ಕುಮಾರಸ್ವಾಮಿ ಬಿಜೆಪಿ ವಕ್ತಾರ: ಸಿಎಂ ಸಿದ್ದರಾಮಯ್ಯ ಲೇವಡಿ

| Published : Jan 30 2024, 02:01 AM IST

ಕುಮಾರಸ್ವಾಮಿ ಬಿಜೆಪಿ ವಕ್ತಾರ: ಸಿಎಂ ಸಿದ್ದರಾಮಯ್ಯ ಲೇವಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಯ ವಕ್ತಾರರಾಗಿಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಯ ವಕ್ತಾರರಾಗಿಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿ ಮಾಡಿಕೊಂಡಿದ್ದೇವೆ ಅಂತಾ ಬಿಜೆಪಿಯನ್ನು ಕುಮಾರಸ್ವಾಮಿ ಹಾಡಿ ಹೊಗಳುತ್ತಿದ್ದಾರೆ ಎಂದರು.

ಆ ಪಕ್ಷದ ಹೆಸರು ಮುಂದೆ ಸೆಕ್ಯುಲರ್ ಅಂತಾ ಬೇರೆ ಇಟ್ಟುಕೊಂಡಿದ್ದಾರೆ. ಸೆಕ್ಯುಲರ್ ಅಂದ್ರೆ ಏನು ಅರ್ಥ ಎಂದ ಅವರು ಜಾತ್ಯತೀತ ಬಿಜೆಪಿ ಜೊತೆ ಸೇರಿಕೊಂಡರೆ ಇವರನ್ನು ಏನಂತ ಕರಿಬೇಕು ಎಂದರು.

ಮಂಡ್ಯದ ಕೆರೆಗೋಡಿನ ಕಂಬದಲ್ಲಿ ಯಾವುದೇ ಧರ್ಮದ ಧ್ವಜ ಹಾರಿಸುವುದಿಲ್ಲ ಅಂತಾ ಅನುಮತಿ ಪಡೆದು ಭಗವಾ ಧ್ವಜ ಹಾರಿಸಿದ್ದು ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ವಿರುದ್ಧ ಅಲ್ಲವಾ ಎಂದು ಪ್ರಶ್ನಿಸಿದರು.

ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸುವುದಾಗಿ ಅನುಮತಿ ಪಡೆದು ಭಗವಾ ಧ್ವಜ ಹಾರಿಸಿದ್ದಾರೆ. ಇದರ ಪರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಭಟನೆಗೆ ಹೋಗುತ್ತಾರೆಂದರೆ ಪ್ರಚೋಜನೆಯಲ್ಲವಾ ಎಂದರು.

ಚುನಾವಣಾ ರಾಜಕೀಯ ಲಾಭ ಪಡೆಯುವ ಸಲುವಾಗಿ ಮಾಡುತ್ತಿದ್ದಾರೆ ಎಂದ ಅವರು ಸರ್ಕಾರದ ವೈಫಲ್ಯ ಇಲ್ಲ ಎಂದರು. ಲಾಠಿ ಚಾರ್ಜ್ ಬಗ್ಗೆ ನನಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಪೊಲೀಸಿನವರಿಗೆ ಹೊಡೆದರು ಅನ್ನೋ ಮಾಹಿತಿ ಇದೆ. ಪೊಲೀಸರಿಗೆ ಹೊಡೆದರೆ ಏನು ಮಾಡುತ್ತಾರೆ ಎಂದರು.

ಧ್ವಜದ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿಯಾಗಿದೆ ಎಂದ ಕುಮಾರ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಸುಳ್ಳು ಹೇಳೋದು ಬಿಟ್ಟರೆ ಇನ್ನೇನು ಗೊತ್ತಿದೆ. ಯಾವುದಾದರೂ ಅವರು ಹೇಳಿದ್ದನ್ನು ಸಾಬೀತು ಮಾಡಿದ್ದಾರಾ ಎಂದ ಅವರು ಆರೋಪ ಮಾಡಬೇಕು ಅಂತಾ ಮಾಡುತ್ತಾರೆ ಎಂದರು.

ಬಿಜೆಪಿಯವರಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲುವ ಭಯ ಬಂದಿದೆ. ಆ ಭಯದಿಂದ ಇವೆಲ್ಲ ಪ್ರಚೋದನೆಗಳನ್ನ ಮಾಡುತ್ತಿದ್ದಾರೆ. ಯಾವುದೇ ವಿಚಾರ ಇಲ್ಲದೇ ಇದ್ದರೂ ಅಲ್ಲಿ ಇಶ್ಯೂ ಮಾಡಿ ಕೋಮುವಾದ ಸೃಷ್ಟಿಸುತ್ತಿದ್ದಾರೆ ಎಂದರು.

ನಾವು 136 ಜನ ಶಾಸಕರಿದ್ದೀವಿ, ಶೇ.43 ಮತ ಗಳಿಕೆ ಮಾಡಿದ್ದೇವೆ. ಅವರಿಗೆ ಶೇ.37 ಬಂದಿದೆ. ಬಿದ್ದೋಗೋಕೆ ಹೇಗೆ ಸಾಧ್ಯ ಆಗುತ್ತದೆ ಎಂದರು. ಯಾರೇ ಕಾನೂನು ಕೈಗೆತ್ತಿಕೊಂಡರೂ ಸರ್ಕಾರ ಸಹಿಸುವುದಿಲ್ಲ, ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಫೋಟೊತಮಗೆ ಕೊಟ್ಟ ಕತ್ತಿಯನ್ನು ತೋರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