ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಮೈಸೂರು ಜಿಲ್ಲೆಗಳ ಗಡಿಭಾಗ ಕುಶಾಲನಗರ ಚುನಾವಣಾ ವಾಹನ ತಪಾಸಣಾ ಕೇಂದ್ರದಲ್ಲಿ ಗುರುವಾರ ಸಮರ್ಪಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2. 92 ಲಕ್ಷ ರು. ನಗದು ಹಣ ವಶಪಡಿಸಿಕೊಳ್ಳಲಾಗಿದೆ.ಗಡಿ ಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಒಂದರಲ್ಲಿ ಹಣ ಪತ್ತೆಯಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣೆ ಅಧಿಕಾರಿ ಪೂವಯ್ಯ ನೇತೃತ್ವದ ತಂಡ ಹಣ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚುನಾವಣಾ ಕೇಂದ್ರದ ತಂಡದ ಸದಸ್ಯರಾದ ಮಹಾದೇವ್, ಅಭಿಷೇಕ್ ಹಾಗೂ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಸುಬ್ರಮಣಿ ಸಿಬ್ಬಂದಿ ಸಮಂತ, ಜಯಪ್ರಕಾಶ್, ಸತೀಶ್ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.ಸುಳ್ಳು ಸುದ್ದಿ ಪೋಸ್ಟ್: ಇಬ್ಬರ ಮೇಲೆ ದೂರು ದಾಖಲುಬಿಜೆಪಿಯ ಯಮುನಾ ಚಂಗಪ್ಪ ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ತಮ್ಮ ಖಾತೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಸುದ್ದಿಯನ್ನು ಹರಿ ಬಿಟ್ಟಿರುವುದನ್ನು ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಅವರು ಜಿಲ್ಲಾ ಚುನಾವಣಾ ಅಧಿಕಾರಿಯವರಿಗೆ ದೂರ ನೀಡಿದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂಜಾಗ್ರತ ಕ್ರಮವಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡದಂತೆ ಕಾಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಯಮುನಾ ಚಂಗಪ್ಪ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.ಇದೇ ರೀತಿ ಮಡಿಕೇರಿಯ ಐ.ಜಿ.ಚಿಣ್ಣಪ್ಪ ಎಂಬವರು ಫೇಸ್ಬುಕ್ನಲ್ಲಿ ಪ್ರಧಾನಮಂತ್ರಿಯವರ ಭಾವಚಿತ್ರವನ್ನು ಅಸಂಬದ್ಧವಾಗಿ ಹಾಗೂ ಅವಹೇಳನಕಾರಿಯಾಗಿ ಚಿತ್ರಿಸಿರುವುದನ್ನು ಪೋಸ್ಟ್ ಮಾಡಿರುವ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ನೀಡಿದ ದೂರಿನ ಅನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡುಡು ಅವರ ಮೇಲೂ ಕಲಂ 107 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.ಯಮುನಾ ಚಂಗಪ್ಪ ಹಾಗೂ ಐ.ಜಿ.ಚಿಣ್ಣಪ್ಪ ಅವರಿಂದ ಮುಂದಿನ ದಿನಗಳಲ್ಲಿ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡದಂತೆ ಗುಡ್ ಬಾಂಡ್ ಬಿಹೇವಿಯರ್ ಅನ್ನು ಕೂಡ ಬರೆಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.