ಸಾರಾಂಶ
ಬೆಂಗಳೂರು ; ಬೆಂಗಳೂರು-ಮೈಸೂರು ಹೆದ್ದಾರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಬಸ್ ಚಾಲನೆ ಮಾಡುವ ಚಾಲಕರಿಗೆ ₹500 ರಿಂದ ₹2 ಸಾವಿರವರೆಗೆ ದಂಡ ವಿಧಿಸುವುದಾಗಿ ಕೆಎಸ್ಸಾರ್ಟಿಸಿ ತಿಳಿಸಿದೆ.
ಬೆಂಗಳೂರು-ಮೈಸೂರು ಹೆದ್ದಾರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗಾಗಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಅದರಂತೆ ಹೆದ್ದಾರಿಯುದ್ದಕ್ಕೂ ನಿಯಮಿತವಾಗಿ ಉನ್ನತ ತಾಂತ್ರಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ ಕೆಎಸ್ಸಾರ್ಟಿಸಿ ಬಸ್ಗಳು ನಿಯಮ ಉಲ್ಲಂಘಿಸುವುದು ಪತ್ತೆಯಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸುವ ಬಸ್ಗಳ ಚಾಲಕರಿಗೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ.
ಅತಿವೇಗದ ಚಾಲನೆಗೆ ₹2 ಸಾವಿರ, ಅಪಾಯಕಾರಿ ಚಾಲನೆ, ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ, ನಿಲುಗಡೆ ರಹಿತ ಸ್ಥಳದಲ್ಲಿ ಬಸ್ ನಿಲ್ಲಿಸುವುದು, ಸಂಚಾರಿ ಪೊಲೀಸರ ಆದೇಶ ಪಾಲಿಸದಿರುವುದು, ನಿಶಬ್ದ ವಲಯದಲ್ಲಿ ಹಾರ್ನ್ ಮಾಡುವುದು, ತುರ್ತು ವಾಹನಗಳ ಸಂಚಾರಕ್ಕ ಸ್ಥಳಾವಕಾಶ ನೀಡದಿರುವುದಕ್ಕೆ ತಲಾ ₹1 ಸಾವಿರ ಹಾಗೂ ವಾಹನ ಚಾಲನೆ ಮಾಡುವಾಗ ಏಕಾಏಕಿ ಪಥ ಬದಲಾವಣೆ, ಏಕಮುಖ ರಸ್ತೆಯಲ್ಲಿ ವಾಹನ ಚಾಲನೆ, ಟ್ರಾಫಿಕ್ ಸಿಗ್ನಲ್ ಜಂಪ್ಗೆ ತಲಾ ₹500 ದಂಡ ವಿಧಿಸಲಾಗುವುದು ಎಂದು ನಿಗಮ ಹೇಳಿದೆ.