ಈ ವೇಳೆ ಅಂಗಡಿ ಬಾಡಿಗೆದಾರ ನಿತಿನ್, ನಾವು ಬಾಡಿಗೆ ಸರಿಯಾಗಿ ಪಾವತಿ ಮಾಡಿಕೊಂಡು ಬರುತ್ತಿದ್ದೇವೆ. ಟೆಂಡರ್ ಪಡೆದವರು ಹಣ ಕಟ್ಟಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನಮ್ಮನ್ನು ಹೊರಗೆ ಹಾಕಿ ಅಂಗಡಿಗಳಿಗೆ ಬಲವಂತವಾಗಿ ಬೀಗ ಹಾಕಿಸಿದ್ದಾರೆ. ನಾವು ಲಕ್ಷಾಂತರ ಬಂಡವಾಳ ಹಾಕಿ ಇದನ್ನೇ ನಂಬಿ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದೇವೆ. ಅಧಿಕಾರಿಗಳು ಕೂಡಲೇ ನಮಗೆ ಅಂಗಡಿ ಬಾಗಿಲು ತೆಗೆದು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ರಾಮನಗರ

ಟೆಂಡರ್ ದಾರರು ಬಾಡಿಗೆ ಹಣ ಪಾವತಿಸದ ಕಾರಣ ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗ ನಿಯಂತ್ರಣಾಧಿಕಾರಿ ಪುರುಷೋತ್ತಮ್ ನೇತೃತ್ವದಲ್ಲಿ ಅಧಿಕಾರಿಗಳು ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳು ಹಾಗೂ ವಾಹನ ಪಾರ್ಕಿಂಗ್ ಗೆ ಬೀಗ ಜಡಿದ ಘಟನೆ ಶುಕ್ರವಾರ ನಡೆಯಿತು.

ಸಾರಿಗೆ ಬಸ್ ನಿಲ್ದಾಣದಲ್ಲಿರುವ 12 ಅಂಗಡಿ ಮಳಿಗೆಗಳು ಹಾಗೂ ವಾಹನಗಳ ಪಾರ್ಕಿಂಗ್ ಗೆ ಬೀಗ ಜಡಿಯಲು ಮುಂದಾದಾಗ ಅಧಿಕಾರಿಗಳೊಂದಿಗೆ ಅಂಗಡಿ ಬಾಡಿಗೆದಾರರು ಮಾತಿನ ಚಕಮಕಿ ನಡೆಸಿದರು. ಕೊನೆಗೆ ಪೊಲೀಸರ ಸಹಾಯ ಪಡೆದು ಅಧಿಕಾರಿಗಳು ಅಂಗಡಿಗಳಿಗೆ ಬೀಗ ಜಡಿದರು.

ಈ ವೇಳೆ ಅಂಗಡಿ ಬಾಡಿಗೆದಾರ ನಿತಿನ್, ನಾವು ಬಾಡಿಗೆ ಸರಿಯಾಗಿ ಪಾವತಿ ಮಾಡಿಕೊಂಡು ಬರುತ್ತಿದ್ದೇವೆ. ಟೆಂಡರ್ ಪಡೆದವರು ಹಣ ಕಟ್ಟಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನಮ್ಮನ್ನು ಹೊರಗೆ ಹಾಕಿ ಅಂಗಡಿಗಳಿಗೆ ಬಲವಂತವಾಗಿ ಬೀಗ ಹಾಕಿಸಿದ್ದಾರೆ. ನಾವು ಲಕ್ಷಾಂತರ ಬಂಡವಾಳ ಹಾಕಿ ಇದನ್ನೇ ನಂಬಿ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದೇವೆ. ಅಧಿಕಾರಿಗಳು ಕೂಡಲೇ ನಮಗೆ ಅಂಗಡಿ ಬಾಗಿಲು ತೆಗೆದು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅಳಲು ತೋಡಿಕೊಂಡರು.

ಅಂಗಡಿಗಳಿಗೆ ಬೀಗ ಹಾಕಿಸುವ ಸಮಯದಲ್ಲಿ ನೂರಾರು ಜನರು ಜಮಾಯಿಸಿದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ರಮೇಶ್, ಐಜೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಜಾರ್ಜ್ ಪ್ರಕಾಶ್, ಚನ್ನಕೇಶವ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೆ.ಎಸ್.ಆರ್.ಟಿ.ಸಿ. ಕಾರ್ಮಿಕ ಘಟಕ ಅಧಿಕಾರಿ ಕೆ.ಕೆ. ಸೋಮಶೇಖರ, ಯಾಂತ್ರಿಕ ಶಿಲ್ಪಿ ಮುತ್ತುರಾಜು, ಕಾನೂನು ಅಧಿಕಾರಿ ಸೌಮ್ಯ, ಲೆಕ್ಕಾಧಿಕಾರಿ ಶಿವಾಜಿ, ಆಡಳಿತಾಧಿಕಾರಿ ಜಯರಾಮ್, ಭದ್ರತಾ ಜಾಗೃತ ಅಧಿಕಾರಿ ಸ್ಮಿತಾ, ಘಟಕ ವ್ಯವಸ್ಥಾಪಕ ಶಂಕರ್, ಭದ್ರತಾ ಅಧಿಕಾರಿ ಶೀಲಾ ಹಾಜರಿದ್ದರು.

