ಕೆಆರ್‌ಎಸ್‌ ಜಲಾಶಯಕ್ಕೆ ಒಂದೇ ದಿನ ೩ ಅಡಿ ನೀರು ಬಂತು...!

| Published : May 28 2025, 12:19 AM IST

ಕೆಆರ್‌ಎಸ್‌ ಜಲಾಶಯಕ್ಕೆ ಒಂದೇ ದಿನ ೩ ಅಡಿ ನೀರು ಬಂತು...!
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಉಗಮ ಸ್ಥಾನ ಕೊಡಗಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಒಂದೇ ದಿನ ಮೂರು ಅಡಿ ಏರಿಕೆಯಾಗಿದೆ. ಮೇ ತಿಂಗಳ ಅಂತ್ಯದಲ್ಲೇ ಜಲಾಶಯಕ್ಕೆ ಈ ಪ್ರಮಾಣದ ಒಳಹರಿವು ದಾಖಲಾಗುತ್ತಿರುವುದು ಅಪರೂಪವೆನಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಉಗಮ ಸ್ಥಾನ ಕೊಡಗಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಒಂದೇ ದಿನ ಮೂರು ಅಡಿ ಏರಿಕೆಯಾಗಿದೆ. ಮೇ ತಿಂಗಳ ಅಂತ್ಯದಲ್ಲೇ ಜಲಾಶಯಕ್ಕೆ ಈ ಪ್ರಮಾಣದ ಒಳಹರಿವು ದಾಖಲಾಗುತ್ತಿರುವುದು ಅಪರೂಪವೆನಿಸಿದೆ.

ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಮಂಗಳವಾರ ನೀರಿನ ಮಟ್ಟ ೯೨ ಅಡಿಗೆ ಏರಿಕೆಯಾಗಿದೆ. ಅಣೆಕಟ್ಟೆಗೆ ೧೯೧೨೯ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ೩೬೪ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ ೮.೭೮೪ ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.

ಕಳೆದೆರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಒಂದೇ ದಿನ ೧೦೦ ಮಿ.ಮೀ.ನಷ್ಟು ಮಳೆಯಾಗಿರುವುದರಿಂದ ಕಾವೇರಿ ನದಿ ಮೈದುಂಬಿಕೊಂಡಿದೆ. ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೆಆರ್‌ಎಸ್ ಜಲಾಶಯದ ಕಡೆಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಅಣೆಕಟ್ಟು ಜೀವಕಳೆಯನ್ನು ಪಡೆದುಕೊಳ್ಳುತ್ತಿದೆ.

ಸೋಮವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ ೮೯.೩೫ ಅಡಿಗೆ ಕುಸಿದಿತ್ತು. ೨೦೫೩ ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಅಣೆಕಟ್ಟೆಯಲ್ಲಿ ೭.೧೭೬ ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಒಂದು ದಿನದಲ್ಲಿ ೧೯ ಸಾವಿರ ಕ್ಯುಸೆಕ್ ನೀರು ಹರಿದು ಬಂದಿದ್ದರಿಂದ ಮಂಗಳವಾರ ಬೆಳಗಿನ ವೇಳೆಗೆ ಅಣೆಕಟ್ಟೆಯ ನೀರಿನ ಮಟ್ಟ ೯೨ ಅಡಿಗೆ ಏರಿಕೆಯಾಗಿತ್ತು.

ಕೊಡಗಿನಲ್ಲಿ ಮಳೆ ಮುಂದುವರೆದಿರುವುದರಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಇದರಿಂದ ಅಣೆಕಟ್ಟೆಯ ನೀರಿನ ಮಟ್ಟದಲ್ಲೂ ಏರಿಕೆಯಾಗುವ ನಿರೀಕ್ಷೆ ಇದೆ.

