ಸಾರಾಂಶ
ಮೃಗಶಿರಾ ಮಳೆ ಅಬ್ಬರಕ್ಕೆ ತಾಲೂಕಿನ ಜನತೆ ನಲುಗಿ ಹೋಗಿದ್ದು, ತಾಲೂಕಿನ ಕುಂದ್ರಳ್ಳಿ ಗ್ರಾಮವಂತೂ ಅಕ್ಷರಶಃ ಜಲಾವೃತವಾಗಿದೆ. ಜನರು ಮಳೆಯ ಆರ್ಭಟಕ್ಕೆ ಬೆಚ್ಚಿ ಬೀಳುವಂತಾಗಿದೆ. ಕಳೆದ ಹಲವು ದಶಕಗಳಿಂದ ಇಂತಹ ದೊಡ್ಡ ಮಳೆಯನ್ನು ಕಂಡಿದ್ದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು.
ಲಕ್ಷ್ಮೇಶ್ವರ: ಮೃಗಶಿರಾ ಮಳೆ ಅಬ್ಬರಕ್ಕೆ ತಾಲೂಕಿನ ಜನತೆ ನಲುಗಿ ಹೋಗಿದ್ದು, ತಾಲೂಕಿನ ಕುಂದ್ರಳ್ಳಿ ಗ್ರಾಮವಂತೂ ಅಕ್ಷರಶಃ ಜಲಾವೃತವಾಗಿದೆ. ಜನರು ಮಳೆಯ ಆರ್ಭಟಕ್ಕೆ ಬೆಚ್ಚಿ ಬೀಳುವಂತಾಗಿದೆ. ಕಳೆದ ಹಲವು ದಶಕಗಳಿಂದ ಇಂತಹ ದೊಡ್ಡ ಮಳೆಯನ್ನು ಕಂಡಿದ್ದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು.
ಕುಂದ್ರಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆಯ ವೇಳೆಗೆ ಬಂದಪ್ಪಳಿಸಿದ ಮೃಗಶಿರಾ ಮಳೆಯು ಇಡಿ ಗ್ರಾಮವನ್ನೆ ನಲುವಂತೆ ಮಾಡಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಭಾಗದಿಂದ ಅಪಾರ ಪ್ರಮಾಣದ ಮಳೆ ನೀರು ತಗ್ಗು ಪ್ರದೇಶಗಳಲ್ಲಿನ ೨೪ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತು. ಅಲ್ಲದೆ ಇಕ್ಕಟ್ಟಾದ ರಸ್ತೆಗಳೆಲ್ಲವೂ ನೀರಿನಿಂದ ಆವೃತ್ತವಾಗಿದ್ದವು. ಚರಂಡಿಗಳು ಮುಚ್ಚಿಕೊಂಡಿದ್ದರಿಂದ ನೀರು ನೇರವಾಗಿ ರಸ್ತೆಯಿಂದ ತಗ್ಗು ಪ್ರದೇಶಗಳಿಗೆ ನುಗ್ಗಿ ಅನೇಕ ಮನೆಗಳಿಗೆ ಮೀರು ನುಗ್ಗುವಂತಾಗಿದೆ.ವಿಷಯ ತಿಳಿದ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರು ರಾತ್ರಿ ೧೧ ಗಂಟೆಯ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿ ಮಳೆಯ ನೀರು ನುಗ್ಗಿದ ಮನೆಗಳ ಪರಿಶೀಲನೆ ನಡೆಸಿದರು. ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡಿ ನೀರು ಹೊರಹಾಕಲು ಕುಟುಂಬಸ್ಥರು ಪರದಾಡಿದರು. ನಂತರ ತಹಸೀಲ್ದಾರ್ ಅವರು ಸರ್ಕಾರಿ ಶಾಲೆಯಲ್ಲಿ ಆ ಕುಟುಂಬಗಳಿಗೆ ಸ್ಥಳಾವಕಾಶ ಅವಕಾಶ ಕಲ್ಪಿಸಿಕೊಟ್ಟರು.
