ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ: ಅಧಿಕಾರಿಗಳೊಂದಿಗೆ ಬಂಟ್ವಾಳ ಶಾಸಕರ ವಿಶೇಷ ಸಭೆ

| Published : Jun 20 2024, 01:07 AM IST

ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ: ಅಧಿಕಾರಿಗಳೊಂದಿಗೆ ಬಂಟ್ವಾಳ ಶಾಸಕರ ವಿಶೇಷ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನಿಂದ ಬಾಳ್ತಿಲದ ನೀರಪಾದೆಗೆ ಬರುವ ಬಸ್‌ ಸಮರ್ಪಕವಾಗಿ ಬರುತ್ತಿಲ್ಲ ಎಂದು ಬಾಳ್ತಿಲದ ಶಿವರಾಜ್ ದೂರಿದರು. ಕೂಡಲೇ ಈ ಬಗ್ಗೆ ಗಮಹರಿಸಿ ಅದನ್ನು ಸರಿಪಡಿಸಲಾಗುವುದು ಎಂದು ಪುತ್ತೂರು ಡಿಟಿಒ ಮುರಳೀಧರ್ ಆಚಾರ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಂಟ್ವಾಳ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಮರ್ಪಕ ರೀತಿಯಲ್ಲಿ ಸಂಚಾರ ಮಾಡುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿ.ಸಿ. ರೋಡಿನ ತಮ್ಮ ಕಚೇರಿಯಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ಹಾಗೂ ಪುತ್ತೂರು ವಿಭಾಗಗಳ ಅಧಿಕಾರಿಗಳ ಸಭೆ ನಡೆಸಿದರು.

ಪುತ್ತೂರಿನಿಂದ ಬಾಳ್ತಿಲದ ನೀರಪಾದೆಗೆ ಬರುವ ಬಸ್‌ ಸಮರ್ಪಕವಾಗಿ ಬರುತ್ತಿಲ್ಲ ಎಂದು ಬಾಳ್ತಿಲದ ಶಿವರಾಜ್ ದೂರಿದರು. ಕೂಡಲೇ ಈ ಬಗ್ಗೆ ಗಮಹರಿಸಿ ಅದನ್ನು ಸರಿಪಡಿಸಲಾಗುವುದು ಎಂದು ಪುತ್ತೂರು ಡಿಟಿಒ ಮುರಳೀಧರ್ ಆಚಾರ್ಯ ತಿಳಿಸಿದರು.

ಪುತ್ತೂರು- ಮಂಗಳೂರು ಸಂಚರಿಸುವ ಬಸ್ಸುಗಳಲ್ಲಿ ಒಂದೆರಡು ಬಾಳ್ತಿಲ- ಶಂಭೂರು- ನರಿಕೊಂಬು ಮೂಲಕ ಪಾಣೆಮಂಗಳೂರು ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳಲು ವಿನಂತಿಸಿದಾಗ ಆಗಸ್ಟ್ ಬಳಿಕ ಅದರ ಕುರಿತು ಗಮನಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಬಸ್ಸುಗಳಿಗೆ ನಿಲುಗಡೆ ನೀಡುವಂತೆ ಆರ್. ಚೆನ್ನಪ್ಪ ಕೋಟ್ಯಾನ್ ಹಾಗೂ ದಿನೇಶ್ ಅಮ್ಟೂರು ಮನವಿ ಮಾಡಿದ್ದು, ಮಡಿಕೇರಿ ಬಸ್ಸುಗಳಿಗೆ ಕಲ್ಲಡ್ಕದಲ್ಲಿ ನಿಲುಗಡೆ ನೀಡುವಂತೆ ವಜ್ರನಾಥ ಕಲ್ಲಡ್ಕ ಮನವಿ ಮಾಡಿದರು.

ಶಂಭೂರು ಹಾಗೂ ಬರಿಮಾರಿಗೆ ರಾತ್ರಿ ನಿಲ್ಲುವ ಬಸ್‌ಗಳನ್ನು ಮತ್ತೆ ಆರಂಭಿಸುವಂತೆ ಆನಂದ ಶಂಭೂರು ಮನವಿ ಮಾಡಿದ್ದು, ಶಾಸಕರು ಮಂಗಳೂರು ಡಿಸಿಯವರನ್ನು ಸಂಪರ್ಕಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಸರಪಾಡಿಗೆ ಆರಂಭಗೊಂಡ ಬಸ್ಸನ್ನು ಮತ್ತೆ ಆರಂಭಿಸಲು ಸೂಚಿಸಲಾಯಿತು.

ಬೋಳಂತೂರಿಗೆ ಮಧ್ಯಾಹ್ನದ ಬಳಿಕ ಬಸ್‌ ಆರಂಭಿಸುವಂತೆ ಜಯರಾಮ ರೈ ಅವರು ಮನವಿ ಮಾಡಿದ್ದು, ಆಟೋ ರಿಕ್ಷಾಗಳಿಂದ ಅಲ್ಲಿ ಬಸ್ಸಿಗೆ ಪ್ರಯಾಣಿಕರು ಸಿಗುತ್ತಿಲ್ಲ ಎಂದು ಬಂಟ್ವಾಳ ಡಿಪೋ ಮ್ಯಾನೇಜರ್ ಶ್ರೀಶ ಭಟ್ ವಿವರಿಸಿದರು. ವೀರಕಂಭದಿಂದ ಅನಂತಾಡಿ ಮೂಲಕ ಬಸ್ಸು ಆರಂಭಿಸುವಂತೆ ದಿನೇಶ್ ಮನವಿ ಮಾಡಿದರು. ಸದಾನಂದ ನಾವೂರು ಅವರು ಧರ್ಮಸ್ಥಳ ಬಸ್ಸಿನ ಕುರಿತು ಪ್ರಸ್ತಾಪಿಸಿದಾಗ ಮಂಗಳೂರು ವಿಭಾಗದಲ್ಲಿ ೪೨೫ ಮಂದಿ ಚಾಲಕರು, ನಿರ್ವಾಹಕರ ಕೊರತೆ ಇದೆ ಎಂದು ಮಂಗಳೂರು ಡಿಟಿಒ ಕಮಲ್‌ ಕುಮಾರ್ ತಿಳಿಸಿದರು. ಮಂಗಳೂರು ಡಿಪೋ ಮ್ಯಾನೇಜರ್ ಮಂಜುನಾಥ್, ಬೂಡಾ ಮಾಜಿ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ ಸಭೆಯಲ್ಲಿದ್ದರು.