ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹಿತೈಷಿಗಳು ಹಾಗೂ ಸಾಹಿತ್ಯಾಸಕ್ತರ ಒತ್ತಾಸೆಯ ಮೇರೆಗೆ ತಾವು ಸ್ಪರ್ಧಿಸುತ್ತಿರುವುದಾಗಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.
ಸಂಸ್ಥೆಗೆ ಮತ್ತಷ್ಟು ಪ್ರಜಾಪ್ರಭುತ್ವದ ನೆಲೆ ಕಲ್ಪಿಸುವ ಅಗತ್ಯವಿದೆ
ಕನ್ನಡಪ್ರಭ ವಾರ್ತೆ ಕಾರವಾರಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಹಿತೈಷಿಗಳು ಹಾಗೂ ಸಾಹಿತ್ಯಾಸಕ್ತರ ಒತ್ತಾಸೆಯ ಮೇರೆಗೆ ತಾವು ಸ್ಪರ್ಧಿಸುತ್ತಿರುವುದಾಗಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಸಾಮಾನ್ಯ ಕನ್ನಡಿಗರೂ ಹೆಮ್ಮೆಯಿಂದ ನನ್ನ ಪರಿಷತ್ತು ಎಂದು ಕರೆಯುವಂತಾಗಬೇಕು. ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆಯುವ ಸರಸ್ವತಿಯ ಪವಿತ್ರ ದೇಗುಲವನ್ನಾಗಿ ಪರಿಷತ್ತನ್ನು ರೂಪಿಸುವುದು ತಮ್ಮ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.ಪ್ರಸ್ತುತ ಕಸಾಪ ಸದಸ್ಯರ ಸಂಖ್ಯೆ ಸುಮಾರು 4 ಲಕ್ಷದಷ್ಟಿದ್ದು, ಕನಿಷ್ಠ 1 ಕೋಟಿ ಕನ್ನಡಿಗರು, ಶಾಲಾ ಶಿಕ್ಷಕರು ಹಾಗೂ ಸರ್ಕಾರಿ ನೌಕರರನ್ನು ಪರಿಷತ್ತಿನ ಸದಸ್ಯರನ್ನಾಗಿ ಮಾಡುವ ಮೂಲಕ ಸಂಸ್ಥೆಗೆ ಮತ್ತಷ್ಟು ಪ್ರಜಾಪ್ರಭುತ್ವದ ನೆಲೆ ಕಲ್ಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯಕ್ಕೆ ಎಡಪಂಥೀಯ, ಬಲಪಂಥೀಯ ಎಂಬ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ಪಂಥಕ್ಕಿಂತ ಸಾಹಿತ್ಯ ಸೇವೆಯೇ ಮುಖ್ಯವಾಗಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವ ಸಮಗ್ರ ನಿಲುವು ತಮ್ಮದಾಗಿದೆ ಎಂದು ಸೋಮಶೇಖರ್ ಹೇಳಿದರು.ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತಾವು ಸಲ್ಲಿಸಿದ ಸೇವೆಗಳನ್ನು ವಿವರಿಸಿದ ಅವರು, ಕಾಸರಗೋಡು, ಅಕ್ಕಲಕೋಟೆ ಹಾಗೂ ಗೋವಾದಲ್ಲಿ ಕನ್ನಡ ಭವನಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ಶ್ರಮಿಸಿರುವುದಾಗಿ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ್ ನಾಯಕ, ಕರ್ನಾಟಕ ರಾಜ್ಯ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕಾಂಜಿ ಹಾಗೂ ದೇಸಾಯಿ ಇದ್ದರು.