ರಾಜಕೀಯದಲ್ಲಿ ಕುಲಾಲ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕು, ಕುಲಾಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜಕೀಯದಲ್ಲಿ ಕುಲಾಲ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕು, ಕುಲಾಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟು ಇರುವ ಕುಲಾಲ/ ಕುಂಬಾರರಿಗೆ ಈವರೆಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇದು ಕುಲಾಲ- ಕುಂಬಾರರ ಸಮಾಜಕ್ಕೆ ಆಗಿರುವ ದೊಡ್ಡ ಅನ್ಯಾಯ ಎಂದರು.ಕುಲಾಲ ಸಮಾಜದ ಜನಸಂಖ್ಯೆಯನ್ನು ಪರಿಗಣಿಸಿ ಆಯಾ ರಾಜಕೀಯ ಪಕ್ಷಗಳಲ್ಲಿ ಇರುವವರು ಸೂಕ್ತ ಸ್ಥಾನಮಾನ ನೀಡಬೇಕು. ಮುಂದೆ ನಡೆಯುವ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾರ ಈ ವಿಚಾರವನ್ನು ಪರಿಗಣಿಸಬೇಕು. ವಿಧಾನಸಭೆ, ಪರಿಷತ್ ಹಾಗೂ ಸಂಸತ್ ಚುನಾವಣೆಯಲ್ಲಿಯೂ ಸೂಕ್ತ ಸ್ಥಾನಮಾನ ಸಿಗಬೇಕು ಎಂದವರು ಆಗ್ರಹಿಸಿದರು.ಕುಲಾಲ ಕುಂಬಾರರಿಗೆ ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಹೀಗಾಗಿ ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆಯ ಜತೆ 250 ಕೋಟಿ ರು. ಅನುದಾನ ಮೀಸಲಿರಿಸಬೇಕು ಎಂದು ಸದಾಶಿವ ಬಂಗೇರ ಒತ್ತಾಯಿಸಿದರು.ಟ್ರಸ್ಟ್ನ ಪದಾಧಿಕಾರಿಗಳಾದ ಮಂಜಪ್ಪ ಬಿಜೈ, ರಾಜೇಂದ್ರ ಕುಮಾರ್, ಟಿ.ಶೇಷಪ್ಪ ಮೂಲ್ಯ, ವಿಶ್ವನಾಥ ಬಂಗೇರ ಕುಳಾಯಿ, ಸೋಮಯ್ಯ ಹನೈನಡೆ, ಗಿರೀಶ್ ಎಂ.ಪಿ.ಕುತ್ತಾರ್, ದೇವಪ್ಪ ಕುಲಾಲ್ ಪಂಜಿಕಲ್ಲು ಇದ್ದರು.
