ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಕುಟುಗನಳ್ಳಿ ಗ್ರಾಮದ ಬಳಿ ಕುಲಕರ್ಣಿ ಕುಟುಂಬ ವಿತರಣೆ ಮಾಡುವ ಅಸ್ತಮಾ ಔಷಧವನ್ನು ಶನಿವಾರ ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸ್ವೀಕಾರ ಮಾಡಿದರು. ಬೆಳಗ್ಗೆ 7.47ಕ್ಕೆ ಸರಿಯಾಗಿ ಬೆಲ್ ಬಾರಿಸುತ್ತಿದ್ದಂತೆ ಔಷಧ ಸ್ವೀಕರಿಸಿದರು.ಬೆಳಗಿನ ಜಾವ ನಾಲ್ಕು ಗಂಟೆಯಿಂದ ಬಂದಿದ್ದ ಎಲ್ಲ ಜನರಿಗೂ ಔಷಧ ವಿತರಣೆ ಮಾಡಲಾಯಿತು. ವಿಪರೀತ ಜನ ಬಂದಿದ್ದರಿಂದ ನಿಗದಿತ ಸ್ಥಳ ಸಾಲದೆ ಹೊಲದಲ್ಲಿ ಸೇರಿದಂತೆ ರಸ್ತೆಯುದ್ದಕ್ಕೂ ಜನರು ತಂಗಿದ್ದರು. ಅವರು ಇದ್ದಲ್ಲಿಗೆ ಔಷಧವನ್ನು ಸ್ವಯಂ ಸೇವಕರು ವಿತರಣೆ ಮಾಡಿದರು.
ಅಶೋಕ ಕುಲಕರ್ಣಿ ಅವರು ಔಷಧ ವಿತರಣೆ ಮಾಡಿದ ಬಳಿಕ ಒಂದಿಷ್ಟು ಸೂಚನೆಗಳನ್ನು ನೀಡಿದರು. ಇದಾದ ಮೇಲೆ ಬೆಲ್ ಬಾರಿಸುತ್ತಿದ್ದಂತೆ ಎಲ್ಲರೂ ಔಷಧ ಸ್ವೀಕಾರ ಮಾಡಿ, ಅಲ್ಲಿಂದ ತೆರಳಿದರು.ಕುಟುಗನಳ್ಳಿ ಗ್ರಾಮದ ಕಿರಿದಾದ ರಸ್ತೆಯಲ್ಲಿ ಸಾವಿರಾರು ವಾಹನಗಳು, ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರಿಂದ ರಸ್ತೆಗಳು ತುಂಬಿತುಳುಕುತ್ತಿದ್ದವು. ಏಕಕಾಲದಲ್ಲಿ ಜನರು ವಾಪಸ್ ತೆರಳಿದ್ದರಿಂದ ಟ್ರಾಫಿಕ್ ಸಮಸ್ಯೆ ಆಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ನಿಯಂತ್ರಣ ಪೊಲೀಸರು ಹರಸಾಹಸ ಮಾಡಿದರು.
ನಾನಾ ರಾಜ್ಯದಿಂದ ಆಗಮನನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹತ್ತಾರು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೋಗಿಗಗಳು ಆಗಮಿಸಿದ್ದರು. ಅಲ್ಲದೆ ರಾಜ್ಯದ ಮೂಲೆ ಮೂಲೆಯಿಂದ ರೋಗಿಗಳು ಆಗಮಿಸಿದ್ದರು. ರೋಗಿಗಳು ಹಾಗೂ ಅವರ ಜತೆಗೆ ಬಂದಿದ್ದವರು ಸೇರಿ ಸುಮಾರು ಲಕ್ಷಕ್ಕೂ ಅಧಿಕ ರೋಗಿಗಳು ಬಂದಿದ್ದರು ಎಂದು ಅಂದಾಜಿಸಲಾಯಿತು. ಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ವರ್ಷ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಸ್ಥಳೀಯರಿಗಿಂತ ಹೊರಗಿನ ಜಿಲ್ಲೆಯವರೇ ಅಧಿಕ ಸಂಖ್ಯೆಯಲ್ಲಿ ಬಂದಿದ್ದು ವಿಶೇಷ. ಸ್ಥಳೀಯರು ಇಲ್ಲಿ ಹೋಗಿ ಔಷಧ ಸ್ವೀಕಾರ ಮಾಡುವುದು ತೀರಾ ವೀರಳ. ಬೇರೆಡೆಯಿಂದಲೇ ಬರುವವರು ಅಧಿಕ. 60 ವರ್ಷಗಳಿಂದ ಕುಲಕರ್ಣಿ ಕುಟುಂಬ ಔಷಧ ವಿತರಣೆ ಮಾಡುತ್ತ ಬರುತ್ತಿದೆ. ವ್ಯಾಸರಾಯರು ಔಷಧ ವಿತರಣೆ ಮಾಡುತ್ತಿದ್ದರು. ಆದರೆ, ಈಗ ಅವರ ಪುತ್ರ ಅಶೋಕ ಕುಕರ್ಣಿ ಅವರು ವಿತರಣೆ ಮಾಡುತ್ತಾರೆ.ಇದಕ್ಕಾಗಿ ಯಾವುದೇ ಶುಲ್ಕ ಪಡೆಯುವುದಿಲ್ಲ. ಲಕ್ಷಾಂತರ ರುಪಾಯಿ ಖರ್ಚಾದರೂ ಸ್ವತಃ ತಾವೇ ಖರ್ಚು ಮಾಡಿ ಔಷಧಿ ತಯಾರು ಮಾಡುತ್ತಾರೆ. ಆದರೆ, ಇದಕ್ಕಾಗಿ ಯಾರಿಂದಲೂ ದೇಣಿಗೆ ಸಹ ಪಡೆಯುವುದಿಲ್ಲ. ಆದರೆ, ಔಷಧ ಸ್ವೀಕಾರ ಮಾಡಲು ಬಂದವರೇ ಸ್ವಯಂಪ್ರೇರಿತವಾಗಿ ಒಂದಷ್ಟು ಹಣವನ್ನು ತಮಗೆ ತಿಳಿದಂತೆ ನೀಡುತ್ತಾರೆ.
ಲಕ್ಷಕ್ಕೂ ಅಧಿಕ ಜನಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ವರ್ಷ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಹೊಸಬರು ಅಧಿಕ ಸಂಖ್ಯೆಯಲ್ಲಿ ಬಂದಿದ್ದಾರೆ. ಲಕ್ಷಕ್ಕೂ ಅಧಿಕ ಜನರು ಬಂದಿದ್ದಾರೆ.
ಅಶೋಕ ಕುಲಕರ್ಣಿ ಔಷಧ ವಿತರಕರು