ ಕಾರಣ ನಾರಾಯಣಪುರ ಜಲಾಶಯದಿಂದ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನ ಪ್ರಮಾಣದಿಂದಾಗಿ ಛಾಯಾ ಭಗವತಿ ದೇವಿ ದೇವಸ್ಥಾನದ ಗರ್ಭ ಗುಡಿಯವರೆಗೆ ಕೃಷ್ಣಾ ನದಿಯ ನೀರು ತಲುಪಿದೆ.
ಕಳೆದ ನಾಲ್ಕೈದು ದಿನಗಳಿಂದ 1.50 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ಜಲಾಶಯದ ಕೆಳಭಾಗದಲ್ಲಿರುವ ಪವಿತ್ರ ತೀರ್ಥ ಯಾತ್ರಾ ಕ್ಷೇತ್ರಸ್ಥಳ ಛಾಯಾ ಭಗವತಿ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಲು ಹವಣಿಸುತ್ತಿದ್ದ ಕೃಷ್ಣೆ ಕೊನೆಗೂ ಅದರಲ್ಲಿ ಯಶಸ್ವಿ ಕಂಡಿದ್ದಾಳೆ.ಗುರುವಾರ ಮಧ್ಯಾಹ್ನದಿಂದ 2.50 ಲಕ್ಷ ಕ್ಯುಸೆಕ್ ಹರಿಸುತ್ತಿರುವ ಕಾರಣ ಛಾಯಾ ಭಗವತಿ ದೇವಸ್ಥಾನಕ್ಕೆ ಕೃಷ್ಣೆ ಪ್ರವೇಶ ಮಾಡಿದ್ದು ಮುಂಭಾಗದಲ್ಲಿರುವ ಮುಖ ಮಂಟಪದವರೆಗೆ ನೀರು ಹರಿಯುತ್ತಿದೆ. ರಾತ್ರಿಯ ವೇಳೆ ಇನ್ನಷ್ಟು ಹೆಚ್ಚಿನ ನೀರು ಹರಿಸಿದ್ದೆ ಆದಲ್ಲಿ ಛಾಯಾದೇವಿಗೆ ಜಲದಿಗ್ಬಂದನವಾಗುವಲ್ಲಿ ಯಾವುದೇ ಸಂಶಯವಿಲ್ಲ.
ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರದಿಂದ ದೇವಸ್ಥಾನದ ಪುರೋಹಿತರು ದೇವಿಯ ಉತ್ಸವ ಮೂರ್ತಿಯೊಂದಿಗೆ ಮೆಟ್ಟಿಲ ಮೇಲೆ ಪೂಜೆ ಮಾಡುತ್ತಿದ್ದು, ಗೃಹರಕ್ಷಕಾ ದಳದ ಸಿಬ್ಬಂದಿ ಯಾರನ್ನು ಕೆಳಗೆ ಇಳಿಯದಂತೆ ಬ್ಯಾರಿಕೇಡ್ಗಳನ್ನು ಇರಿಸಿ ಪಹರೆ ಕಾಯುತ್ತಿದ್ದಾರೆ.