ಸಾರಾಂಶ
ಮೇ 25ರಂದು ಅಣೆಕಟ್ಟೆಯ ನೀರಿನ ಮಟ್ಟ 89.12 ಅಡಿಗೆ ಕುಸಿದಿತ್ತು. ಅಂದು ಜಲಾಶಯಕ್ಕೆ ಕೇವಲ 625ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಮೇ 26ರಂದು ಕೊಡಗಿನಲ್ಲಿ ಮುಂಗಾರು ಚುರುಕನ್ನು ಪಡೆದುಕೊಂಡಿತ್ತು. ಆ ದಿನ ಅಣೆಕಟ್ಟೆಯ ನೀರಿನ ಮಟ್ಟ 89.35 ಅಡಿಗೆ ಕುಸಿದಿತ್ತು. ಅಂದು ಜಲಾಶಯಕ್ಕೆ ಕೇವಲ 2053 ಕ್ಯುಸೆಕ್ ನೀರು ಹರಿದುಬರುತ್ತಿತ್ತು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಹಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಸುಮಾರು 11 ಅಡಿಯಷ್ಟು ನೀರು ಹರಿದು ಬಂದಿದ್ದು, ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಗೆ ತಲುಪಿದೆ.ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಗುರುವಾರ ಬೆಳಗ್ಗೆ 98 ಅಡಿಗೆ ಏರಿಕೆಯಾಗಿತ್ತು. ಅಣೆಕಟ್ಟೆಗೆ 22788 ಕ್ಯುಸೆಕ್ ನೀರು ಹರಿದುಬರುತ್ತಿದ್ದು, 630 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ 12.903 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮೇ 25ರಂದು ಅಣೆಕಟ್ಟೆಯ ನೀರಿನ ಮಟ್ಟ 89.12 ಅಡಿಗೆ ಕುಸಿದಿತ್ತು. ಅಂದು ಜಲಾಶಯಕ್ಕೆ ಕೇವಲ 625ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಮೇ 26ರಂದು ಕೊಡಗಿನಲ್ಲಿ ಮುಂಗಾರು ಚುರುಕನ್ನು ಪಡೆದುಕೊಂಡಿತ್ತು. ಆ ದಿನ ಅಣೆಕಟ್ಟೆಯ ನೀರಿನ ಮಟ್ಟ 89.35 ಅಡಿಗೆ ಕುಸಿದಿತ್ತು. ಅಂದು ಜಲಾಶಯಕ್ಕೆ ಕೇವಲ 2053 ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಮೇ 27ರಂದು ಅಣೆಕಟ್ಟೆಗೆ 19129 ಕ್ಯುಸೆಕ್ ನೀರು ಹರಿದುಬಂದು ನೀರಿನ ಮಟ್ಟ 92 ಅಡಿಗೆ ಏರಿಕೆಯಾಯಿತು.ಮೇ 28ರಂದು ಜಲಾಶಯದ ಒಳಹರಿವು 26424 ಕ್ಯುಸೆಕ್ಗೆ ಏರಿಕೆಯಾಗಿ, ಅಣೆಕಟ್ಟೆಯ ನೀರಿನ ಮಟ್ಟ 95.35 ಅಡಿ ದಾಖಲಾಗಿತ್ತು. ಇದೀಗ ಕೊಡಗಿನಲ್ಲಿ ಮಳೆ ಕ್ಷೀಣಿಸಿರುವುದರಿಂದ ಜಲಾಶಯದ ಒಳಹರಿವಿನಲ್ಲೂ ಇಳಿಮುಖವಾಗಿದೆ. ಅಣೆಕಟ್ಟೆಗೆ 22788 ಕ್ಯುಸೆಕ್ ನೀರು ಹರಿದುಬರುತ್ತಿದೆ. ಶುಕ್ರವಾರ ಬೆಳಗ್ಗೆ ವೇಳೆಗೆ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಗೆ ತಲುಪುವುದು ನಿಶ್ಚಿತವಾಗಿದೆ. ಮೇ ತಿಂಗಳಿನಲ್ಲೇ ಅಣೆಕಟ್ಟೆಯಲ್ಲಿ 100 ಅಡಿಯಷ್ಟು ನೀರು ಸಂಗ್ರಹವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.