ಎಚ್‌ಎಫ್, ಜರ್ಸಿ, ದೇಶೀಯ ತಳಿ, ಹಳ್ಳಿಕಾರ್ ಹಾಗೂ ಎಮ್ಮೆ ಐದು ವಿಭಾಗದಲ್ಲಿ ಸ್ಪರ್ಧೆ ನಡೆದು ಎಲ್ಲಾ ತಳಿಗಳಲ್ಲೂ 0-4 ತಿಂಗಳು, 4-8 ಹಾಗೂ 8-12 ತಿಂಗಳ ವಿಭಾಗದಲ್ಲಿ ಪ್ರದರ್ಶನ ನಡೆಯಿತು. ಸ್ಪರ್ಧೆಯಲ್ಲಿ ಎಚ್‌ಎಫ್, ಜರ್ಸಿ ತಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದವು, ದೇಶೀಯ ತಳಿ, ಹಳ್ಳಿಕಾರ್ ಹಾಗೂ ಎಮ್ಮೆಕರುಗಳ ಸಂಖ್ಯೆ ಕಡಿಮೆ ಇದ್ದವು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಮದ ಶ್ರೀರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ನಡೆದ ಕೃಷ್ಣೋತ್ಸವ ತಾಲೂಕು ಮಟ್ಟದ ಹೆಣ್ಣುಕರುಗಳ ಪ್ರದರ್ಶನ ಸ್ಪರ್ಧೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ ಚಾಲನೆ ನೀಡಿದರು.

ಮನ್‌ಮುಲ್ ಒಕ್ಕೂಟ, ಎಂಎಫ್ ಹಾಗೂ ಚಿನಕುರಳಿ ಹಾಲು ಉತ್ಪಾದಕರ ಸಹಕಾರದಲ್ಲಿ ತಾಲೂಕಿನಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ತಾಲೂಕಿನ ವಿವಿಧೆಡೆಯಿಂದ ರೈತರು ತಮ್ಮ ಕರುಗಳೊಂದಿಗೆ ಆಗಮಿಸಿ ನೋಂದಾಯಿಸಿಕೊಂಡು ಆಯೋಜಕರಿಂದ ಟ್ಯಾಗ್ ಹಾಗೂ ಪ್ರಮಾಣ ಪತ್ರ ಪಡೆದು ಸ್ಟಾಲ್ ಗಳಲ್ಲಿ ಕರುಗಳನ್ನು ಪ್ರದರ್ಶಿಸಿದರು.

ಎಚ್‌ಎಫ್, ಜರ್ಸಿ, ದೇಶೀಯ ತಳಿ, ಹಳ್ಳಿಕಾರ್ ಹಾಗೂ ಎಮ್ಮೆ ಐದು ವಿಭಾಗದಲ್ಲಿ ಸ್ಪರ್ಧೆ ನಡೆದು ಎಲ್ಲಾ ತಳಿಗಳಲ್ಲೂ 0-4 ತಿಂಗಳು, 4-8 ಹಾಗೂ 8-12 ತಿಂಗಳ ವಿಭಾಗದಲ್ಲಿ ಪ್ರದರ್ಶನ ನಡೆಯಿತು. ಸ್ಪರ್ಧೆಯಲ್ಲಿ ಎಚ್‌ಎಫ್, ಜರ್ಸಿ ತಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದವು, ದೇಶೀಯ ತಳಿ, ಹಳ್ಳಿಕಾರ್ ಹಾಗೂ ಎಮ್ಮೆಕರುಗಳ ಸಂಖ್ಯೆ ಕಡಿಮೆ ಇದ್ದವು. ವಿಶೇಷವಾಗಿ ಮಲ್ನಾಡ್, ಗಿರ್ ಹಾಗೂ ಪುಂಗನೂರು ತಳಿಯ ಕರುಗಳನ್ನು ಭಾಗವಹಿಸುವ ಮೂಲಕ ಗಮನಸೆಳೆದರು.

ಮನ್ಮುಲ್ ಹಾಗೂ ಕೆಎಂಎಫ್ ವತಿಯಿಂದ ಒಕ್ಕೂಟದಿಂದ ದೊರೆಯುವ ಸೌವಲತ್ತುಗಳು, ಪಶು ಆಹಾರ, ಬಿತ್ತನೆ ಬೀಜ,ಹಾಲು ಕರೆಯುವ ಯಂತ್ರ, ಮೇವುಕತ್ತರಿಸುವ ಯಂತ್ರಗಳು, ರಕ್ಷಾ ವ್ಯಾಕ್ಸೀನ್, ಸಂಯೋಜಿತ ಹೈನುಗಾರಿಕೆ ವಿಧಾನ, ಖನಿಜ ಮಿಶ್ರಣ ಹಾಗೂ ಸಿಹಿ ತಿಂಡಿ ತಿನ್ನಿಸುವ, ತಂಪು ಪಾನೀಯ, ಐಸ್ ಕ್ರೀಂಗಳ ಕುರಿತು ವಸ್ತು ಪ್ರದರ್ಶನ ನಡೆಯಿತು.

