ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರದ ಕ್ರೈಸ್ಟ್ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಪುಟ್ಟ ಮಕ್ಕಳಿಂದ ಸೈಕಲ್ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಕುಶಾಲನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರದ ಕ್ರೈಸ್ಟ್ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಪುಟ್ಟ ಮಕ್ಕಳಿಂದ ಸೈಕಲ್ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಕೋಣಮಾರಿಯಮ್ಮ ದೇವಾಲಯ ಬಳಿಯಿಂದ ಮಕ್ಕಳು ಸೈಕಲ್ ಮೂಲಕ ಜಾಥಾ ನಡೆಸಿ ಬಿತ್ತಿಫಲಕ ಹಿಡಿದು ಜನರಲ್ಲಿ ಪರಿಸರ ಬಗ್ಗೆ ಅರಿವು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಚಂದ್ರಮೋಹನ್ ಜಾಥಾಕ್ಕೆ ಚಾಲನೆ ನೀಡಿ ಶುಭ ಕೋರಿದರು. ಕುಶಾಲನಗರದ ಮುಖ್ಯ ರಸ್ತೆಗಳಲ್ಲಿ ತೆರಳಿದ ಸೈಕಲ್ ಜಾಥಾ ಪಟ್ಟಣದ ಗಣಪತಿ ದೇವಾಲಯ ತನಕ ತೆರಳಿ ನಂತರ ಕಾರು ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

ಕಾರು ನಿಲ್ದಾಣ ಆವರಣದಲ್ಲಿ ನಡೆದ ಸರಳ ಸಭ ಕಾರ್ಯಕ್ರಮದಲ್ಲಿ ವಿಶ್ವ ಮಟ್ಟದ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಷಿಪ್ ನಲ್ಲಿ ಚಿನ್ನದ ಪದಕ ವಿಜೇತ ಬಾಲಕಿ ಆಜ್ಞಾ ಅಮಿತ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪುಟಾಣಿಗಳೊಂದಿಗೆ ಪರಿಸರ ಜಾಗೃತಿ ಬಗ್ಗೆ ಮಾತುಗಳನ್ನು ಹಂಚಿಕೊಂಡಳು. ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಮಕ್ಕಳಲ್ಲಿ ಪರಿಸರ ಪ್ರೇಮ ಸೃಷ್ಟಿಯಾಗಬೇಕು. ಪ್ರತಿ ಮಕ್ಕಳು ತಮ್ಮ ಹುಟ್ಟುಹಬ್ಬಕ್ಕೆ ಗಿಡವೊಂದನ್ನು ನೆಟ್ಟು ಅದನ್ನು ಪೋಷಿಸಿ ಬೆಳೆಸುವಂಥ ಕೆಲಸ ಆಗಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ನದಿ ಪರಿಸರ ಪ್ರಕೃತಿ ನಾಶವಾಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದ ಚಂದ್ರಮೋಹನ್ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾಲ್ಗೊಂಡ ಮಕ್ಕಳ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ತಾಪಂ ಮಾಜಿ ಸದಸ್ಯ ಸತೀಶ್ ಕುಂದರ್, ಮಕ್ಕಳು ಶಿಕ್ಷಣದೊಂದಿಗೆ ಪರಿಸರ ಪ್ರಕೃತಿ ಬಗ್ಗೆ ಜ್ಞಾನ ಹೊಂದಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಸಂಧ್ಯಾ ಗಣೇಶ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಸ್ಥೆಯ 50ಕ್ಕೂ ಅಧಿಕ ಮಕ್ಕಳು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.ಕುಶಾಲನಗರ ಕಾರು ಮಾಲೀಕರು ಚಾಲಕರ ಸಂಘದ ಅಧ್ಯಕ್ಷರಾದ ಉದಯ್ ನಿವೃತ್ತ ಅರಣ್ಯ ಅಧಿಕಾರಿ ಮೋಹನ್ ರಾಜ್, ಅರವಿಂದ ಬಾಬು, ಶರಣ್, ಕರ್ನಾಟಕ ರಕ್ಷಣಾ ವೇದಿಕೆ ಮಡಿಕೇರಿ ಕ್ಷೇತ್ರದ ಪ್ರಮುಖರಾದ ಆನಂದ್ ನಗರಾಧ್ಯಕ್ಷ ಡಿ.ಆರ್. ಯೋಗೇಶ್ ಸಂಸ್ಥೆಯ ಪ್ರಾಂಶುಪಾಲರಾದ ದೋರ್ತಿ ವಾಸ್, ಸಂಸ್ಥೆಯ ಶಿಕ್ಷಕಿಯರು, ಸಂಘ ಸಂಸ್ಥೆಗಳ ಪ್ರಮುಖರಿದ್ದರು.