ಕುಮಾರಸ್ವಾಮಿ ಸರ್ಟಿಫಿಕೇಟ್ ಅಗತ್ಯವಿಲ್ಲ: ಸಚಿವ ಚಲುವರಾಯಸ್ವಾಮಿ

| Published : Jan 06 2025, 01:00 AM IST

ಕುಮಾರಸ್ವಾಮಿ ಸರ್ಟಿಫಿಕೇಟ್ ಅಗತ್ಯವಿಲ್ಲ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನಡೆದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವುದು ಪಕ್ಷದ ಆಡಳಿತ ವೈಖರಿಗೆ ಸಾಕ್ಷಿ. ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿಯ ಆರ್.ಅಶೋಕ್, ವಿಜಯೇಂದ್ರ ಅವರುಗಳು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್‍ಯಗಳ ಬಗ್ಗೆ ಸರ್ಟಿಫಿಕೇಟ್ ನೀಡಬೇಕಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬಗ್ಗೆ ಕುಮಾರಸ್ವಾಮಿ ಅವರ ಸರ್ಟಿಫಿಟೇಕ್ ಅಗತ್ಯವಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಪಟ್ಟಣದ ಡಾ.ಜಯವಾಣಿ ಮಂಚೇಗೌಡ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ನಡೆದ ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವುದು ಪಕ್ಷದ ಆಡಳಿತ ವೈಖರಿಗೆ ಸಾಕ್ಷಿ. ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿಯ ಆರ್.ಅಶೋಕ್, ವಿಜಯೇಂದ್ರ ಅವರುಗಳು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್‍ಯಗಳ ಬಗ್ಗೆ ಸರ್ಟಿಫಿಕೇಟ್ ನೀಡಬೇಕಿಲ್ಲ ಎಂದರು.

ಮಾಜಿ ಶಾಸಕ ಮಂಚೇಗೌಡರ ಕುಟುಂಬ ಇಡೀ ಜಿಲ್ಲೆಗೆ ತಮ್ಮದೇ ಆದ ವ್ಯಕ್ತಿತ್ವವನ್ನು ಒಳಗೊಂಡಿದೆ. ಮದ್ದೂರು ಕ್ಷೇತ್ರ ಸೇರಿ ಇಡೀ ಜಿಲ್ಲೆಗೆ ಜನಪ್ರಿಯತೆ ಮತ್ತು ಗೌರವ ಹೊಂದಿದೆ. ಇಂತಹ ಕುಟುಂಬದಲ್ಲಿರುವ ಮಾಜಿ ಶಾಸಕ ಮಹೇಶ್‌ಚಂದ್ ಮತ್ತು ಸಹೋದರರಿಗೆ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ನಿಧನ ಸಂದರ್ಭದಲ್ಲಿ ಅನಾರೋಗ್ಯ ಮತ್ತು ಕೆಲವು ಕಾರ್‍ಯಗಳ ಒತ್ತಡದಿಂದ ಅಂತ್ಯಕ್ರಿಯೆಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ವೈಯಕ್ತಿಕವಾಗಿ ಕುಟುಂಬಕ್ಕೆ ಧೈರ್‍ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.

ಈ ವೇಳೆ ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ದಿವಾಕರ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ. ರಘು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.

ವಂಚನೆ ಪ್ರಕರಣ: ನ್ಯಾಯಕ್ಕಾಗಿ ಎಚ್‌ಡಿಕೆಗೆ ದೂರುದಾರರ ಮೊರೆ

ಕನ್ನಡಪ್ರಭ ವಾರ್ತೆ ಮಂಡ್ಯ

ಐಶ್ವರ್ಯಗೌಡ ವಂಚನೆ ಪ್ರಕರಣದಲ್ಲಿ ಸಿಲುಕಿರುವ ರವಿಕುಮಾರ್‌ ಹಾಗೂ ಪೂರ್ಣಿಮಾ ಅವರು ನ್ಯಾಯಕ್ಕಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮೊರೆ ಹೋಗಿದ್ದಾರೆ.

ಕಳೆದ ಎಂಟು ವರ್ಷದ ಹಿಂದೆ ರವಿಕುಮಾರ್‌ ಮತ್ತು ಪೂರ್ಣಿಮಾ ಅವರಿಂದ 9 ಕೋಟಿ ರು. ಗೋಲ್ಡ್‌ ಪಡೆದು ಐಶ್ವರ್ಯ ವಂಚಿಸಿದ್ದರು. 55 ಲಕ್ಷ ರು. ಹಣ ಪಡೆದು ವಾಪಸ್‌ ನೀಡಿರಲಿಲ್ಲ. ಈ ಸಂಬಂಧ ಐಶ್ವರ್ಯ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂತ್ರಸ್ತರು ನ್ಯಾಯ ದೊರಕಿಸಿಕೊಡುವಂತೆ ಮೊರೆ ಹೋಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದು, ಸಿರೀಯಸ್ ಆಕ್ಷನ್ ತೆಗೆದುಕೊಳ್ಳುತ್ತಾರೆ‌. ಎಂಟು ವರ್ಷದ ಹಿಂದೆಯೇ ಮೋಸಹೋಗಿರುವ ನೀವು ಮೊದಲೇ ನನಗೆ ನೀವು ಯಾಕೆ ಹೇಳಲಿಲ್ಲ. ಬಹಳ ತಡವಾಗಿ ಈಗ ಹೇಳುತ್ತಿದ್ದೀರಾ. ನೀವು ಕೊಟ್ಟಿರುವ ದೂರಿನಲ್ಲಿ ಅನಿತಾ, ನಿಖಿಲ್ ಹೆಸರೂ ಹೇಳಿದ್ದೀರಾ ಎಂದ ಎಚ್‌ಡಿಕೆ, ನಿಮ್ಮ ಪರ ಧ್ವನಿ ಎತ್ತುತ್ತೇನೆ. ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.