ಮೇ ತಿಂಗಳಲ್ಲಿ ಹೆಚ್ಚಿನ ಒಳಹರಿವು ಬಂದ ವರ್ಷಗಳು

ವರ್ಷ (ದಿನಾಂಕ)ಕ್ಯುಸೆಕ್

7.5.202519129

20.5.202216814

31.5.200623312

17.5.199911489ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ಖರೀದಿ ವೇಳೆ ಮುನ್ನೆಚ್ಚರಿಕೆ ವಹಿಸಿ: ಹರೀಶ್

ಕನ್ನಡಪ್ರಭವಾರ್ತೆ ನಾಗಮಂಗಲ

ತಾಲೂಕಿನಾದ್ಯಂತ ಅವಧಿಗೂ ಮುನ್ನ ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳನ್ನು ಖರೀದಿಸುವ ವೇಳೆ ಕೆಲ ಅಂಶಗಳನ್ನು ಗಮನಿಸುವ ಜೊತೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಮನವಿ ಮಾಡಿದ್ದಾರೆ.

ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ ಲಾಬ್ ನಂಬರ್ ನಮೂದಿಸಿರುವ ರಶೀದಿ ಪಡೆದುಕೊಳ್ಳಬೇಕು. ಬಿತ್ತನೆ ಬೀಜ ಉತ್ಪಾದಕರು ಮತ್ತು ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಬಿತ್ತನೆ ಬೀಜವು ಸಂಬಂಧಪಟ್ಟ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ದೃಢೀಕರಿಸಲಾಗಿದೆಯೇ ಮತ್ತು ದೃಢೀಕರಿಸಿದ ಟ್ಯಾಗ್‌ಗಳನ್ನು ಲಗತ್ತಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಟ್ಯಾಗ್‌ಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು. ನಮೂದಿಸಿರುವ ಉತ್ಪಾದನಾ ದಿನಾಂಕ ಮತ್ತು ವ್ಯಾಲಿಡಿಸಿ ಅವಧಿಯನ್ನು ರೈತರು ಗಮನಿಸಬೇಕು ಎಂದು ತಿಳಿಸಿದ್ದಾರೆ.

ಅಧಿಕೃತ ಪರವಾನಗಿ ಹೊಂದಿರುವ ಮಾರಾಟಗಾರರಿಂದಲೇ ರಸಗೊಬ್ಬರ ಖರೀದಿಸಬೇಕು. ರಸಗೊಬ್ಬರ ಚೀಲದ ಬಾಯಿಯನ್ನು ಯಂತ್ರದಿಂದ ಹೊಲಿದಿರಬೇಕು. ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು. ರಸಗೊಬ್ಬರ ಖರೀದಿದ್ದಕ್ಕೆ ರಶೀದಿ ಪಡೆಯಬೇಕು. ತಾವು ಖರೀದಿಸುವ ರಸಗೊಬ್ಬರ ಚೀಲದ ಮೇಲೆ ರಸಗೊಬ್ಬರದ ಹೆಸರು, ಬ್ರಾಂಡ್, ತಯಾರಕರ ಹೆಸರು, ರಸಗೊಬ್ಬರದಲ್ಲಿರುವ ಪೋಷಕಾಂಶಗಳ ವಿವರ, ಗರಿಷ್ಠ ಮತ್ತು ನಿವ್ವಳ ತೂಕ, ಗರಿಷ್ಠ ಮಾರಾಟ ಬೆಲೆ, ತಯಾರಿಸಿದ ತಿಂಗಳು ಮತ್ತು ವರ್ಷ ಇರುವುದನ್ನು ಪರಿಶೀಲಿಸಿದ ನಂತರವೇ ರಸಗೊಬ್ಬರವನ್ನು ಖರೀದಿಸಬೇಕು.

ಪೀಡೆ ನಾಶಕಗಳನ್ನೂ ಕೂಡ ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ ರಸೀದಿ ಪಡೆದುಕೊಳ್ಳಬೇಕು. ಪೀಡೆನಾಶಕದ ಬಾಟಲಿ ಅಥವಾ ಪೊಟ್ಟಣ ತೆರೆಯಲಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಪೀಡೆನಾಶಕದ ಉತ್ಪಾದಕರು ಮತ್ತು ಮಾರಾಟಗಾರರ ವಿಳಾಸವನ್ನು ಗಮನಿಸಬೇಕು. ಉತ್ಪಾದನಾ ದಿನಾಂಕ ಮತ್ತು ಅವಧಿ ಮೀರುವ ದಿನಾಂಕ ನಮೂದಿಸಲಾಗಿದೆಯೇ ಎಂಬುದನ್ನು ರೈತರು ಗಮನಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.