ಕುಶಾಲನಗರ: ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಲು, ಶಿಕ್ಷಣದ ಬಗ್ಗೆ ಕುತೂಹಲ ಉಂಟುಮಾಡಲು ಇಂತಹ ಪರಿಣಾಮಕಾರಿ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ತುಂಬಾ ಹಳೆಯ ಕಟ್ಟಡವನ್ನು ಪುನರುಜ್ಜೀವನಗೊಳಿಸಿ ಈ ಭಾಗದ ಬಡ ವರ್ಗದ ಮಕ್ಕಳಿಗೆ ಆಶಾದಾಯಕ ವಾತಾವರಣ ಕಲ್ಪಿಸಿರುವುದು ಶ್ಲಾಘನೀಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದ್ದಾರೆ.ಗುಡ್ಡೆಹೊಸೂರು ಗ್ರಾಪಂ ವಿಶೇಷ ಅನುದಾನದಡಿ ನಾಲ್ಕೂವರೆ ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರ-1ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಅಗತ್ಯ ಮಾನದಂಡಗಳ ಅನುಸಾರವಾಗಿ ಆದ್ಯತೆ ಮೇರೆಗೆ ಇಲ್ಲಿಗೆ ಖಾಯಂ ಶಿಕ್ಷಕಿಯ ನೇಮಕಾತಿ ಮಾಡಬೇಕೆನ್ನುವ ಪೋಷಕರ ಒತ್ತಾಸೆಯಂತೆ ಸ್ಥಳೀಯರನ್ನೇ ಶಿಕ್ಷಕಿಯಾಗಿ ನೇಮಿಸುವ ಕುರಿತು ಆಯ್ಕೆ ಪಟ್ಟಿ ಪರಿಶೀಲಿಸಲಾಗುವುದು ಎಂದರು.ಈ ಸಂದರ್ಭ ಮಾತನಾಡಿದ ಮಾದಾಪಟ್ಟಣದ ದಾಮೋದರ್, 4 ದಶಕಗಳ ಹಳೆಯದಾದ ಅಂಗನವಾಡಿ ಕೇಂದ್ರಕ್ಕೆ ಕಳೆದ 3 ದಶಕಗಳಿಂದ ಕಾಯಂ ಶಿಕ್ಷಕರ ನೇಮಕಾತಿಯಾಗಿಲ್ಲ. ಶಿಕ್ಷಕರಿಲ್ಲದೆ ಹಲವು ವರ್ಷ ಈ ಕೇಂದ್ರಕ್ಕೆ ಬೀಗ ಜಡಿಯಲಾಗಿತ್ತು. ಸ್ಥಳೀಯರಿಗೆ ಆದ್ಯತೆ ನೀಡಿ ಶಿಕ್ಷಕಿಯಾಗಿ ನೇಮಕಾತಿ‌ ಮಾಡಬೇಕಿದೆ. ಆ ಮೂಲಕ ಮಾತ್ರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ. ಜೊತೆಗೆ ಸಹಾಯಕಿ ನೇಮಕಾತಿ ಕೂಡ ಅಗತ್ಯವಿದೆ ಎಂದು ಆಗ್ರಹಿಸಿದರು. ಪೋಷಕಿ ಶಶಿಕಲಾ ಮತ್ತು ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ ಅವರು ಮಾತನಾಡಿ, ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಹಿಸುವುದಕ್ಕೆ ಹಿಂಜರಿಕೆ ಇತ್ತು. ಇದೀಗ ಕಟ್ಟಡಕ್ಕೆ ಕಾಯಕಲ್ಪ ದೊರೆತಿರುವುದು ಪೋಷಕರಲ್ಲಿ ಆತಂಕ ದೂರ ಮಾಡಿದೆ ಎಂದರು.

ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಆದಂ, ಗುಡ್ಡೆಹೊಸೂರು ವಲಯ ಯುವ ಘಟಕ ಅಧ್ಯಕ್ಷ ವಿಜಯ್, ಬೂತ್ ಅಧ್ಯಕ್ಷ ಎಚ್.ಕೆ . ಮಹೇಶ್, ಗ್ರಾಮಸ್ಥರಾದ ಬಸವರಾಜು ಎಂ.ಎಂ., ಎಂ.ಎಲ್. ಪ್ರಕಾಶ್, ಎಂ.ಆರ್. ರವಿ, ಶಿಕ್ಷಕಿ ರೂಪಶ್ರೀ ಇದ್ದರು.