ಸಾರಾಂಶ
ಬಾಗಲಕೋಟೆ: ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಸ್ತನ್ಯಪಾನಸ್ನೇಹಿ ಆಸ್ಪತ್ರೆ ಎಂದು ರಾಷ್ಟ್ರೀಯ ಮಾನ್ಯತಾ ಕೇಂದ್ರದಿಂದ (ನ್ಯಾಕ್) ಮಾನ್ಯತೆ ದೊರೆತಿದೆ. ಸ್ತನ್ಯಪಾನ ಸ್ನೇಹಿ ಆಸ್ಪತ್ರೆ ಯೋಜನೆಯಡಿ (ಬಿ.ಎಫ್.ಎಚ್.ಐ) ದೆಹಲಿಯ ರಾಷ್ಟ್ರೀಯ ಮಾನ್ಯತಾ ಕೇಂದ್ರ ಪರಿವೀಕ್ಷಣೆ ನಡೆಸಿ ಸ್ತನ್ಯಪಾನಸ್ನೇಹಿ ಮಾನ್ಯತೆ-ಗ್ರೇಡ್ 1 ಎಂದು ಪ್ರಮಾಣಪತ್ರ ನೀಡಿದೆ. ಕುಮಾರೇಶ್ವರ ಆಸ್ಪತ್ರೆ ಈ ಮಾನ್ಯತೆ ಪಡೆದ ರಾಜ್ಯದ ಎರಡನೇ ಮತ್ತು ಉತ್ತರ ಕರ್ನಾಟಕದ ಪ್ರಥಮ ಆಸ್ಪತ್ರೆ ಎನ್ನುವುದು ವಿಶೇಷವಾಗಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸ್ತನ್ಯಪಾನ ಉತ್ತೇಜಿಸಲು ಕೈಗೊಳ್ಳಲಾದ ವಿಶೇಷ ಕಾರ್ಯಕ್ರಮಗಳು ಮತ್ತು ಯೋಜನೆಗಳಿಂದಾಗಿ ಆಸ್ಪತ್ರೆಗೆ ಸ್ತನ್ಯಪಾನಸ್ನೇಹಿ ಆಸ್ಪತ್ರೆ ಎಂದು ರಾಷ್ಟ್ರೀಯ ಮಾನ್ಯತಾ ಕೇಂದ್ರದಿಂದ ಮಾನ್ಯತೆ ದೊರೆತಿದೆ. ಸ್ತನ್ಯಪಾನ ಸ್ನೇಹಿ ಆಸ್ಪತ್ರೆ ಯೋಜನೆಯಡಿ (ಬಿ.ಎಫ್.ಎಚ್.ಐ) ದೆಹಲಿಯ ರಾಷ್ಟ್ರೀಯ ಮಾನ್ಯತಾ ಕೇಂದ್ರ ಪರಿವೀಕ್ಷಣೆ ನಡೆಸಿ ಸ್ತನ್ಯಪಾನಸ್ನೇಹಿ ಮಾನ್ಯತೆ-ಗ್ರೇಡ್ 1 ಎಂದು ಪ್ರಮಾಣಪತ್ರ ನೀಡಿದೆ. ಕುಮಾರೇಶ್ವರ ಆಸ್ಪತ್ರೆ ಈ ಮಾನ್ಯತೆ ಪಡೆದ ರಾಜ್ಯದ ಎರಡನೇ ಮತ್ತು ಉತ್ತರ ಕರ್ನಾಟಕದ ಪ್ರಥಮ ಆಸ್ಪತ್ರೆ ಎನ್ನುವುದು ವಿಶೇಷವಾಗಿದೆ.ಪ್ರಮಾಣಪತ್ರ ಸ್ವೀಕರಿಸಿ ಮಾತನಾಡಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ ಬಿ.ಎಫ್.ಎಚ್.ಐನಿಂದ ದೊರೆತ ಈ ಮಾನ್ಯತೆ ಕುಮಾರೇಶ್ವರ ಆಸ್ಪತ್ರೆಯ ಸೇವಾ ಗುಣಮಟ್ಟದ ಶ್ರೇಷ್ಠತೆಗೊಂದು ನಿದರ್ಶನವಾಗಿದೆ. ಮಕ್ಕಳಿಗೆ ತಾಯಿ ಮೊಲೆ ಹಾಲಿಗಿಂತ ಶ್ರೇಷ್ಠವಾದ ಆಹಾರ ಇನ್ನೊಂದಿಲ್ಲ. ಕುಮಾರೇಶ್ವರ ಆಸ್ಪತ್ರೆಯಲ್ಲಿ ಸ್ತನ್ಯಪಾನ ಕುರಿತು ತಾಯಂದಿರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸ್ತನ್ಯಪಾನ ಜಾಗೃತಿ ಕುರಿತಾದ ಅಭಿಯಾನ ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಲು ಈ ರಾಷ್ಟ್ರೀಯ ಮಾನ್ಯತೆಯಿಂದ ಪ್ರೇರಣೆ ಮತ್ತು ಸ್ಫೂರ್ತಿ ದೊರೆತಂತಾಗಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಚಿಕ್ಕಮಕ್ಕಳ ತಜ್ಞ ಡಾ.ಭುವನೇಶ್ವರಿ ಯಳಮಲಿ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ಆಶಾಲತಾ ಮಲ್ಲಾಪೂರ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ಪಲ್ಲವಿ ಚರಂತಿಮಠ, ಡಾ.ನಾಗರತ್ನ ಕುಂಟೋಜಿ ಮತ್ತು ತಂಡದವರ ಅವಿರತ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಈ ಮಾನ್ಯತೆ ಆಸ್ಪತ್ರೆಗೆ ಪ್ರಾಪ್ತವಾಗಿದೆ. ಈ ವಿಶೇಷ ಸಾಧನೆಗಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕರಾದ ಡಾ.ಭುವನೇಶ್ವರಿ ಯಳಮಲಿ, ಡಾ.ಆಶಾಲತಾ ಮಲ್ಲಾಪೂರ, ಡಾ.ಅಶೋಕ ಬಡಕಲಿ, ಡಾ.ಸೊಲಬಣ್ಣವರ್ ಮತ್ತು ವಿವಿಧ ವಿಭಾಗಗಳ ವೈದ್ಯರು ಉಪಸ್ಥಿತರಿದ್ದರು.