ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಆಗುವ ಅಪಾಯದ ಬಗ್ಗೆ ತಿಳಿಯಲು ರಾಜ್ಯ ಉಚ್ಛ ನ್ಯಾಯಾಲಯ ಟ್ರಯಲ್ ಬ್ಲಾಸ್ಟ್ ಗೆ ನೀಡಿರುವ ಆದೇಶ ಪ್ರಶ್ನಿಸಿ ಕಾನೂನು ಕ್ರಮದ ಜೊತೆಗೆ ಉಗ್ರ ಹೋರಾಟವನ್ನು ನಡೆಸಲು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ತೀರ್ಮಾನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಮಾತನಾಡಿ, ಈ ಹಿಂದಿನಿಂದಲೂ ರೈತ ಸಂಘ ಟ್ರಯಲ್ ಬ್ಲಾಸ್ಟ್ ರೋಧಿಸುತ್ತಾ ಬಂದಿದೆ. ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸಲು ರೈತ ಸಂಘ ಕಂಕಣ ಬದ್ಧವಾಗಿದೆ ಎಂದರು.
ಟ್ರಯಲ್ ಬ್ಲಾಸ್ಟ್ ನಡೆಸಬೇಕು ಎನ್ನುವುದಾದರೆ 20 ಕಿಮೀ ವ್ಯಾಪ್ತಿ ಮೀರಿ ಬೇಕಾದರೆ ನಡೆಸಿಕೊಳ್ಳಲಿ. ಟ್ರಯಲ್ ಬ್ಲಾಸ್ಟ್ ತಡೆಯಲು ರಾಮನಗರ,ಮೈಸೂರು ಜಿಲ್ಲೆ ಸಂಘಟನೆಗಳೊಂದಿಗೆ, ರಾಜ್ಯದ ಇತರೆ ಜಿಲ್ಲೆಗಳ ಜನರ ಸಹಕಾರ ಪಡೆದು ಕೆಆರ್ಎಸ್ ಉಳಿಸಲು ಮುಂದಾಗುವುದಾಗಿ ಹೇಳಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತ ಸಂಘದ ನಿಲುವೇ ನನ್ನ ನಿಲುವು. 8 ಗ್ರಾಪಂ ವ್ಯಾಪ್ತಿ ಜನತೆಯ ಬದುಕಿಗಾಗಿ ಪರ್ಯಾಯ ಆಲೋಚನೆಗಳನ್ನು ಮಾಡಬೇಕಿದೆ. ನ್ಯಾಯಾಂಗದ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸಬೇಕು. ಗಣಿಗಾರಿಕೆ ವಿರುದ್ಧ ತಾವು ಯಾವುದೇ ಹೋರಾಟಕ್ಕೆ ಸಿದ್ಧ. ನನ್ನ ಮೇಲೆ ಯಾವ ರಾಜಕೀಯ ಒತ್ತಡವು ಇಲ್ಲ. ಯಾವುದೇ ಆತಂಕ ಬೇಡ ಎಂದು ಸ್ಪಷ್ಟನೆ ನೀಡಿದರು.
ಆರ್ಟಿಐ ಕಾರ್ಯಕರ್ತ ರವೀಂದ್ರ ಮಾತನಾಡಿ, ಟ್ರಯಲ್ ಬ್ಲಾಸ್ಟ್ ನೆಪದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಹುನ್ನಾರ ನಡೆದಿದೆ. ಟ್ರಯಲ್ ಬ್ಲಾಸ್ಟ್ಗೆ ನಿರ್ಧಾರ ತೆಗೆದುಕೊಳ್ಳಲು 6 ತಿಂಗಳು ಕಾಲಾವಕಾಶ ಇದ್ದರೂ ಜಿಲ್ಲಾಡಳಿತ ತರಾತುರಿಯಲ್ಲಿ ಬ್ಲಾಸ್ಟ್ ಗೆ ಮುಂದಾಗಿರುವುದನ್ನು ನೋಡಿದರೆ ಗಣಿ ಲಾಬಿಗೆ ಮಣಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.ಸಿಪಿಐಎಂ ಮುಖಂಡ ಟಿ.ಎಲ್ .ಕೃಷ್ಣೇಗೌಡ ಮಾತನಾಡಿ, ಈಗಾಗಲೇ ಹೈಕೋರ್ಟ್ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಅದರಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವಿಷಯ ನ್ಯಾಯಾಲಯದ ವ್ಯಾಪ್ತಿಗೆ ಹೋದ ಮೇಲೆ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು. ಹೋರಾಟದ ಬದಲು ಗಣಿಗಾರಿಕೆಯ ತಾಂತ್ರಿಕ ವಿಷಯಗಳನ್ನು ಮತ್ತು ನಮ್ಮ ಆತಂಕವನ್ನು ಕೋರ್ಟಿಗೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮುಖಂಡರಾದ ಜಿ. ಮಲ್ಲಿಗೆರೆ ಅಣ್ಣಯ್ಯ, ಗುರುಪ್ರಸಾದ್ ಕೆರಗೋಡು, ಹುಲ್ಲುಕೆರೆ ಮಹದೇವು, ಕೆನ್ನಾಳು ನಾಗರಾಜು, ಮುರುವನಳ್ಳಿ ಶಂಕರ್, ಸಿ.ಕುಮಾರಿ, ತಗ್ಗಹಳ್ಳಿ ಪ್ರಸನ್ನ, ವಿಜಯಕುಮಾರ್, ಎಣ್ಣೆಹೊಳೆ ಕೊಪ್ಪಲು ಮಂಜು,ರಘು,ದಯಾನಂದ್, ಗಾಣದಾಳು ನಾಗರಾಜು, ಲಿಂಗಪ್ಪಾಜಿ ಸೇರಿ ರೈತ ಸಂಘ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.