--------

ಹೈಕೋರ್ಟಿನ ಆದೇಶದಂತೆ ಅಂಗಡಿ ಮಳಿಗೆಗಳಿಗೆ ಬೀಗ: ಪುರುಷೋತ್ತಮ್

ರಾಮನಗರ: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿನ ಅಂಗಡಿ ಮಳಿಗೆಗಳು ಮತ್ತು ವಾಹನ ಪಾರ್ಕಿಂಗ್ ಅನ್ನು ಗುತ್ತಿಗೆ ಪಡೆದಿರುವ ಉಮೇಶ್ ಎಂಬುವರು ಬಾಡಿಗೆ ಪಾವತಿಸದ ಕಾರಣ ಹೈಕೋರ್ಟಿನ ಆದೇಶದಂತೆ ಅಂಗಡಿಗಳಿಗೆ ಬೀಗ ಹಾಕಲಾಗಿದೆ ಎಂದು ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗ ನಿಯಂತ್ರಣಾಧಿಕಾರಿ ಪುರುಷೋತ್ತಮ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಗುತ್ತಿಗೆದಾರ ಉಮೇಶ್ ರವರು ನಟೇಶ್ ಎಂಬುವರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಆದರೆ ಅವರು ಸಂಸ್ಥೆಗೆ ಸುಮಾರು ಒಂದೂವರೆ ಕೋಟಿ ಪಾವತಿಸಬೇಕಿತ್ತು. ಈಗ ಎರಡು ಕೋಟಿಗೂ ಹೆಚ್ಚು ಬಾಡಿಗೆ ಆಗಿದೆ. ಕಳೆದ ಕೆಲವು ತಿಂಗಳ ಹಿಂದೆ ಅವರು ಹೈಕೋರ್ಟ್‌ಗೆ ಹೋದಾಗ ₹50 ಲಕ್ಷ ಪಾವತಿಸಲು ಸೂಚಿಸಿತ್ತು. ಆದರೆ , ಅವರು ₹25 ಲಕ್ಷ ಮಾತ್ರ ಪಾವತಿಸಿದ್ದರು. ಆ ಕೇಸ್‌ ಗೆ ಸಂಬಂಧಿಸಿದಂತೆ ಸಂಸ್ಥೆ ಪರವಾಗಿ ಆದೇಶ ಬಂದ ಕಾರಣ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದರು.

ಯಾವುದೇ ಪರವಾನಗಿ ಇಲ್ಲದಿದ್ದರೆ ಅಥವಾ ಒಪ್ಪಂದದ ಪ್ರಕಾರ ಅನುಮತಿ ಪಡೆಯದಿದ್ದರೆ ಅವರಿಗೆ ಯಾವುದೇ ಅಧಿಕಾರವಿಲ್ಲ. ರದ್ದತಿ ಆದೇಶದ ನಂತರ ಆ ಜಾಗವನ್ನು ಖಾಲಿ ಮಾಡಿಕೊಳ್ಳಬೇಕೆಂದು ರಿಜಿಸ್ಟರ್ಡ್ ಅಗ್ರಿಮೆಂಟ್ ಆಗಿದೆ. ಆ ಹಿನ್ನೆಲೆ ನಾವು ಅಂಗಡಿ ಬಾಡಿಗೆದಾರರಿಗೆ ಮೊದಲೇ ತಿಳಿಸಿದ್ದರೂ ಅವರು ಖಾಲಿ ಮಾಡದ ಕಾರಣ ಪೊಲೀಸರ ಸಹಾಯದೊಂದಿಗೆ ಅಂಗಡಿಗಳಿಗೆ ಬೀಗ ಹಾಕಲಾಗಿದೆ.

ಮುಂದಿನ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೆ ಅಂಗಡಿ ಬಾಡಿಗೆದಾರರು ಅಲ್ಲಿಯೇ ವ್ಯಾಪಾರ ಮಾಡಲು ಇಚ್ಚೆ ಪಟ್ಟರೆ ಸಂಸ್ಥೆ ನಿಯಮಾವಳಿ ಪ್ರಕಾರ ಈಗ ಟೆಂಡರ್ ದಾರರಿಗೆ ನೀಡುತ್ತಿರುವ ಬಾಡಿಗೆ ದರದಂತೆ ತಾತ್ಕಲಿಕ ಒಪ್ಪಂದ ಮಾಡಿಕೊಳ್ಳಬಹುದು. ಆನಂತರ ಅಂಗಡಿ ತೆರೆದು ವ್ಯಾಪಾರ ಮಾಡಲು ಅವರಿಗೆ ಮಾನವೀಯತೆ ಮೇರೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪುರುಷೋತ್ತಮ್ ಹೇಳಿದರು.