ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರಾಜ್ಯದಲ್ಲಿ ಕುಂಚಿಟಿಗ ಸಮುದಾಯದ ಜನಸಂಖ್ಯೆ 27 ಲಕ್ಷಕ್ಕೂ ಅಧಿಕವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 23 ಸಾವಿರ ಮತದಾರರಿದ್ದು, ರಾಜಕೀಯವಾಗಿ ಕುಂಚಿಟಿಗ ಸಮುದಾಯಕ್ಕೆ ಪ್ರಬಲ ಅಸ್ತಿತ್ವ ಅತ್ಯಗತ್ಯ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದರು.ತಾಲೂಕು ಕುಂಚಿಟಿಗರ ಸಂಘ, ಕುಂಚಿಟಿಗ ನೌಕರರ ಸಂಘ ಹಾಗೂ ತಾಲೂಕು ಕುಂಚಿಟಿಗ ಯುವ ಘಟಕದಿಂದ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕುಂಚಿಟಿಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಕುಂಚಿಟಿಗರ ಸಮುದಾಯ ಮುಖ್ಯವಾಹಿನಿಗೆ ಬರಬೇಕು. ಸಮುದಾಯದಿಂದ ನೆರವು ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮುದಾಯಕ್ಕೆ ಸೇವೆ ಸಲ್ಲಿಸಬೇಕು ಎಂದರು.ಕುಂಚಿಟಿಗರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಲಾಗುತ್ತಿದೆ. ಕೇಂದ್ರದಲ್ಲಿ ಒಳ ಮೀಸಲಾತಿ ವಿಂಗಡನೆ ಮಾಡುತ್ತಿರುವುದರಿಂದ ವಿಳಂಬವಾಗುತ್ತಿದೆ. ಮುಂದೆ ಕುಂಚಿಟಿಗ ಸಮುದಾಯವನ್ನು ಓಬಿಸಿಗೆ ಸೇರ್ಪಡೆ ಮಾಡುವ ವಿಶ್ವಾಸವಿದೆ. ವಿದ್ಯಾರ್ಥಿಗಳು ಅಂಕ ಗಳಿಸಿದರಷ್ಟೇ ಸಾಲದು, ಉತ್ತಮ ಸಂಸ್ಕಾರ ಕಲಿಯಬೇಕು. ತಂದೆ, ತಾಯಿ, ಪೋಷಕರ ಯೋಗ ಕ್ಷೇಮ ನೋಡಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಂಸ್ಕಾರ ಮುಖ್ಯ ಎಂದು ಹೇಳಿದರು.
ಸನ್ಮಾನ- ಪ್ರತಿಭಾ ಪುರಸ್ಕಾರ:
ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಯ್ಯ, ನಿವೃತ್ತ ಶಿಕ್ಷಕ ಎಂ.ಆರ್.ಚಂದ್ರಶೇಖರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರಿಗೆ ಸಂತಾಪ ಸೂಚಿಸಲಾಯಿತು.
ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಸಿ.ವಿ. ಲಕ್ಷ್ಮೀಪತಿ, ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುತ್ತುರಾಜು, ಪ್ರತಿಭಾ ಪುರಸ್ಕಾರ ದಾನಿಗಳಾದ ಎಸ್. ನಾಗರಾಜು ಕುಟುಂಬದ ಹರ್ಷಿತ್ ಗೌಡ, ತಾಲೂಕು ಕುಂಚಿಟಿಗರ ಸಂಘದ ಗೌರವ ಅಧ್ಯಕ್ಷ ಎಂ.ಆಂಜಿನಪ್ಪ, ಕಾರ್ಯಾಧ್ಯಕ್ಷ ಆರ್.ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಎಂ.ಎಚ್.ಮುತ್ತುರಾಜು, ಸಮಾಜ ಸೇವಕ ಆರ್. ಮುನಿರಾಜು, ನಿವೃತ್ತ ಮುಖ್ಯ ಶಿಕ್ಷಕ ಎಂ.ರಾಮಯ್ಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಎಸ್.ಸಿದ್ದಗಂಗಯ್ಯ, ಕುಂಚಿಟಿಗರ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಸಿದ್ದರಾಮಪ್ಪ, ಬಿ.ಕೆ.ಚಿಕ್ಕತಿಮ್ಮಯ್ಯ, ಕೃಷ್ಣಪ್ಪ, ಸಿ.ಎಚ್.ರಾಮಚಂದ್ರಯ್ಯ, ಎನ್.ನಂಜಾಂಬಿಕೆ, ಎಂ.ಆರ್.ಕೇಶವಮೂರ್ತಿ, ಎಚ್.ಹನುಮಂತರಾಯಪ್ಪ, ಹೆಂಜಾರಪ್ಪ, ಎಂ.ವಿ. ರಾಜ್ಕುಮಾರ್, ಕೇಶವಮೂರ್ತಿ, ವೆಂಕಟರಾಜು, ಶಿವಕುಮಾರ್ ಭಾಗವಹಿಸಿದ್ದರು.