ಸ್ಪರ್ಧೆಯಲ್ಲಿ ತಾಲೂಕಿನಿಂದ 212 ಹೆಣ್ಣುಕರುಗಳು ನೋಂದಣಿ ಮಾಡಿಕೊಂಡಿದ್ದರು. ಉತ್ತಮ ಹೆಣ್ಣುಕರುಗಳ ಆಯ್ಕೆ ಪ್ರಕ್ರಿಯೆ ನುರಿತ ಪಶುವೈದ್ಯರಿಂದ ಹಲವು ಮಾನದಂಡಗಳನ್ನು ಅನುಸರಿಸಿ ಉತ್ತಮ ಕರುಗಳನ್ನು ಆಯ್ಕೆ ಮಾಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲಾ ಹೆಣ್ಣು ಕರುಗಳಿಗೂ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ವೈಯುಕ್ತಿಕವಾಗಿ ಸಮಾಧಾನಕರ ಬಹುಮಾನ ವಿತರಿಸಿದರು.

ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ ಮಾತನಾಡಿ, ಹೈನುಗಾರಿಕೆಯನ್ನು ಉತ್ತೇಜಿಸಲು ಹೆಣ್ಣುಕರುಗಳ ಪ್ರದರ್ಶನ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದಕ್ಕಿಂತ ಮೊದಲ ಭಾಗವಹಿಸುವುದು ಬಹಳ ಮುಖ್ಯ. ಸಿ.ಶಿಮಕುಮಾರ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಮನ್ಮುಲ್ ಉಪ ವ್ಯವಸ್ಥಾಪಕರ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಕ್ರಮವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಹೆಣ್ಣುಕರುಗಳನ್ನು ಉತ್ತೇಜನೆ ಉದ್ದೇಶದಿಂದ ಹೆಣ್ಣುಕರುಗಳ ಪ್ರದರ್ಶನವನ್ನು ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಆಯೋಜನೆ ಮಾಡಲಾಗಿದೆ. ಇಲ್ಲಿಗೆ ಬಂದಿರುವ ಕರುಗಳನ್ನು ನೋಡಿದರೆ ಖುಷಿಯಾಗುತ್ತದೆ. ಭಾಗವಹಿಸಿರುವ ಕರುಗಳ ಆಯ್ಕೆ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆಯಬೇಕು ಎಂದರು.

ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ಹಸುಗಳಲ್ಲಿ ಹೆಣ್ಣುಕರುಗಳು ಬೇಕು. ಆದರೆ, ಮನುಷ್ಯರಿಗೆ ಗಂಡು ಮಗುವೇ ಬೇಕು ಉತ್ಪಾದಕರ ಮಕ್ಕಳು ಮೆಡಿಕಲ್ ಸೇರಿದರೆ ಅಂತವರ ಮಕ್ಕಳಿಗೆ 50 ಸಾವಿರ ಮತ್ತು ಲ್ಯಾಪ್ ಟಾಪ್ ಗಳನ್ನು ನೀಡಲು ತೀರ್ಮಾನಿಸಲಾಗಿದೆ. ರೈತರು ಹಾಲನ್ನು ಕಲಬೆರಿಕೆ ಮಾಡದೆ ಗುಣಮಟ್ಟದ ಹಾಲು ಹಾಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ ನಿರ್ದೇಶಕ ಸಿ.ಶಿವಕುಮಾರ್, ನಿರ್ದೇಶಕ ಕೆ.ರವಿ, ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಯು.ಸಿ.ಶಿವಕುಮಾರ್, ನಿರ್ದೇಶಕರಾದ ಲಕ್ಷ್ಮೀನಾರಾಯಣ, ಡಿ.ಕೃಷ್ಣೇಗೌಡ, ಮದ್ದೂರು ಸ್ವಾಮಿ, ಹರೀಶ್‌ಬಾಬು, ನಾಮಿನಿ ಸದಸ್ಯ ವಿಶ್ವಾಸ್, ಸಹಕಾರ ನಿಬಂಧಕ ನಾಗಭೂಷಣ್, ಸಹಕಾರ ಒಕ್ಕೂಟದ ವಿಶೇಷ ಅಧಿಕಾರಿ ಅನಿತಾ, ಸಹಕಾರಿ ಯೂನಿಯನ್ ಸಿಇಓ ಸುರೇಶ್, ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಉಪವ್ಯವಸ್ಥಾಪಕ ಆರ್.ಪ್ರಸಾದ್ ಹಾಗೂ ಮಾರ್ಗ ವಿಸ್ತಾರಣ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.