ಕೇಂದ್ರ ಸರ್ಕಾರವು ಕರ್ನಾಟಕ ಕೇಸರಿ ಜಗನ್ನಾಥರಾವ್‌ ಜೋಶಿ ಹುಟ್ಟೂರು, ಬಂಡಾಯ ನಗರಿ ನರಗುಂದ ಮಾರ್ಗವಾಗಿ ರೈಲ್ವೆ ಮಾರ್ಗ ನಿರ್ಮಿಸಲು ಕಡೆಗಣಿಸುತ್ತಿರುವುದು ವಿಷಾದದ ಸಂಗತಿ.

ನರಗುಂದ: ತಾಲೂಕು ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದನೆ ಮಾಡದಿರುವುದು ನೋವು ತಂದಿದೆ ಎಂದು ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನನಂದಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಾರಾಟ ಸಮಿತಿ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಕರ್ನಾಟಕ ಕೇಸರಿ ಜಗನ್ನಾಥರಾವ್‌ ಜೋಶಿ ಹುಟ್ಟೂರು, ಬಂಡಾಯ ನಗರಿ ನರಗುಂದ ಮಾರ್ಗವಾಗಿ ರೈಲ್ವೆ ಮಾರ್ಗ ನಿರ್ಮಿಸಲು ಕಡೆಗಣಿಸುತ್ತಿರುವುದು ವಿಷಾದದ ಸಂಗತಿ. ಜನಸಂಘ ಹಾಗೂ ಆರ್‌ಎಸ್‌ಎಸ್ ಸಂಘಟನೆ ಕಟ್ಟಿ ಬೆಳೆಸಿದ ದಿ. ಜಗನ್ನಾಥರಾವ್ ಜೋಶಿ ಅವರಿಗೆ ಅವಮಾನಕರವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಆರೋಪಿಸಿದರು. ಕನ್ನಡಪರ ಸಂಘಟನೆಯ ಮುಖಂಡ ರಾಘವೇಂದ್ರ ಗುಜಮಾಗಡಿ ಮಾತನಾಡಿ, ಕುಷ್ಟಗಿಯಿಂದ ಘಟಪ್ರಭಾವರೆಗೆ ನೂತನ ರೈಲ್ವೆ ಮಾರ್ಗಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಸಚಿವರು, ಸಂಸದರು ಹಾಗೂ ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನು ಭೇಟಿ ಮನವಿ ಸಲ್ಲಿಸಿದರೂ ಬೇಡಿಕೆ ಕಡೆಗಣಿಸಲಾಗಿದೆ ಎಂದರು.

ಕುಷ್ಟಗಿಯಿಂದ ಘಟಪ್ರಭಾ ನೂತನ ರೈಲ್ವೆ ಮಾರ್ಗದ ಬಗ್ಗೆ ಸಾಕಷ್ಟು ಸಲ ಮನವರಿಕೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿವರ ಸರ್ಕಾರದ ಸಂಸದರಿಗೆ ಮನವಿ ಮಾಡಲಾಗಿದೆ. ಇನ್ನೂವರೆಗೆ ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆ.ಆರ್. ಕದಂ, ಮಾರುತಿ ಬೋಸಲೆ, ಶಿವಯೋಗಿ ಬೆಂಡಿಗೇರಿ, ಸಂಗಪ್ಪ ಪೂಜಾರ, ವೆಂಕಟೇಶ ಚಿತ್ರಗಾರ, ನಂದೀಶ ಮಠದ, ರೈಲ್ವೆ ಹೋರಾಟ ಸಮಿತಿ ಸದಸ್ಯರು ಇದ್ದರು.