ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಪಟ್ಟಣ ಪಂಚಾಯಿತಿಯ ಎರಡನೇಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಕೈ ಸೇರುವುದು ಖಚಿತವಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ ಪಿ ಶಶಿಧರ್ ತಿಳಿಸಿದ್ದಾರೆ.ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಚುನಾವಣೆಯನ್ನು ರದ್ದುಗೊಳಿಸಲು ನ್ಯಾಯಾಲಯದ ಮೂಲಕ ಕೆಲವರು ಪ್ರಯತ್ನ ನಡೆಸಿದ್ದು ಇದೀಗ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡಿದ್ದು ಈ ತಿಂಗಳ 25 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ತಮ್ಮ ಪಕ್ಷಕ್ಕೆ ಅವಶ್ಯಕತೆ ಇರುವ ಬಹುಮತ ಇರುವುದಾಗಿ ಅವರು ಹೇಳಿದರು.
ಇತ್ತೀಚೆಗೆ ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಬಿಜೆಪಿ ಪ್ರಮುಖರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಾಲೂಕು ದಂಡಾಧಿಕಾರಿಗಳೊಂದಿಗೆ ನಡೆಸಿದ ವರ್ತನೆ ಸರಿಯಲ್ಲ ಇದು ಅಶೋಕ್ ಅವರ ಹುದ್ದೆಯ ಘನತೆಗೆ ತಕ್ಕುದಲ್ಲ ಎಂದರು.ಪ್ರತಿನಿತ್ಯ ನೇಮಕದ ಅಧಿಕಾರ ಲಭಿಸಿರುವ ಇಬ್ಬರು ಸದಸ್ಯರಿಗೆ ನಿಯಮಾನುಸಾರ ಮತದಾನ ಮಾಡುವ ಹಕ್ಕು ಲಭಿಸಿದೆ. ಅದನ್ನು ಚುನಾವಣಾ ಅಧಿಕಾರಿಗಳು ಕಾರ್ಯಗತ ಮಾಡುವ ಸಂದರ್ಭ ಅನಾವಶ್ಯಕ ಗೊಂದಲ ಮಾಡಿರುವುದು ಸರಿಯಲ್ಲ ಎಂದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಪ್ರಮೋದ್ ಮುತ್ತಪ್ಪ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಪಕ್ಷದ ಮೂಲಕ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಆಯ್ಕೆ ಆಗುವುದು ಖಚಿತ ಎಂದರು.ಈಗಾಗಲೇ ತಮ್ಮ ಪಕ್ಷದಲ್ಲಿ ಅಗತ್ಯವಾಗಿ ಬೇಕಾಗಿರುವ ಬಹುಮತ ಸಂಖ್ಯೆ ಇರುವುದಾಗಿ ಅವರು ಅಂಕಿ ಅಂಶಗಳನ್ನು ನೀಡಿದರು.
ಜೆಡಿಎಸ್ ಪಕ್ಷದ ಸದಸ್ಯರು ತಮ್ಮೊಂದಿಗೆ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಬಗ್ಗೆ ಕೂಡ ಅವರು ಸ್ಪಷ್ಟನೆ ನೀಡಿದರು.ಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ ಜಯಲಕ್ಷ್ಮಿ ಚಂದ್ರ, ಎಂ ಕೆ ದಿನೇಶ್, ಶೇಕ್ ಕಲಿಮುಲ್ಲಾ, ನಾಮನಿರ್ದೇಶಿತ ಸದಸ್ಯರಾದ ಜಗದೀಶ್ , ನವೀನ್, ಪದ್ಮ, ಕಾರ್ಮಿಕ ಘಟಕದ ಅಧ್ಯಕ್ಷರಾದ ಶಿವಶಂಕರ್ ಇದ್ದರು.