ಕುಶಾಲನಗರ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಶಿಬಿರ

| Published : Aug 13 2025, 02:31 AM IST

ಸಾರಾಂಶ

ರೋಟರಿ ಕ್ಲಬ್‌ ಕುಶಾಲನಗರ ಹಾಗೂ ಇನ್ನರ್‌ ವೀಲ್‌ ಕ್ಲಬ್‌ ಆಶ್ರಯದಲ್ಲಿ ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ಲಸಿಕೆ ಶಿಬಿರವನ್ನು ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರರೋಟರಿ ಕ್ಲಬ್ ಕುಶಾಲನಗರ ಹಾಗೂ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ತಡೆಗಟ್ಟುವ ಲಸಿಕೆ ಶಿಬಿರವನ್ನು ಕುಶಾಲನಗರ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಯಿತು.ಯುವತಿಯರು ಹಾಗೂ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಕಡಿಮೆ ದರದಲ್ಲಿ ಒಟ್ಟು 120 ಚುಚ್ಚು ಮದ್ದನ್ನು ನೀಡಲಾಯಿತು.

ಶಿಬಿರವನ್ನು ಉದ್ಘಾಟಿಸಿದ ಡಾ. ಹರಿ ಶೆಟ್ಟಿ, ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆಯ ಬಗ್ಗೆ ವಿವರಿಸಿದರು. ಗರ್ಭಕಂಠ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿದೆ. ಎಚ್‌ಪಿವಿ ವೈರಸ್‌ನಿಂದ ಉಂಟಾಗುವ ಈ ರೋಗವನ್ನು ಸರಿಯಾದ ವಯಸ್ಸಿನಲ್ಲಿ ನೀಡುವ ಲಸಿಕೆಯಿಂದ ಬಹುಮಟ್ಟಿಗೆ ತಡೆಯಬಹುದು. 9 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದರೆ ಭವಿಷ್ಯದಲ್ಲಿ ಈ ರೋಗದ ಅಪಾಯ ಕಡಿಮೆ ಆಗುತ್ತದೆ. ಜಾಗೃತಿ ಹಾಗೂ ಮುನ್ನೆಚ್ಚರಿಕೆಯೇ ಈ ರೋಗ ನಿವಾರಣೆಗೆ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಿದರು.

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಲ್ಲಿ ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆ ಮೂಲಕ ಜಿಲ್ಲಾ ಯೋಜನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷ ರೇಷ್ಮಾ ನವೀನ್, ನಿಕಟ ಪೂರ್ವ ಅಧ್ಯಕ್ಷ ಚಿತ್ರ ರಮೇಶ್, ಖಜಾಂಚಿ ಶೀನಾ ಪ್ರಕಾಶ್ ಹಾಗೂ ಸಂಸ್ಥೆಯ ಸದಸ್ಯರಾದ ವಿನುತಾ, ಅಂಕಿತ, ಮೌನ ಭೋಜಣ್ಣ ಮತ್ತಿತರು ಇದ್ದರು.