ಕುಂದಾಪುರ: ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುತಿದ್ದ ಮೀನುಗಾರಿಕಾ ದೋಣಿಯೊಂದು ಕುಂದಾಪುರ ಮತ್ತು ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ ಐದು ಮೀನುಗಾರರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಿಸಿದ್ದಾರೆ.

ದೋಣಿಯಲ್ಲಿದ್ದ ಮೀನುಗಾರರಾದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಸುರಕ್ಷಿತವಾಗಿ ಪಾರಾಗಿದ್ದಾರೆ. ಇವರೆಲ್ಲರೂ ಉಕ ಜಿಲ್ಲೆಯ ಕುಮಟಾ ಮೂಲದವರು. ಉಡುಪಿ ಸಮೀಪದ ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ ಶ್ರೀ ದುರ್ಗಾಪರಮೇಶ್ವರಿ ದೋಣಿಯ ತಳಭಾಗಕ್ಕೆ ಬುಧವಾರ ರಾತ್ರಿ ಬಂಡೆಯಂತಹ ಯಾವುದೋ ವಸ್ತು ಡಿಕ್ಕಿ ಹೊಡೆದು, ದೋಣಿ ಒಡದು ನೀರು ಒಳಪ್ರವೇಶಿಸಿತು. ಮೀನುಗಾರರು ನೀರನ್ನು ಹೊರ ಚೆಲ್ಲಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ನೀರು ತುಂಬುತ್ತಿದ್ದಂತೆ ದೋಣಿಯ ಎಂಜಿನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ನಂತರ ಮಲ್ಪೆ ಬಂದರಿಗೆ ಮೊಬೈಲ್‌ ನಿಂದ ಮಾಹಿತಿ ನೀಡಲಾಯಿತು. ತಕ್ಷಣ ಧಾವಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೀನುಗಾರರನ್ನು ರಕ್ಷಿಸಿದರು. ನಂತರ ಶ್ರೀ ಕೃಷ್ಣ ಎಂಬ ಇನ್ನೊಂದು ದೋಣಿಗೆ ಹಗ್ಗ ಕಟ್ಟಿ ಶ್ರೀ ದುರ್ಗಾಪರಮೇಶ್ವರಿ ದೋಣಿಯನ್ನು ಗಂಗೊಳ್ಳಿ ಬಂದರಿನ ಕಡೆಗೆ ಎಳೆದುಕೊಂಡು ಹೋಗುವ ಪ್ರಯತ್ನದಲ್ಲಿ ಬಲವಾದ ಗಾಳಿ ಮತ್ತು ಒರಟಾದ ಅಲೆಗಳಿಂದಾಗಿ ಹಗ್ಗ ತುಂಡಾಗಿ ದೋಣಿ ಸಂಪೂರ್ಣವಾಗಿ ಮುಳುಗಿತು. ಕ ಮಾಲೀಕ ನಾಗರಾಜ್ ಪುತ್ರನ್ ಅವರಿಗೆ ಅಂದಾಜು 60-65 ಲಕ್ಷ ರೂ. ನಷ್ಟ ಸಂಭವಿಸಿದೆ. ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.