ಈ ವೇಳೆ ಬಟ್ಟೂರ ಪಿಡಿಒ ಎಂ.ಎನ್. ಮಾದರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಮಸ್ಯೆ ಪರಿಹಾರದ ಕುರಿತು ಚರ್ಚಿಸಿದರು. ಗ್ರಾಮದ ಚೆನ್ನವೀರಪ್ಪ ಪಲ್ಲೇದ, ಚನ್ನಬಸವ್ವ ಹಾಲಪ್ಪ ಹೂಗಾರ, ನೀಲವ್ವ ಫಕ್ಕೀರೇಶ ಹೂಗಾರ, ನಿಂಗವ್ವ ಯಲ್ಲಪ್ಪ ಗೌರಿ, ಬಸನಗೌಡ ಪಾಟೀಲ, ಗೋಣೆಪ್ಪಗೌಡ ಪಾಟೀಲ, ಚಿಕ್ಕುಸಾಬ್ ನದಾಫ್, ದುದ್ದುಸಾಬ್ ನದಾಫ್ ಸೇರಿದಂತೆ ೨೪ ಮನೆಗಳಿಗೆ ನೀರು ನುಗ್ಗಿತ್ತು. ನಿಂಗವ್ವ ಫಕ್ಕೀರೇಶ ಗೌರಿ ಅವರು ಮನೆಯೊಳಗೆ ನೀರು ಬರದಂತೆ ಉಸುಕು ತುಂಬಿದ ಚೀಲಗಳನ್ನು ಬಾಗಿಲಿಗೆ ಅಡ್ಡ ಇಟ್ಟಿದ್ದರೂ ಕೂಡ ನೀರು ಚೀಲಗಳ ಮೇಲಿಂದ ಮನೆಗೆ ನುಗ್ಗಿದೆ. ಏಕಾಏಕಿ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಮನೆಯಲ್ಲಿ ಇದ್ದವರೆಲ್ಲ ಹೆದರಿದ್ದೆವು ಎಂದು ನೀಲವ್ವ ಹೂಗಾರ ಪರಿಸ್ಥಿತಿಯನ್ನು ವಿವರಿಸಿದರು. ಕುಂದ್ರಳ್ಳಿಗೆ ಧಾವಿಸಿದ ಅಧಿಕಾರಿಗಳ ತಂಡ: ಲಕ್ಷ್ಮೇಶ್ವರ ತಾಲೂಕಿನ ನೋಡಲ್ ಅಧಿಕಾರಿ ಅಮಿತ್ ಬಿದರಿ, ತಹಸೀಲ್ದಾರ್ ವಾಸುದೇವ ಸ್ವಾಮಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪಿಡಿಒ ಎಂ.ಎನ್. ಮಾದರ, ಕಂದಾಯ ನಿರೀಕ್ಷಕ ನದಾಫ, ಗ್ರಾಮ ಆಡಳಿತಾಧಿಕಾರಿ ಮಲ್ಲಿಗವಾಡ ಸೇರಿದಂತೆ ಮತ್ತಿತರ ಅಧಿಕಾರಿಗಳ ತಂಡ ಗುರುವಾರ ಕುಂದ್ರಳ್ಳಿ ಗ್ರಾಮಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.ಲಕ್ಷ್ಮೇಶ್ವರ ಪಟ್ಟಣದಲ್ಲಿನ ಲಂಡಿ ಹಳ್ಳಿ, ಇಟ್ಟಿಗೆರೆ ಸೇರಿದಂತೆ ವಿವಿಧ ಮಳೆಯಿಂದ ಬಾಧೆಗೊಳಗಾಗುವ ಪ್ರದೇಶಗಳಿಗೆ ಬೇಟಿ ನೀಡಿ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಾಹಿತಿ ನೀಡಿ ಮಳೆ ಬಂದು ಮತ್ತೆ ಮನೆಗಳಿಗೆ ನೀರು ಸಂದರ್ಭದಲ್ಲಿ ನಿವಾಸಿಗಳಿಗಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸೂಚನೆ ನೀಡಲಾಗಿದೆ. ಅದರೊಂದಿಗೆ ಮನೆಗಳಿಗೆ ನೀರು ನುಗ್ಗದಂತೆ ಶಾಶ್ವತ ಪರಿಹಾರ ಕುರಿತು ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.